ಸಂತೆಯ ಸಂತ ಕಬೀರನ ಸಂದೇಶ

14 ಮತ್ತು 15ನೇ ಶತಮಾನದ ಕಾಶಿಯಲ್ಲಿ ಬದುಕಿದ್ದ ಸಂತ ಕಬೀರ 21 ನೇ ಶತಮಾನದ ಸಾಮಾಜಿಕ ಸನ್ನಿವೇಶದಲ್ಲಿಯೂ, ಅವನ ಪದಗಳ ಮೂಲಕ, ಅವನ ಪ್ರೇಮ ತತ್ವದ ಮೂಲಕ, ಧಾರ್ಮಿಕ ಡಾಂಭಿಕತನದ...
ಸಂತೆಯಲ್ಲಿ ನಿಂತ ಕಬೀರ ಸಿನೆಮಾ ವಿಮರ್ಶೆ
ಸಂತೆಯಲ್ಲಿ ನಿಂತ ಕಬೀರ ಸಿನೆಮಾ ವಿಮರ್ಶೆ
Updated on
14 ಮತ್ತು 15ನೇ ಶತಮಾನದ ಕಾಶಿಯಲ್ಲಿ ಬದುಕಿದ್ದ ಸಂತ ಕಬೀರ 21 ನೇ ಶತಮಾನದ ಸಾಮಾಜಿಕ ಸನ್ನಿವೇಶದಲ್ಲಿಯೂ, ಅವನ ಪದಗಳ ಮೂಲಕ, ಅವನ ಪ್ರೇಮ ತತ್ವದ ಮೂಲಕ, ಧಾರ್ಮಿಕ ಡಾಂಭಿಕತನದ ವಿರುದ್ಧ ಸಾರಿದ ಆಧ್ಯಾತ್ಮ ಮಾರ್ಗಕ್ಕಾಗಿ ಪ್ರಸ್ತುತವಾಗಿ ಉಳಿದಿರುವುದು ಸೋಜಿಗವೇ! ಈ ಸೋಜಿಗ ಸಂತನ ಬದುಕು-ಅವನು ಬದುಕಿದ್ದ ಸಾಮಾಜಿಕ ಸಂದರ್ಭ ಹೇಗಿರಬಹುದು ಎಂಬುದು ಹಲವು ಲೇಖಕರ, ರಂಗಕರ್ಮಿಗಳ, ಸಿನಿಕರ್ತೃಗಳ ಜಿಜ್ಞಾಸೆಗೆ ಕಾರಣವಾಗಿರುವುದು ಸಹಜವೇ. ಇಂತಹುದರಲ್ಲಿ 'ತಮಸ್' ಖ್ಯಾತಿಯ ಹಿಂದಿ ಲೇಖಕ ಭೀಷ್ಮ ಸಾಹನಿ ಅವರ 'ಸಂತ್ಯಾಗ ನಿಂತ ಕಬೀರ' (ಕಬೀರ ಖಡಾ ಬಾಜಾರ್ ಮೆ) ಎಂಬ ಜನಪ್ರಿಯ ರಂಗಕೃತಿ, ಕಬೀರನ ಜೀವನದಲ್ಲಿ ನಡೆದಿರಬಹುದಾದ ವಿವಿಧ ಘಟನೆಗಳನ್ನು ಹಿಡಿದಿಡುವ ಸಶಕ್ತ ನಾಟಕ. ಈ ನಾಟಕವನ್ನು ಸಿನೆಮಾ ಮಾಧ್ಯಮಕ್ಕೆ ಅಳವಡಿಸುವ ಕಾರ್ಯಕ್ಕೆ ಮುಂದಾಗಿರುವುದು 'ಕಬ್ಬಡಿ' ಸಿನೆಮಾ ಖ್ಯಾತಿಯ ಇಂದ್ರಬಾಬು. 'ಕಬೀರ'ನ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ನಟಿಸಿದ್ದು, 'ಸಂತೆಯಲ್ಲಿ ನಿಂತ ಕಬೀರ' ಸಿನೆಮಾಗೆ ಸಂತನ ಮತ್ತು ಅವನ ಸುತ್ತಲಿನ ಜೀವನವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯವಾಗಿದೆಯೇ?
