

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಹೊರಗೆ ಕರೆತರಲು ಅವರ ಪತ್ನಿ ವಿಜಯಲಕ್ಷ್ಮಿ ಮಾಡಿದ ಪ್ರಯತ್ನಗಳು ಹಿನ್ನಡೆಯಾಗಿದೆ.
ಕಂಡ ಕಂಡ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಹೋಮ, ಹವನ ಮಾಡಿದ್ರು, ದರ್ಶನ್ ಅವರನ್ನು ಜೈಲಿನಿಂದ ಹೊರಗೆ ತರಲು ಆಗುತ್ತಿಲ್ಲ. ಇನ್ನೂ ಒಂದು ವರ್ಷ ದರ್ಶನ್ ಗೆ ಜೈಲೇ ಗತಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದರಿಂದಾಗಿ ಕಾನೂನು ಹೋರಾಟ ನಡೆಸಿ ಹಿನ್ನಡೆ ಅನುಭವಿಸಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ದರ್ಶನ್ ಫೋಟೋ ಹಾಕಿ, ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದಾರೆ. ದರ್ಶನ್ ಅವರ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ ಅವರು ಅದಕ್ಕೆ ಭಾವುಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ದರ್ಶನ್ ಅವರ ಅಭಿನಯದ ‘ಲಂಕೇಶ್ ಪತ್ರಿಕೆ’ ಸಿನಿಮಾದ ಆ ಮೋಡದಿಂದ.. ಹಾಡಿನ ಕೊನೆಯ ಸಾಲುಗಳನ್ನ ಫೋಟೋ ಜೊತೆಗೆ ಜೋಡಿಸಿದ್ದಾರೆ. ಇದು ಮರೆಯದ ಹಾಡು.. ಮೌನಗಳೇ ಸಾಕ್ಷಿಗಳು.. ಇದು ಮುಗಿಯದ ನೆನಪು..ವಿರಹಗಳೇ ಗುರುತುಗಳು..” ಎಂದು ವಿಜಯಲಕ್ಷ್ಮಿ ಒಡೆದ ಹೃದಯದ ಸಿಂಬಲ್(ಬ್ರೋಕನ್ ಹಾರ್ಟ್) ಹಾಕಿದ್ದಾರೆ.
ದರ್ಶನ್ ಅವರಿಗೆ ಸೆರೆವಾಸದಿಂದ ಮುಕ್ತಿಯಿಲ್ಲ, ಬೇಲ್ ಇಲ್ಲ ಎಂಬ ನೋವಿನಲ್ಲಿ ಇಂದು ಭಾನುವಾರ ಮೇ 17ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರು ಸ್ಟೋರಿ ಹಂಚಿಕೊಂಡು ಬೇಸರ ಹೊರಹಾಕಿದ್ದಾರೆ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು 2003ರ ಮೇ 19 ರಂದು ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ಮೇ 19 ರಂದು ಆಚರಿಸಿಕೊಳ್ಳುತ್ತದೆ.
Advertisement