

ಚೆನ್ನೈ: ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಮತ್ತೆ ಪುನರುಚ್ಚರಿಸಿದ್ದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು, ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸನಾತನ ಧರ್ಮ ಅನ್ನುವುದು ಜೀವನದ ವಿಧಾನ. ನಾವು ಹೇಗೆ ಬದುಕಬೇಕೆಂಬುದನ್ನು ಸನಾತನ ಧರ್ಮ ಹೇಳಿಕೊಡುತ್ತದೆ. ತಪ್ಪು ಮಾಡಬೇಡ, ಖದೀಯ ಬೇಡ, ಮತ್ತೊಬ್ಬನ ಆಸ್ತಿಗೆ ಆಸೆ ಪಡಬೇಡ ಎಂಬುದು ಸನಾತನ ಧರ್ಮದಲ್ಲಿದೆ. ನಾವು ಮಕ್ಕಳಾಗಿದ್ದಾಗ ನಮ್ಮನ್ನು ತಂದೆ ತಾಯಿ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರಿಗೆ ವಯಸ್ಸಾದ ಕಾಲಕ್ಕೆ ನಾವು ಅವರನ್ನು ದೇವರಂತೆ ನೋಡಿಕೊಳ್ಳಬೇಕು ಅಂತ ಧರ್ಮ ಹೇಳುತ್ತದೆ. ಸನಾತನ ಧರ್ಮ ಬೇಡ ಅಂದರೆ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸುತ್ತಾರಾ. ಸನಾತನ ಅನ್ನುವುದು ಒಂದು ಧರ್ಮವಲ್ಲ. ಅದು ಜೀವನ ವಿಧಾನ. ಅದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಪರೋಕ್ಷವಾಗಿ ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್, ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು. ತಮಿಳುನಾಡಿನಿಂದ ಸನಾತನ ಧರ್ಮವನ್ನು ಸಂಪೂರ್ಣ ನಾಶ ಮಾಡಬೇಕು ಎಂದು ಹೇಳಿದರು.
ಸನಾತನ ನಿರ್ಮೂಲನೆ ಹೇಳಿಕೆ ಇದೇ ಮೊದಲೇನಲ್ಲ...
ಇನ್ನು ಸನಾತನ ನಿರ್ಮೂಲನೆ ಕುರಿತು ಡಿಎಂಕೆ ನಾಯಕರು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ 2023ರಲ್ಲಿಯೂ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ ಎಂದು ಹೇಳಿ, ಸನಾತನ ಧರ್ಮವನ್ನು ಬೇರುಸಹಿತ ಕಿತ್ತೊಗೆಯುವುದು ಮಾನವೀಯತೆ ಮತ್ತು ಸಮಾನತೆಯನ್ನು ಉಳಿಸುವಂತಾಗಿದೆ ಎಂದು ಹೇಳಿದ್ದರಿಂದ ದೇಶವ್ಯಾಪಿ ವ್ಯಾಪಕ ವಿವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
Advertisement