ವೃದ್ಧಾಶ್ರಮದ ತೊಂದರೆಗಳು, ರಾಜಕೀಯ ಪಿತೂರಿ, ವೈಯಕ್ತಿಕ ನೋವಿನಿಂದ ಹೊರಬರಬೇಕಾದ ಸಂಗತಿ - ಹೀಗೆ ಮತ್ತೆ ಆಶಯದಲ್ಲಿ ಮಹತ್ವಾಕಾಂಕ್ಷೆ ಇದ್ದರೂ, ಯಾವುವು ಸಾವಯವವಾಗಿ ಮೂಡದೇ ಇವೆಲ್ಲವಕ್ಕೂ ಖಾಜಿ ನ್ಯಾಯವಷ್ಟೇ ಸಲ್ಲಿಸಲು ನಿರ್ದೇಶಕರಿಗೆ ಸಾಧ್ಯವಾಗಿದೆ. ಆರೋಗ್ಯ ಮಂತ್ರಿಯಾಗಲು ಜಗನ್ನಾಥ್ (ಪ್ರಕಾಶ್ ರಾಜ್) ಪೋಲಿಯೋ ಲಸಿಕೆಯಲ್ಲಿ ವಿಷಪೂರಿತ ಅಂಶ ಸೇರಿಸಿ ಪಿತೂರಿ ನಡೆಸುವ ಕಾಲ್ಪನಿಕ ಕಥೆಯ ಎಳೆ ಬಹಳ ಪೊಳ್ಳಾಗಿ ಮೂಡಿ ಬಂದಿದೆ. ವೃದ್ಧಾಶ್ರಮದಲ್ಲಿ ಸೇರಿಕೊಳ್ಳುವ ಹಿರಿಯ ಜೀವಿಗಳ ಕಥೆಗಳನ್ನು ಕರುಣೆ-ಅನುಕಂಪಗಳಿಂದ ಕಟ್ಟಿಕೊಟ್ಟಿದ್ದರೂ, ಅವುಗಳಲ್ಲೂ ಕೃತಕತೆ ಸೇರಿಕೊಂಡು ಅಥವಾ ಸರ್ವಶಕ್ತ ಹೀರೊ ಎಲ್ಲವನ್ನು ಪರಿಹರಿಸಲು ಅನುವಾಗುವಂತೆ ಅತೀವ ಭಾವಕೃತ್ರಿಮತೆಗೆ ಎಡೆಮಾಡಿಕೊಟ್ಟು ಇಲ್ಲಿಯೂ ನಿರಾಶೆ ಮೂಡಿಸುತ್ತಾರೆ. ದತ್ತಣ್ಣ, ಅನಂತನಾಗ್, ಭಾರ್ಗವಿ ನಾರಾಯಣ್, ಅಶೋಕ್ ಹೀಗೆ ಹಿರಿಯ ನಟರ ತಾರಾ ದಂಡನ್ನೇ ವೃದ್ಧಾಶ್ರಮದ ಸದಸ್ಯರ ಪಾತ್ರಗಳನ್ನಾಗಿಸಿ ಎಲ್ಲರ ಕಥೆಗಳನ್ನು ಹೇಳುವ ನಿರ್ದೇಶಕರ ತಂತ್ರ, ಮತ್ತೆ ಪರಿಣಾಮಕಾರಿಯೆನ್ನಿಸುವುದಿಲ್ಲ. ಪೋಷಕರನ್ನು ಮಕ್ಕಳು ಮನೆಯಲ್ಲಿ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದನ್ನು ಬೋಧನೆಯ ದೃಷ್ಟಿಯಿಂದಷ್ಟೇ ಜನರಿಗೆ ಸಾಮಾಜಿಕ ಸಂದೇಶವನ್ನಾಗಿ ನೀಡಲು ನಿರ್ದೇಶಕ ಮುಂದಾಗಿದ್ದಾರೆ.