

ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಎಲಿಮನೇಷನ್ ಪ್ರಕ್ರಿಯೆ ಅಚ್ಚರಿಗೆ ಕಾರಣವಾಗಿದೆ. ಸ್ಪರ್ಧಿ ಪ್ರಥಮಾ ಪ್ರಸಾದ್ ದೊಡ್ಮನೆ ಪ್ರವೇಶಿಸದೇ ಫ್ಲೈಟ್ ಜರ್ನಿಯಲ್ಲೇ ಒಂದು ವಾರವಿದ್ದು ತಮ್ಮ ಬಿಗ್ಬಾಸ್ ಪ್ರಯಾಣ ಮುಗಿಸಿದ್ದಾರೆ.
ಖ್ಯಾತ ನಟಿ ವಿನಯ ಪ್ರಸಾದ್ ಪುತ್ರಿ, ನಟಿಯೂ ಆಗಿರುವ ಪ್ರಥಮ ಪ್ರಸಾದ್ ನಾಲ್ಕನೇ ಪ್ಯಾಸೆಂಜರ್ ಆಗಿ ಪ್ರಯಾಣ ಪ್ರಾರಂಭಿಸಿದ್ದರು. ಮೊದಲ ದಿನವೇ ಆಂಟಿ ಎಂದು ಕರೆದ ಹಿನ್ನೆಲೆಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಗೆ ಉಗಿದು ಸುದ್ದಿಯಾಗಿದ್ದರು.
ಬಳಿಕ ಈ ಸ್ಪರ್ಧಿ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿಲ್ಲ. ಅನೇಕ ಬಾರಿ ಪ್ರಥಮ ಗಟ್ಟಿಯಾಗಿ ಮಾತನಾಡಿರುವುದೂ ಇದೆ, ಶಾಂತತೆ ಕಾಪಾಡಿಕೊಂಡಿದ್ದೂ ಇದೆ. ಆದರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಪ್ರಥಮ ಎಡವಿದಂತಿದೆ. ಬಿಬಿಕೆ13 ಮೊದಲ ವಾರದಲ್ಲೇ ಎಲಿಮನೇಟ್ ಆಗಿ ವಾಪಸ್ ಮನೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ.
ಪ್ರಥಮಾ ಪ್ರಸಾದ್ ಅವರು ಕೇವಲ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳಾಗಷ್ಟೇ ಅಲ್ಲದೆ, ತಮ್ಮದೇ ಆದ ಪ್ರತಿಭೆಯಿಂದ ಗುರುತಿಸಿಕೊಂಡವರು. ಅತ್ಯುತ್ತಮ ಕಥಕ್ ನೃತ್ಯಪಟುವಾಗಿ ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಇವರು, ʻಅಮೃತವರ್ಷಿಣಿʼ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ʻಕರಿಮಣಿʼ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ʻಕರಿಮಣಿʼ ಧಾರಾವಾಹಿ ಬಳಿಕ ʻಬಿಗ್ ಬಾಸ್ ಕನ್ನಡ 13ʼರ ಮನೆಗೆ ಬಂದಿದ್ದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು.
ಸಾಮಾನ್ಯವಾಗಿ ಸ್ಪರ್ಧಿಗಳು ʻಬಿಗ್ ಬಾಸ್ʼ ಮನೆಗೆ ಪ್ರವೇಶಿಸಿ, ಹಲವು ದಿನಗಳ ಕಾಲ ಸಹ-ಸ್ಪರ್ಧಿಗಳೊಂದಿಗೆ ವಾಸಿಸಿ, ಟಾಸ್ಕ್ಗಳನ್ನ ಆಡಿ ಎಲಿಮಿನೇಷನ್ ಎದುರಿಸುತ್ತಾರೆ. ಆದರೆ, ʻಬಿಗ್ ಬಾಸ್ ಸೀಸನ್ 13ʼರ ಪ್ರೀಮಿಯರ್ ಹಾಗೂ ಮೊದಲ ವಾರದ ಟ್ವಿಸ್ಟ್ಗಳ ಭಾಗವಾಗಿ ಪ್ರಥಮಾ ಪ್ರಸಾದ್ ಅವರಿಗೆ ಮನೆಯ ಮುಖ್ಯ ಭಾಗವನ್ನ ಪ್ರವೇಶಿಸುವ ಅವಕಾಶವೇ ಸಿಗಲಿಲ್ಲ.ʻಬಿಗ್ ಬಾಸ್ ಕನ್ನಡʼದ ಇತಿಹಾಸದಲ್ಲೇ “ಮನೆಯೊಳಗೆ ಕಾಲಿಡದೇ ಮೊದಲ ವಾರದಲ್ಲೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ದಾಖಲೆಗೆ ಪ್ರಥಮಾ ಪ್ರಸಾದ್ ಪಾತ್ರರಾಗಿದ್ದಾರೆ.