15 ನೆಯ ಶತಮಾನದಲ್ಲಿ ಕಾಶಿ ಎಂಬ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ,  ಮುಸ್ಲಿಂ ಸಮುದಾಯದ ಹಾಗೂ ಹಿಂದೂ ಸಮುದಾಯದ ಹಲವು ಪಂಗಡಗಳ ಡಾಂಭಿಕ ಧಾರ್ಮಿಕತೆ ತಾಂಡವವಾಡುತ್ತಿದೆ. ಹಿಂದೂ ದೊರೆ, ಮುಸ್ಲಿಂ ಕೊತ್ವಾಲ ಹಾಗು ದೆಹಲಿಯಿಂದ ರಾಜ್ಯಭಾರ ಮಾಡುವ ಸಿಕಂದರ್ ಲೋಧಿ ಹೀಗೆ ಎಲ್ಲರು ಧರ್ಮ ಸಂರಕ್ಷಕರೇ ಹೊರತು ಮನುಷ್ಯ ಮನುಷ್ಯರ ನಡುವೆ ಪ್ರೇಮವನ್ನು ಪೋಷಿಸುವ ಗೋಜಿಗೆ ಯಾರು ಹೋಗುವುದಿಲ್ಲ. ಜಾತಿ-ಧರ್ಮ, ಮೇಲು-ಕೀಳು ಹೆಸರಿನಲ್ಲಿ ಹೊಡೆದಾಡುವ ಸಾಮಾಜಿಕ ವ್ಯಾಧಿಯ ಬಗ್ಗೆ ಇವರ್ಯಾರಿಗೂ ಚಿಂತೆಯಿಲ್ಲ. ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ನೇಕಾರನಾದ ಮುಸ್ಲಿಂ ಯುವಕ ಕಬೀರ, ಹಿಂದೂ ಮುಸ್ಲಿಮರು ಬಡಿದಾಡುವುದು ತಪ್ಪು ಎಂದು ಪದ ಕಟ್ಟಿ ಹಾಡುತ್ತಾನೆ. ಹಿಂದೂ ಸಂಪ್ರಯಾಯದ ಯುವತಿಯೊಬ್ಬಳು ಮುಸ್ಲಿಂ ಪುರುಷನನ್ನು ಪ್ರೀತಿಸುವುದರಿಂದ ಉಂಟಾಗುವ ಗಲಭೆಯಲ್ಲಿ, ಪ್ರೀತಿಯ ಪರವಾಗಿ ನಿಲ್ಲುತ್ತಾನೆ. ಹುಡುಗಿಯ ಕೊಲೆಯಾದಾಗ, ಅಲ್ಲಾಹುಗೆ ನಮಸ್ಕರಿಸುತ್ತಿರುವ ಮೌಲಿಗೆ ಅಲ್ಲಾಹು ಇರುವೆಯ ಕಾಲಿನ ಸಪ್ಪಳವನ್ನು ಕೇಳಿಸಿಕೊಳ್ಳುವ ಶಕ್ತಿಯಿದೆ, ಗಟ್ಟಿಯಾಕೆ ಏಕೇ ಕಿರುಚುತ್ತೀರಾ ಎಂದು ವಿರೋಧಿಸುತ್ತಾನೆ. ಕೆಳ ಜಾತಿ ಎಂದು ಮಗುವಿಗೆ ಹೊಡೆಯುವ ಹಿಂದೂ ಧರ್ಮಗುರುಗಳ ವಿರುದ್ಧ ನಿಲ್ಲುತ್ತಾನೆ. ಹೀಗೆ ಸಮಾಜದಲ್ಲಿನ ತಳಸಮುದಾಯದ ಪರ ನಿಂತು ಕ್ರಾಂತಿಕಾರಿಯಾಗಿಯೂ, ಆಧ್ಯಾತ್ಮದ ಹೊಸ ದಾರಿಯ ಶೋಧಕನಾಗಿಯೂ, ಇದ್ಯಾವುದು ಅಲ್ಲ ಮನುಷ್ಯರ ನಡುವಿನ ಪ್ರೇಮಕ್ಕೆ ಹಂಬಲಿಸುವ ವ್ಯಕ್ತಿ ತಾನು ಎಂದು ಹೇಳಿಕೊಳ್ಳುವ ಕಬೀರ, ಧಾರ್ಮಿಕ ಹಿತಾಸಕ್ತಿಗಳು ಇವನ ವಿರುದ್ಧ ಪಿತೂರಿ ಹೂಡುವಂತೆ ಮಾಡಿದರೆ, ಒಂದು ವರ್ಗದ ಸಾಮಾನ್ಯ ಜನರಿಗೆ ಹುಚ್ಚನಂತೆ ಕಾಣಿಸಿಕೊಂಡು, ವ್ಯವಹಾರದಲ್ಲಿಯೂ ಆಸಕ್ತಿ ಕಳೆದುಕೊಂಡು ತನ್ನ ತಂದೆಯಿಂದ ಆಪಾದನೆಗೆ ಗುರಿಯಾಗುತ್ತಾನೆ.   
