

ಚೆನ್ನೈನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಟ-ರಾಜಕಾರಣಿ ವಿಜಯ್ ವಿರುದ್ಧ ನಿರ್ದೇಶಕ ಅಮೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕಿ ಇದೀಗ 'ಮಹಿಳಾ ದಿನಾಚರಣೆ' ಎಂಬ ನಾಚಿಕೆಗೇಡಿನ ರಾಜಕೀಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಬರೆದಿದ್ದಾರೆ. ಸರಿಮಾಡಲಾಗದ ಭಿನ್ನಾಭಿಪ್ರಾಯಗಳು, ವ್ಯಭಿಚಾರ ಮತ್ತು ಮಾನಸಿಕ ಒತ್ತಡದ ಆರೋಪಗಳನ್ನು ಉಲ್ಲೇಖಿಸಿ ನಟ ವಿಜಯ್ ವಿರುದ್ಧ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
2021ರಲ್ಲಿ ವಿಜಯ್ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ. ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಅವರನ್ನು ಮೌಖಿಕ ತಿರಸ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಸಹ ಉಲ್ಲೇಖಿಸಿದ್ದಾರೆ. ಇನ್ನು ನಿರ್ಮಾಪಕ ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಜೊತೆ ಕಾಣಿಸಿಕೊಂಡ ನಂತರ ಈ ಚರ್ಚೆಗಳು ತೀವ್ರಗೊಂಡಿವೆ.
ಇದಕ್ಕೂ ಮೊದಲು, ನಟಿ ಮತ್ತು ಬಿಗ್ ಬಾಸ್ ತಮಿಳು ಖ್ಯಾತಿಯ ಸನಮ್ ಶೆಟ್ಟಿ ಕೂಡ ನಟನ ಕೃತ್ಯಗಳಿಗಾಗಿ ಟೀಕಿಸಿದ್ದರು. ಎಕ್ಸ್ ನಲ್ಲಿ "ಇಲ್ಲ! ಇದು ದಾರಿ ಅಲ್ಲ. ಪತ್ನಿಯ ದುಃಖವನ್ನು ಈ ರೀತಿ ನಿರ್ಲಕ್ಷಿಸಲಾಗುವುದಿಲ್ಲ! ದೀರ್ಘಕಾಲದ ಅಭಿಮಾನಿಯಾಗಿ ಈ ಸಮಯದಲ್ಲಿ ನೋಡುವುದು ತೀವ್ರ ನಿರಾಶಾದಾಯಕವಾಗಿದೆ! ಎಂದು ಬರೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು, ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶನಿವಾರ ಮಾಮಲ್ಲಪುರಂನಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಮಾರಂಭದಲ್ಲಿ ಟಿವಿಕೆ ಮುಖ್ಯಸ್ಥ ಭಾಗವಹಿಸಲಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಣಾಳಿಕೆಯ ಭಾಗವಾಗಿ, ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಅವರು ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.
Advertisement