ವೀಕೆಂಡ್ನ ʻಕಿಚ್ಚನ ಪಂಚಾಯಿತಿ'ಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್ ಪ್ರಕ್ರಿಯೆಯನ್ನ ವಿಭಿನ್ನ ರೀತಿಯಲ್ಲಿ ನಡೆಸಿಕೊಟ್ಟರು. ಫ್ಲೈಟ್ನಿಂದ ಸ್ಯೂಟ್ಕೇಸ್ ಕಳಿಸಿ ಒಬ್ಬೊಬ್ಬರನ್ನೇ ಒಳಗಡೆ ಕಳಿಸುವ ಮೂಲಕ ಎಲಿಮಿನೇಷನ್ ಕಾತುರವನ್ನ ಹೆಚ್ಚಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಆಸಿಯಾ ಸೇಫ್ ಆದರೆ, ನಂತರ ವೈಷ್ಣವಿ ಸೇಫ್ ಆದರು. ಅವರ ಬೆನ್ನಲ್ಲೇ ಧನುಷ್ ಮತ್ತು ಮಂಜು ಒಟ್ಟೊಟ್ಟಿಗೆ ಸೇಫ್ ಆದ್ರು. ತದನಂತರ, ಓಂ ಪ್ರಕಾಶ್ ರಾವ್ ಮತ್ತು ಅವಿನಾಶ್ ಕೂಡ ಸುರಕ್ಷಿತ ವಲಯ ಸೇರಿಕೊಂಡರು. ಕೊನೆಯಲ್ಲಿ ಕಂಟೆಸ್ಟೆಂಟ್ಗಳಾದ ಕಿರಣ್ ಶಾಸ್ತ್ರೀ ಮತ್ತು ಪ್ರಥಮಾ ಪ್ರಸಾದ್ ಉಳಿದುಕೊಂಡಿದ್ದರು. ಫೈನಲ್ ಆಗಿ ಪ್ರಥಮಾ ಪ್ರಸಾದ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದರು.
ಬಳಿಕ ವೇದಿಕೆಗೆ ಬಂದು ಮಾತನಾಡಿದ ಪ್ರಥಮಾ ಪ್ರಸಾದ್, “ನಾನು ನನ್ನ ಜೀವನದಲ್ಲಿ ಬೇಕಾದಷ್ಟು ಫ್ಲೈಟ್ಗಳನ್ನ ಹತ್ತಿದ್ದೇನೆ. ಆದರೆ, ಇಲ್ಲಿಗೆ ಬಂದಾಗ ಹಲವು ವಿಶೇಷ ವ್ಯಕ್ತಿಗಳ ಪರಿಚಯವಾಯ್ತು. ಈ ಎಲಿಮಿನೇಷನ್ ಅನ್ನು ನಾನು ಸೋಲು ಅಂತ ಎಂದಿಗೂ ತಿಳಿಯುವುದಿಲ್ಲ, ಬದಲಿಗೆ ಇದನ್ನೊಂದು ದೊಡ್ಡ ಕಲಿಕೆ ಎಂದುಕೊಳ್ಳುತ್ತೇನೆ” ಎಂದು ಹೇಳಿದರು.
ಕೊನೆಗೆ white gold ಕಂಪನಿಯಿಂದ 1 ಲಕ್ಷ ಸೇರಿದಂತೆ ಒಟ್ಟು 3 ಲಕ್ಷ ರೂ.ಗಳ ಚೆಕ್ ನೀಡುವ ಮೂಲಕ ಸುದೀಪ್, ಪ್ರಥಮಾ ಪ್ರಸಾದ್ ಅವರನ್ನು ದೊಡ್ಮನೆಯಿಂದ ಕಳುಹಿಸಿಕೊಟ್ಟರು.