ದೊಡ್ಡ ಹರವಿನ ವಿವಿಧ ಘಟನೆಗಳ ಕಥೆಯನ್ನು ಕಟ್ಟಿಕೊಡುವ ನಾಟಕವನ್ನು ಎರಡು ಘಂಟೆ 20 ನಿಮಿಷದ ಸಿನೆಮಾಗೆ ಅಳವಡಿಸುವುದು ಸವಾಲೇ ಸರಿ. ಈ ಸವಾಲಿನಲ್ಲಿ ನಿರ್ದೇಶಕ ಭಾಗಶಃ ಯಶಸ್ವಿಯಾಗಿದ್ದಾರೆ. ಕಬೀರನ ಚಿಂತನೆಗಳನ್ನು, ಅತ್ಯುತ್ತಮ ಸಂಭಾಷಣೆ ಮತ್ತು ಕಬೀರನ ಕೆಲವು ಪದಗಳ ಮೂಲಕ ಪರಿಣಾಮಕಾರಿಯಾಗಿ ದಾಟಿಸಲು ಒಂದು ಮಟ್ಟಿಗೆ ಸಾಧ್ಯವಾಗಿದ್ದರೂ, ಸಾಮಾಜಿಕ ಸ್ಥಿತಿಯನ್ನು ದೃಶ್ಯದ ಮೂಲಕ, ದೃಶ್ಯಗಳ ಕಾಂಪೋಸಿಶನ್ ಮೂಲಕ ಕಟ್ಟಿಕೊಡುವುದರಲ್ಲಿ ವಿಫಲರಾಗಿದ್ದಾರೆ. ಮೈಸೂರಿನಲ್ಲಿ ಸೆಟ್ ಹಾಕಿ ಕಾಶಿಯನ್ನು ಸೃಷ್ಟಿಸುವ ಮ್ಯಾಜಿಕ್ ಫಲಿಸಿಲ್ಲ ಎನ್ನಬಹುದು. ಹಾಗೆಯೇ ದೃಶ್ಯದಿಂದ ದೃಶ್ಯಕ್ಕೆ ಜಿಗಿಯುವ ನಿರೂಪಣೆ ಅಗತ್ಯಕ್ಕಿಂತಲೂ ವೇಗವಾಗಿದ್ದು, ಘಟನೆಗಳ ವಿವರಗಳಿಗೆ ನಿರ್ದೇಶಕ ತಲೆಕೆಡಿಸಿಕೊಳ್ಳದೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಕೃತಿಯೊಂದು ರಂಗಭೂಮಿಯಿಂದ ಸಿನೆಮಾಗೆ ಬಂದಾಗ ಆಗಬೇಕಿದ್ದ ಬದಲಾವಣೆಗಳು ಪರಿಣಾಮಕಾರಿಯಾಗಿಲ್ಲ.

ಸಂತೆಯಲ್ಲಿ ನಿಂತ ಕಬೀರ ಚಿತ್ರದ ಸ್ಟಿಲ್ಸ್ - ಇಲ್ಲಿ ಕ್ಲಿಕ್ ಮಾಡಿ
ಸಿನೆಮಾದ ಪ್ರಮುಖ ಹೈಲೈಟ್ ಎಂದರೆ, ಸಮಾಜದ ಬಗ್ಗೆ ಕಬೀರನ ಧೋರಣೆಯನ್ನು, ಉನ್ನತ ಆಧ್ಯಾತ್ಮಿಕ ಚಿಂತನೆಯನ್ನು, ಪ್ರೇಮ ತತ್ವವನ್ನು ಒಂದು ಮಟ್ಟಕ್ಕೆ ಹಿಡಿದಿಡಲು ಸಾಧ್ಯವಾಗಿರುವದು ಮತ್ತು ಅದನ್ನು ಪ್ರೇಕ್ಷಕರಿಗೆ ದಾಟಿಸಿರುವುದು. ಕಬೀರ ಮತ್ತು ದೆಹಲಿ ರಾಜ ಸಿಕಂದರ್ ಲೋಧಿ ಮುಖಾಮುಖಿಯಾಗಿ ನಡೆಸುವ ಸಂಭಾಷಣೆಯಾಗಲಿ, ಕೊತ್ವಾಲನ ಸಹಚರನ ಜೊತೆಗೆ ನಡೆಯುವ ಸಂಭಾಷಣೆಯಾಗಲಿ ಮಾತಿನ ಆಡಂಭರ ಹೆಚ್ಚಾಯಿತೇ ಎಂದೆನಿಸಿದರೂ, ಬಹುಷಃ ಇಲ್ಲಿಯವರೆಗೂ ಹಲವಾರು ಸಂಶೋಧಕರು ಪತ್ತೆ ಹಚ್ಚಿರುವಂತೆ ಕಬೀರನ ಗುಣವೇ ಮಾತಿನ ಚತುರತೆ ಮತ್ತು ದುಷ್ಟತೆಯನ್ನು ಧೈರ್ಯವಾಗಿ ವಿರೋಧಿಸುವ ಗುಣವಾಗಿತ್ತು ಎಂದಿರುವುದರಿಂದ, ಇದು ಸಿನಿಮಾದಲ್ಲಿಯೂ ಅವಶ್ಯಕತೆಯಿತ್ತೇನೋ! ಈ ನಿಟ್ಟಿನಲ್ಲಿ ಸಂಭಾಷಣೆ ರಚಿಸಿರುವ ಗೋಪಾಲ್ ವಾಜಪೇಯಿ (ಮೂಲ ನಾಟಕದ ಬರಹಗಾರ ಸಾಹನಿ ಅವರೂ) ಅವರ ಪಾತ್ರ ಮಹತ್ವದ್ದು. ಕಬೀರನ ಕೆಲವು ದೋಹೆಗಳನ್ನು ಕೂಡ ಅವರು ಅನುವಾದಿಸಿ, ಸ್ವತಂತ್ರವಾಗಿ ಗೀತ ರಚನೆಯನ್ನೂ ಮಾಡಿದ್ದಾರೆ. ಇಸ್ಮಾಯಿಲ್ ದರ್ಬಾರ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಕೆಲವು ಚೆನ್ನಾಗಿದ್ದರೂ, ವಾದ್ಯಗಳ ಬಳಕೆಯಲ್ಲಿ ಇನ್ನು ಸ್ವಲ್ಪ ಮಿತವಾಗಿದ್ದರೆ ಹೆಚ್ಚಿನ ಅಥೆಂಟಿಸಿಟಿ ಮೂಡುತ್ತಿತ್ತೇನೋ ಎಂದೆನಿಸದೆ ಇರದು. 
ಮೂಲ ಕೃತಿಯಲ್ಲಿದ್ದ ಕೆಲವೊಂದು ವಿವಾದಾತ್ಮಕ ಅಥವಾ ಐತಿಹಾಸಿಕವಾಗಿ ಸತ್ಯಕ್ಕೆ ದೂರವಿದ್ದು, ತಿರುಚಿರುವ ಸಾಧ್ಯತೆ ಇರುವ ಕೆಲವು ಘಟನೆಗಳು ಕೂಡ ಹಾಗೆಯೇ ಸಿನೆಮಾದಲ್ಲಿ ಹಾಸುಹೊಕ್ಕಿವೆ. ಬ್ರಾಹ್ಮಣ ಕನ್ಯೆಗೆ ಹುಟ್ಟಿ, ಆಕೆ ತೊರೆದು ಹೋಗಿದ್ದ ಮಗುವೊಂದು ಅಂದು ತಾನೇ ಮದುವೆಯಾಗಿದ್ದ ಮುಸ್ಲಿಂ ಯುವತಿಗೆ ಕಂಡು ಅವಳು ಆ ಕಂದನನ್ನು ಕಬೀರ ಎಂದು ಹೆಸರಿಸುತ್ತಾಳೆ ಎಂಬ ಕಥೆ ಆಧುನಿಕ ಯುಗದಲ್ಲಿ ಕಬೀರನನ್ನು ಹಿಂದೂ ಸಂಪ್ರದಾಯದೊಳಗೆ ಸೇರಿಸಿಕೊಳ್ಳುವ ಹುನ್ನಾರ ಎಂದು ಹಲವು ಸಂಶೋಧಕರ ಅಭಿಮತ. ಆದರೆ ಇಂತಹ ದೃಶ್ಯಗಳು ಸಿನೆಮಾದಲ್ಲಿ ಒಂದು ಭಾವುಕತೆಯನ್ನು ಸೃಷ್ಟಿಸಲು ಸಾಧ್ಯವಾಗಿದೆ ಎನ್ನಬಹುದು. ಹಾಗೆಯೇ ಕಬೀರ ಮತ್ತು ಲೋಯಿ ಮದುವೆಯ ವಿಷಯವಾಗಿಯೂ ಹಲವಾರು ವಾದಗಳಿದ್ದು, ಅದು ಕೂಡ ಸಿನೆಮಾದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಕಬೀರ ಸಂತನಾಗಿದ್ದರೂ ಅದಕ್ಕಾಗಿ ಮನೆ, ಮಠ, ಸಂಸಾರ, ಉದ್ಯೋಗ ಯಾವುದನ್ನೂ ತೊರೆಯುವ ಅವಶ್ಯಕತೆ ಇಲ್ಲ ಎಂಬ ಧೋರಣೆಯುಳ್ಳವನಾಗಿದ್ದ ಎಂಬುದಕ್ಕೆ ಪೂರಕವಾಗಿರುವ ಕಥೆ ಇದಾಗಿದೆ. 
ಬಹುತೇಕ ಎಲ್ಲ ನಟರೂ ಒಳ್ಳೆಯ ನಟನೆ ನೀಡಿರುವುದು ಸಿನೆಮಾದ ಮತ್ತೊಂದು ಪೂರಕ ಅಂಶ. ಕಬೀರನ ತಾಯಿಯ ಪಾತ್ರದಲ್ಲಿ ಭಾಗೀರಥಿ ಬಾಯಿ ಕದಂ ಮತ್ತು ಪತ್ನಿಯ ಪಾತ್ರದಲ್ಲಿ ಸನುಷಾ ಗಮನ ಸೆಳೆಯುತ್ತಾರೆ. ಕಬೀರನ ತಂದೆಯ ಪಾತ್ರದಲ್ಲಿ ಅವಿನಾಶ್, ಕೊತ್ವಾಲನ ಪಾತ್ರದಲ್ಲಿ ಶರತ್ ಲೋಹಿತಾಶ್ವ ಕೂಡ ಗಮನಾರ್ಹ ನಟನೆ ನೀಡಿದ್ದಾರೆ. ಕಬೀರನ ಪಾತ್ರದಲ್ಲಿ ಶಿವರಾಜ್ ಕುಮಾರ್ ದುರ್ಮಾರ್ಗಕ್ಕೆ ಸಿಟ್ಟಾಗಿರುವ ಬಿಸಿರಕ್ತದ ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಗಮನೀಯವೆನಿಸಿದರು ಈ ಹಿಂದೆ ಅವರ ತಂದೆ ರಾಜಕುಮಾರ್ ಕೂಡ ಕಬೀರನಾಗಿ ನಟಿಸಿದ್ದ ಪಾತ್ರದ ಜೊತೆಗೆ ಹೋಲಿಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಇನ್ನು ಉತ್ತಮಗೊಳಿಸಿಕೊಳ್ಳುವ ವಿಫುಲ ಅವಕಾಶವಿತ್ತೇನೋ ಎಂದೆನಿಸದೆ ಇರದು. 
ಇಂದಿನ ಯುಗಕ್ಕೆ ಇಂತಹ ಒಂದು ಕಥೆ ಹೇಳಲು ಧೈರ್ಯ ಮಾಡಿದ ನಿರ್ದೇಶಕ ಇಂದ್ರಬಾಬು ಅವರ ಶ್ರಮ ಮತ್ತು ಬದ್ಧತೆಯನ್ನು ಗುರುತಿಸುತ್ತಲೇ, ಸಂಭಾಷಣೆ, ಮೂಲ ಕೃತಿಯ ಆಯ್ಕೆಯಲ್ಲಿ ತೋರಿರುವ ದಕ್ಷತೆಯನ್ನು ಕಾಶಿ ನಗರವನ್ನು ಕಟ್ಟಿಕೊಡುವುದರಲ್ಲಿ, ಘಟನೆಗಳ ವಿವರಗಳನ್ನು ಇನ್ನು ಪರಿಣಾಮಕಾರಿಯಾಗಿ ಮೂಡಿಸುವುದರಲ್ಲಿ, ನಿರೂಪಣೆಯ ವೇಗ ಮತ್ತು ಸಂಕಲನದಲ್ಲಿ ಖಚಿತತೆ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ ಇದೊಂದು ಅಪೂರ್ವ ಕೃತಿಯಾಗಿ ಉಳಿದುಕೊಳ್ಳುತ್ತಿತ್ತೇನೋ! ಒಟ್ಟಿನಲ್ಲಿ ಇದೊಂದು ಗಮನಾರ್ಹ ಪ್ರಯೋಗ ಎನ್ನುವುದರಲ್ಲಿ ಎರಡುಮಾತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com