

ಪ್ಯಾನ್ ಇಂಡಿಯಾ ಚಿತ್ರ ಕೆಡಿ: ದ ಡೆವಿಲ್ನ ನೋರಾ ಫತೇರಿ ಮತ್ತು ಸಂಜಯ್ ದತ್ ಅಭಿನಯದ “ಸೆರಗು ಸರ್ಸೆ” ಹಾಡು ಅಸಭ್ಯ ಪದಗಳು ಮತ್ತು ಅಸಹ್ಯ ಸಾಹಿತ್ಯದ ಕಾರಣದಿಂದ ಭಾರೀ ವಿರೋಧಕ್ಕೆ ಗುರಿಯಾಗಿದೆ.
ಹಾಡಿನ ಸಾಲುಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೋಲ್ ಆಗುತ್ತಿದ್ದು, ರಾಷ್ಟ್ರೀಯ ಮಹಿಳ ಆಯೋಗ, ಫಿಲ್ಮ್ ಚೇಂಬರ್ ಗಳಲ್ಲಿ ದೂರು ಕೂಡ ದಾಖಲಾಗಿದೆ. ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ. ಆದರೆ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಆವೃತ್ತಿಗಳು ಇನ್ನೂ ಲಭ್ಯವಿವೆ.
ಈ ಹಾಡನ್ನು ಮೂಲತಃ ಚಿತ್ರದ ನಿರ್ದೇಶಕ ಪ್ರೇಮ್ ಬರೆದಿದ್ದು, ಅದನ್ನು ಹಿಂದಿಗೆ ರಕೀಬ್ ಆಲಂ ಭಾಷಾಂತರಿಸಿದ್ದಾರೆ.
ಹಾಡನ್ನು ಎಲ್ಲಾ ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಬೇಕು ಎಂಬ ಬೇಡಿಕೆಗಳ ನಡುವೆಯಲ್ಲಿ, ಪ್ರೇಮ್ ಅವರ ಪತ್ನಿ ರಕ್ಷಿತಾ ಇನ್ಸ್ಟಾಗ್ರಾಮ್ ನಲ್ಲಿ ಸರಣಿ ಪೋಸ್ಟ್ ಗಳನ್ನು ಹಂಚಿಕೊಂಡು ತಮ್ಮ ಪತಿ ನಿರ್ದೇಶಕ ಪ್ರೇಮ್ ಬೆಂಬಲಕ್ಕೆ ನಿಂತಿದ್ದಾರೆ. ಹಾಡಿನ ಬಗ್ಗೆ ಆಯ್ದ ಆಕ್ರೋಶ ಏಕೆ ಎಂಬ ಪ್ರಶ್ನೆ ಎತ್ತಿದ ಅವರು, ಟ್ರೋಲ್ಗಳು ಶಿಷ್ಟಾಚಾರದ ಮಿತಿಯನ್ನು ಮೀರುತ್ತಿವೆ ಎಂದು ಆರೋಪಿಸಿದರು.
ಒಂದು ಪೋಸ್ಟ್ ನಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ: “ಹೌದು, ನಾನು ಎಲ್ಲವನ್ನೂ ನೋಡಿದ್ದೇನೆ. ನೀವು ನನಗೆ ಟ್ಯಾಗ್ ಮಾಡುತ್ತಿರುವುದೂ ಗೊತ್ತಿದೆ. ಏನು ಬರೆಯಲಾಗಿದೆ, ಏನು ನಡೆಯುತ್ತಿದೆ ಎಂಬುದನ್ನೂ ನಾನು ತಿಳಿದಿದ್ದೇನೆ.
ನಾನು ಇದನ್ನು ಬೆಂಬಲಿಸುತ್ತೇನೆ ಅಥವಾ ವಿರೋಧಿಸುತ್ತೇನೆ ಎಂಬುದು ಮುಖ್ಯವಲ್ಲ. ‘ಪೀಲಿಂಗ್ಸ್’, ‘ಡ್ರೀಮುಮ್ ವೇಕಪ್ಮ್’, ‘ಚೋಲಿ ಕೆ ಪೀಚೆ’ ಅಥವಾ ಇಂತಹ ನೂರಾರು ಹಾಡುಗಳು ಬಂದಾಗ ಎಲ್ಲವೂ ಸರಿಯಾಗಿತ್ತು. ಸಂಪೂರ್ಣ ಸಿನಿಮಾವೇ ಲೈಂಗಿಕ ವಿಷಯದ ಬಗ್ಗೆ ಮಾತನಾಡಿದಾಗಲೂ ಸಮಸ್ಯೆ ಇರಲಿಲ್ಲ. ಆದರೆ ಕೆಡಿ ಚಿತ್ರದ ಒಂದು ಹಾಡೇ ದೊಡ್ಡ ಸುದ್ದಿಯಾಗುತ್ತಿದೆ. ನಾನು ಸಮರ್ಥಿಸಿಕೊಳ್ಳುತ್ತಿಲ್ಲ—ನಿಮ್ಮೆಲ್ಲರನ್ನು ಅರ್ಥಮಾಡಿಕೊಳ್ಳಲು ಕೇಳುತ್ತಿದ್ದೇನೆ.”
