

ಸತತ 13ನೇ ವರ್ಷವೂ ಕಿಚ್ಚ ಸುದೀಪ್ ನಿರೂಪಕರಾಗಿರುವ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಈ ಬಾರಿ ಒಟ್ಟು 16 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದಾರೆ.
ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವು ಸ್ಪರ್ಧಿಗಳು ಈ ಬಾರಿ ದೊಡ್ಮನೆ ಪ್ರವೇಶಿಸಿದ್ದಾರೆ.
ಇನ್ನು ʻಪ್ರೇಮಕಾವ್ಯʼ ಮತ್ತು ʻಮಿಥುನ ರಾಶಿʼ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆದ್ದ ನಟಿ ವೈಷ್ಣವಿ ಕೌಂಡಿನ್ಯ ಅವರು ಸಹ ʻಬಿಗ್ ಬಾಸ್ ʼ ಅಖಾಡಕ್ಕೆ ಧುಮುಕಿದ್ದಾರೆ. ಬಣ್ಣದ ಲೋಕದಲ್ಲಿ ಸದಾ ನಗುತ್ತಾ, ಪ್ರೇಕ್ಷಕರನ್ನ ರಂಜಿಸುತ್ತಿದ್ದ ಈ ನಟಿಯ ಜೀವನದ ಹಿನ್ನೆಲೆ ಹಾಗೂ ಗ್ಲಾಮರ್ ಪ್ರಪಂಚದ ಹಿಂದಿರುವ ಕಹಿ ಸತ್ಯಗಳನ್ನ ʻಬಿಗ್ ಬಾಸ್ʼ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ.
ನಟಿ ವೈಷ್ಣವಿ ಅವರು ʻಬಿಗ್ ಬಾಸ್ʼ ವೇದಿಕೆಯಲ್ಲಿ ತಮ್ಮ ಜೀವನದ ಕಷ್ಟದ ದಿನಗಳನ್ನ ನೆನೆಸಿಕೊಂಡಿದ್ದು, “ನನ್ನ ಬಾಲ್ಯ, ಹಿನ್ನೆಲೆ ಬಗ್ಗೆ ಹೇಳಬೇಕೆಂದರೆ ನಾನು ನಮ್ಮ ಪೋಷಕರಿಗೆ ಒಬ್ಬಳೇ ಮಗಳು. ನಮ್ಮ ಮನೆಯಲ್ಲಿ ನಾನು, ಅಮ್ಮ ಹಾಗೂ ಅಜ್ಜಿ ಮಾತ್ರ ಇದ್ದೇವೆ. ನನ್ನ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೇ ನೋಡಿಲ್ಲ" ಎಂದು ತಮ್ಮ ನೋವು ಹಂಚಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕುಟುಂಬದಿಂದ ಪ್ರತ್ಯೇಕವಾಗಿ ಬಂದು ನೆಲೆಸಿದಾಗ, ಯಾರ ಹತ್ತಿರವೂ ಕೈಚಾಚಬಾರದು ಎಂಬ ದೃಢನಿರ್ಧಾರ ಮಾಡಿದೆ. ಎಷ್ಟೇ ಆಪ್ತರಿದ್ದರೂ ಯಾರ ಮನೆಗೂ ಹೋಗದೆ, ಸ್ವಂತ ಕಾಲಿನ ಮೇಲೆ ನಿಲ್ಲಲು ಸಾಕಷ್ಟು ಕಷ್ಟಪಟ್ಟಿದ್ದಾಗಿ ತಮ್ಮ ಗಟ್ಟಿ ಮನಸ್ಸಿನ ಕಥೆಯನ್ನ ವೈಷ್ಣವಿ ಹಂಚಿಕೊಂಡಿದ್ದಾರೆ.
ಕೇವಲ 16ನೇ ವಯಸ್ಸಿಗೆ ನಟನಾ ಪಯಣ ಆರಂಭಿಸಿದ ವೈಷ್ಣವಿ, ನಂತರ ʻಮಿಥುನ ರಾಶಿʼಯಲ್ಲಿ ಆಟೋ ಚಾಲಕಿ ʻರಾಶಿʼ ಪಾತ್ರದ ಮೂಲಕ ಮನೆಮಾತಾದರು. ನಟನೆಯ ಜೊತೆಗೆ ಸೈಕಾಲಜಿ ಮತ್ತು ಜರ್ನಲಿಸಂ ವಿಷಯದಲ್ಲಿ ಪದವಿ ಪೂರೈಸಿರುವ ಇವರು, ಭರತನಾಟ್ಯ ಕಲಾವಿದೆಯೂ ಹೌದು.
ಜೀವನದ ಎಲ್ಲ ನೋವು, ನಿಂದನೆ ಮತ್ತು ನಿರಂತರ ಓಟದ ನಡುವೆ ತಮಗೊಂದು ರಿಲ್ಯಾಕ್ಸೇಷನ್ ಹಾಗೂ ಬ್ರೇಕ್ ಬೇಕಿದ್ದರಿಂದಲೇ ʻಬಿಗ್ ಬಾಸ್ʼ ಮನೆಗೆ ಬಂದಿರುವುದಾಗಿ ವೈಷ್ಣವಿ ತಿಳಿಸಿದ್ದಾರೆ.