

ಬೆಂಗಳೂರು: ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಸುದೀರ್ಘ ಸಿನಿಮಾ ಪಯಣದ ಹಲವು ಸಿಹಿ-ಕಹಿ ಘಟನೆಗಳು ಮತ್ತೆ ಚರ್ಚೆಗೆ ಬರುತ್ತಿವೆ.
ತಮ್ಮ ಸರಳತೆ, ಸಜ್ಜನಿಕೆ ಹಾಗೂ ಮಿತಭಾಷಿ ಸ್ವಭಾವದಿಂದ ಗುರುತಿಸಿಕೊಂಡಿರುವ ಅನಂತ್ ನಾಗ್ ಅವರ ಬದುಕಿನಲ್ಲೂ ಒಮ್ಮೆ ಭೀಕರ ಹತ್ಯೆ ಯತ್ನ ನಡೆದಿತ್ತು. ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಘಟನೆ ನಡೆದಿತ್ತು.
1996ರ ಮಾರ್ಚ್ 14ರಂದು ಈ ಘಟನೆ ನಡೆದಿತ್ತು. ಆಗ ಅನಂತ್ ನಾಗ್ ಅವರು ಖ್ಯಾತ ನಟರಾಗಿರುವುದರ ಜೊತೆಗೆ ಸಕ್ರಿಯ ರಾಜಕಾರಣಿಯೂ ಆಗಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಅವರಿಗೆ ರಾಜಕೀಯ ವಿರೋಧವೂ ಎದುರಾಗಿತ್ತು.
ಅಂದು ಮುಂಜಾನೆ ಎಂದಿನಂತೆ ತಮ್ಮ ಪುತ್ರಿ ಅದಿತಿಯನ್ನು ಶಾಲೆಗೆ ಕರೆದೊಯ್ಯಲು ಅನಂತ್ ನಾಗ್ ಸಿದ್ಧರಾಗಿದ್ದರು. ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಕಾರು ಚಲಿಸಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇಬ್ಬರು ಯುವಕರು ನಾಡಬಾಂಬ್ ಹಾಗೂ ಚಾಕು ಹಿಡಿದುಕೊಂಡು ಅವರ ಕಾರಿನ ಮೇಲೆ ದಾಳಿ ನಡೆಸಿದ್ದರು.
ಸಿನಿಮಾಗಳಲ್ಲಿ ಅತಿಯಾದ ‘ಹೀರೋಯಿಸಂ’ ತೋರಿಸದ ಅನಂತ್ ನಾಗ್ ಅವರು ನಿಜ ಜೀವನದಲ್ಲಿ ಹೀರೋಯಿಸಂ ತೋರಿಸಿದ್ದು ಅಲ್ಲದೆ, ತಮ್ಮನ್ನು ಕೊಲ್ಲಲು ಬಂದ ವ್ಯಕ್ತಿಯನ್ನೇ ತಾವೇ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಮಾರ್ಚ್ 14ರ ಮುಂಜಾನೆ, ಎಂದಿನಂತೆ ಅನಂತ್ ನಾಗ್ ಅವರು ತಮ್ಮ ಪುತ್ರಿ ಅದಿತಿಯನ್ನು ಶಾಲೆಗೆ ಬಿಡಲೆಂದು ಕರೆದುಕೊಂಡು ಹೋಗಲು ತಯಾರಾಗಿದ್ದರು. ಕಾರಿನಲ್ಲಿ ಮಗಳನ್ನು ಕುಳ್ಳರಿಸಿ ಕಾರು ಮೂವ್ ಮಾಡಿದ್ದರಷ್ಟೆ ಅಷ್ಟರಲ್ಲೇ ಇಬ್ಬರು ಯುವಕರು ಕೈಯಲ್ಲಿ ನಾಡಬಾಂಬು ಮತ್ತು ಚಾಕು ಹಿಡಿದುಕೊಂಡು ಅನಂತ್ ನಾಗ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದರು.
ಅನಂತ್ ನಾಗ್ ಅವರ ಅದೃಷ್ಟ ಚೆನ್ನಾಗಿದ್ದು ನಾಡಬಾಂಬ್ ದೊಡ್ಡಮಟ್ಟದ ಸ್ಪೋಟ ಮಾಡಲಿಲ್ಲ. ಆದರೆ ಆ ದುಷ್ಕರ್ಮಿಗಳ ಕೈಯಲ್ಲಿ ಚಾಕು ಇತ್ತು. ಆದರೆ ಜೊತೆಯಲ್ಲಿ ಮಗಳು ಇದ್ದು, ಅವಳಿಗೆ ಏನಾದರೂ ಮಾಡಿಬಿಡುತ್ತಾರೆಂಬ ಭಯದಲ್ಲಿ ಅನಂತ್ ನಾಗ್ ಹಾರಿ ಒಬ್ಬನ ಹೊಡೆದು ಉರುಳಿಸಿದರು. ಇನ್ನೊಬ್ಬ ಅಲ್ಲಿಂದ ತಪ್ಪಿಸಿಕೊಂಡು ಓಟ ಕಿತ್ತ, ಆದರೆ ಅನಂತ್ ನಾಗ್ ಅವನ ಹಿಂದೆ ಬಿದ್ದು ಓಡಿ ಹಿಡಿದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗಿನ ಆ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಆದರೆ ಈ ಘಟನೆ ಅನಂತ್ ನಾಗ್ ಹಾಗೂ ಅವರ ಕುಟುಂಬದ ಮೇಲೆ ಆಳವಾದ ಪರಿಣಾಮ ಬೀರಿತ್ತು. ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದ ಅನಂತ್ ನಾಗ್, ದಾಳಿಯ ಬಳಿಕ ಕುಟುಂಬದ ಸುರಕ್ಷತೆ ಕುರಿತು ಸದಾ ಆತಂಕವಿರುತ್ತಿತ್ತು ಎಂದು ಹೇಳಿದ್ದರು.