ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಅಪಹರಿಸಿ ಹೊತ್ತೊಯ್ಯುವ ದೃಶ್ಯದಿಂದ ಪ್ರಾರಂಭವಾಗುವ ಚಿತ್ರ, ಕುತೂಹಲ ಹುಟ್ಟಿಸಿ ನಂತರ ಪ್ರೇಮಕಥೆಗೆ ಹೊರಳುತ್ತದೆ. ಮಧ್ಯಮವರ್ಗದ ಯುವತಿ ನಂದಿನಿ ಮತ್ತು ಉಡಾಳ ಪ್ರಶಾಂತ್ ಅವರ ಪ್ರೇಮ ಕಥೆ ಮೊದಲಾರ್ಧ ಆವರಿಸಿಕೊಂಡು, ಗುನುಗಿಕೊಳ್ಳಬಹುದಾದ ಒಂದೆರಡು ಒಳ್ಳೆಯ ಹಾಡುಗಳಿಂದ ಮುದ ನೀಡಿದರು, ಬಹುತೇಕ ಎಲ್ಲ ಪಾತ್ರಗಳ ಮಾತಿನ ಚಪಲಕ್ಕೆ, ಟಿವಿ ಚಾನೆಲ್ ಗಳ ಜನಪ್ರಿಯ ಕಾರ್ಯಕ್ರಮಗಳ ಪುನರಾವರ್ತಿತ ಮೂಡುವಿಕೆಗೆ ಬೇಸರ ಮೂಡಿಸುತ್ತದೆ. ಕ್ಲೀಶೆಯ ಮಧ್ಯಮ ವರ್ಗದ ಕುಟುಂಬ/ಪಾತ್ರ ಕಟ್ಟಿಕೊಡುವ ನಿರ್ದೇಶಕರಿಗೆ ಅದನ್ನು ಅಥೆಂಟಿಕ್ ಎನ್ನುವ ರೀತಿಯಲ್ಲಿ ಮೂಡಿಸುವಲ್ಲಿ ಶ್ರಮವಿಲ್ಲ. ಪಾರ್ಶುವಾಯುಗೆ ತುತ್ತಾದ ತಂದೆ, ಓದುತ್ತಿರುವ ತಮ್ಮನ ಶಿಕ್ಷಣಕ್ಕಾಗಿ ಹಣ, ಹೀಗೆ ಕುಟುಂಬದ ಜವಾಬ್ದಾರಿ ಹೊತ್ತ ಯುವತಿ ನಂದಿನಿಯ ಬಳಲಿದ ಶ್ರಮಜೀವನವನ್ನು ಬರಿ ಮಾತಿನಲ್ಲೇ ಹೇಳಿಸುವ ನಿರ್ದೇಶಕ, ಆ ಬಳಲಿಕೆಯನ್ನು ನಟನೆಯ ಹಾವಭಾವ, ಮುಖಚರ್ಯೆ, ಅಥವಾ ಪೂರಕ ಪರಿಸರವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮೂಡಿಸುವುದಿಲ್ಲ. ಪ್ರತಿಯೊಂದಕ್ಕೂ ಒಣ ತತ್ವ ನುಡಿಯುವ ರಂಗಣ್ಣನ (ತಬಲಾ ನಾಣಿ) ಎಲ್ಲಿಯೂ ಸಲ್ಲುವುದಿಲ್ಲ ಮತ್ತು ಬೋಧನಪ್ರಾಯ ಸಂಭಾಷಣೆ ಬೋರು ಹೊಡೆಸುವುದಲ್ಲದೆ, ಕೆಲವು ಸಂಭಾಷಣೆ ಅಸೂಕ್ಷಮತೆಯಿಂದ ಕೂಡಿದೆ. (ದಲಿತನನ್ನು ತುಳಿದ ಆನೆ ಎಂಬ ಕಾಲ್ಪನಿಕ ಪತ್ರಿಕಾ ಬರಹ ಹಿಡಿದು ಲೇವಡಿ ಮಾಡುವ ಬಗೆ, ದಲಿತರ ವಿರುದ್ಧ ನಡೆಯುವ ದೌರ್ಜನ್ಯಗಳ ನರೇಟಿವ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದು). ದ್ವಿತೀಯಾರ್ಧದಲ್ಲಿ ಕೇಂದ್ರ ಘಟನೆಗೆ ಧುಮುಕುವ ಸಿನೆಮಾ ತುಸು ಗಂಭೀರತೆಯನ್ನು ಪಡೆದರೂ, ಮತ್ತೆ ನಿರೂಪಿಸುವ ಕ್ರಮದಲ್ಲಿ ಸೋಲುತ್ತದೆ. ಇಡೀ ಸಿನೆಮಾದ ಭಾವ ಅತಿ ಲೌಡ್ ಎನ್ನಿಸುತ್ತದೆ. ಪರಸ್ಪರ ಭಾವನೆಗಳನ್ನು, ದುರಂತಕ್ಕೆ ಸಂಬಂಧಗಳು ಪ್ರತಿಕ್ರಿಯಿಸುವ ರೀತಿಯನ್ನು ಕೇವಲ ಮಾತಿನ ಮೂಲಕ ಎಲ್ಲವನ್ನು ನಿರ್ವಚನಗೊಳಿಸದೆ, ಇನ್ನಷ್ಟು ಸೂಕ್ಷ್ಮವಾಗಿ ಕಟ್ಟಿಕೊಡುವ ವಿಫುಲ ಅವಕಾಶಗಳನ್ನು ನಿರ್ದೇಶಕ ಕೈಚೆಲ್ಲುತ್ತಾರೆ. ಜನಪ್ರಿಯ ಸುದ್ದಿವಾಹಿನಿಗಳನ್ನು ಮೂದಲಿಸುವ ಸೋಗಿನಲ್ಲಿ, ಅದೇ ಜನಪ್ರಿಯತೆಯ ಅಸೂಕ್ಷ್ಮತೆಯಲ್ಲಿ ಸಿನೆಮಾ ಸೊರಗುತ್ತದೆ. (ವೇಶ್ಯಾವಾಟಿಕೆಯ ಬಗ್ಗೆ ಅತಿ ಕೆಟ್ಟ ಅಭಿಪ್ರಾಯವನ್ನು ಸಿನೆಮಾ ತಳೆಯುವುದು ಕೂಡ ಅದರಲ್ಲಿ ಒಂದು!)