ದೊಡ್ಡ ಉದ್ಯಮಿಗಳ ಕೋಟಿಗಟ್ಟಲೆ ಕಪ್ಪುಹಣ ದರೋಡೆ ಮಾಡುವ ಶಿವನಿಗೆ (ಸುದೀಪ್) ನೋಟಿನ ವಾಸನೆ ಎಂದರೆ ವಿಶ್ವದ ಅದ್ಭುತ ಪರ್ಫ್ಯೂಮ್ ಎಂದು ನಂಬಿರುವವನು. ದರೋಡೆಯಾದ ಉದ್ದಿಮೆದಾರನ ಭಂಟ ಪೊಲೀಸ್ ಅಧಿಕಾರಿ ಕಿಶೋರ್ (ರವಿಶಂಕರ್). ಉದ್ದಿಮೆದಾರ ದೂರು ನೀಡದೆ ಇದ್ದರೂ ಸಿಕ್ಕ ವಿಡಿಯೋವೊಂದರ ಆಧಾರದ ಮೇರೆಗೆ ರಿಯಲ್ ಎಸ್ಟೇಟ್ ದಂಧೆ ನಡೆಸುವ ಸತ್ಯನನ್ನ (ಸುದೀಪ್), ಕಿಶೋರ್ ಕರೆತಂದು ಲಾಕಪ್ ನಲ್ಲಿ ಥಳಿಸುತ್ತಾನೆ. ಆದರೆ ತನ್ನ ಅವಳಿ ಸಹೋದರ ಶಿವ ಕಾಣೆಯಾದುದರ ಬಗ್ಗೆ ಸತ್ಯ ಮೊದಲೇ ದೂರು ನೀಡಿರುತ್ತಾನೆ. ಕಿಶೋರ್ ಅವರ ಪೊಲೀಸ್ ಠಾಣೆಯಿಂದಲೇ ಸುರಂಗ ಕೊರೆದು ಮತ್ತೊಬ್ಬ ಉದ್ದಿಮೆದಾರನ ಕಪ್ಪುಹಣದ ದರೋಡೆ ನಡೆಯುತ್ತಾನೆ ಶಿವ. ಸತ್ಯ ಮತ್ತು ಶಿವ ವಿಭಿನ್ನ ವ್ಯಕ್ತಿಗಳೇ ಅಥವಾ ಒಬ್ಬ ವ್ಯಕ್ತಿಯ ವಿಭಿನ್ನ ವ್ಯಕ್ತಿತ್ವಗಳೇ ಎಂಬ ದ್ವಂದ್ವದೊಂದಿಗೆ ಸಿನೆಮಾ ಮುಂದುವರೆದು, ಸತ್ಯನ ಜೊತೆಗೆ ಪ್ರೀತಿಗೆ ಬೀಳುವ ಶುಭ (ನಿತ್ಯಾ ಮೆನನ್) ಅವನ ಸಹೋದರ ಶಿವನ ಚಟುವಟಿಕೆಗಳನ್ನು ದ್ವೇಷಿಸುತ್ತಾಳೆ. ಶಿವ, ಸತ್ಯನ ಮತ್ತೊಂದು ವ್ಯಕ್ತಿತ್ವ ಎಂಬುದು ಶುಭಾಳಿಗೆ ತಿಳಿಯುವುದು ಹೇಗೆ? ಈ ದ್ವಂದ್ವ ವ್ಯಕ್ತಿತ್ವಕ್ಕೆ ಕಾರಣಗಳೇನು?