ಒಂದು ಹಾಡಿನ ಆಧಾರದ ಮೇಲೆ ಪ್ರೇಮ್ ಅವರ ನಿರ್ದೇಶನ ಬಗ್ಗೆ ಆಕ್ಷೇಪ ಎತ್ತುವುದು ಸರಿಯಲ್ಲ ಎಂದಿದ್ದಾರೆ.
ಪ್ರಶ್ನಿಸುವ ಹಕ್ಕಿದೆ, ಅವಮಾನ ಸರಿಯಲ್ಲ
ಒಂದು ಹಾಡು ಬಂದರೆ ಅವರು ಕೆಟ್ಟ ಬರಹಗಾರರಾಗುತ್ತಾರೆ ಎಂಬುದಿಲ್ಲ. ಕೆಲವು ಸಿನಿಮಾಗಳು ಚೆನ್ನಾಗಿ ನಡೆಯದಿದ್ದರೆ ಅವರು ಕೆಟ್ಟ ನಿರ್ದೇಶಕರಾಗುತ್ತಾರೆ ಎನ್ನುವುದೂ ತಪ್ಪು. ಅವರನ್ನು ಪ್ರಶ್ನಿಸುವ ಹಕ್ಕು ನಿಮಗಿದೆ, ಆದರೆ ಅವಮಾನಿಸುವ ಹಕ್ಕು ನಿಮಗಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿ ದಿನವೂ ಒಳ್ಳೆಯ, ಕೆಟ್ಟ, ಪ್ರಚೋದಕ ಹಾಡುಗಳು ಬರುತ್ತಿವೆ. ಇಂದಿನ ದಿನಗಳಲ್ಲಿ ಜನರು ಹಿಂಸಾತ್ಮಕ ಮತ್ತು ಲೈಂಗಿಕ ವಿಷಯಗಳನ್ನು ತೆರೆದ ಮನಸ್ಸಿನಿಂದ ನೋಡುತ್ತಿದ್ದಾರೆ. ಪ್ರೇಮ್ ಕೂಡ ನಿಮ್ಮಂತೆಯೇ ಒಬ್ಬ ಕನ್ನಡಿಗ. ಅವರನ್ನು ಪ್ರಶ್ನಿಸುವ ಹಕ್ಕು ನಿಮಗಿದೆ, ಆದರೆ ಅವಮಾನ ಮಾಡುವುದು ತಪ್ಪು ಎಂದು ರಕ್ಷಿತಾ ಹೇಳಿದ್ದಾರೆ.
ಇಂದಿನ ದಿನಗಳಲ್ಲಿ ಕನ್ನಡ ನಿರ್ದೇಶಕರಿಗೆ ತಮ್ಮ ಸಿನಿಮಾಗಳನ್ನು ಒಟಿಟಿ ಅಥವಾ ಚಾನೆಲ್ಗಳಿಗೆ ಮಾರುವುದು ದೊಡ್ಡ ಸವಾಲಾಗಿದೆ. ಜನರನ್ನು ಚಿತ್ರಮಂದಿರಗಳಿಗೆ ಕರೆತರುವುದು ತುಂಬಾ ಕಷ್ಟ. ಇದು ನಮ್ಮ ಕಥೆ ಮಾತ್ರವಲ್ಲ, ಸಂಪೂರ್ಣ ಸ್ಯಾಂಡಲ್ವುಡ್ನ ಪರಿಸ್ಥಿತಿ ಎಂದು ಕೂಡ ರಕ್ಷಿತಾ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಕೆಡಿ ಚಿತ್ರ ನಮ್ಮ ಮಗುವಿನಂತಿದೆ. ಕೊನೆಯಲ್ಲಿ ನಾವು ಸರಿಯಾದದ್ದನ್ನೇ ಮಾಡುತ್ತೇವೆ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಚಿತ್ರಪ್ರೇಮಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement