'ಅನರ್ಥ' ಸಿನಿಮಾ ವಿಮರ್ಶೆ: Mobile Addiction- ಗಂಭೀರ ಕಥಾವಸ್ತುವಿನ ನೀರಸ ನಿರೂಪಣೆ; ಅನಾವಶ್ಯಕ ಟ್ವಿಸ್ಟ್, ಸಸ್ಪೆನ್ಸ್ ಠುಸ್!
Rating(2 / 5)
ಇವತ್ತಿನ ಯುವಜನತೆಯಲ್ಲಿ ಮೊಬೈಲ್ ಆಡಿಕ್ಷನ್ ಕೂಡ ಒಂದು ರೀತಿ ಡ್ರಗ್ ಇದ್ದಂತೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಕಥೆಯ ನಿರೂಪಣೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗುತ್ತಿತ್ತು.
ರಮೇಶ್ ಕೃಷ್ಣ ನೀನಾಸಂ ನಿರ್ದೇಶನದ ಅನರ್ಥ ಸಿನಿಮಾ ಮೊಬೈಲ್ ಫೋನ್ಗಳ ಗೀಳಿನ ಬಗ್ಗೆ ಗಂಭೀರವಾದ ಕಥೆ ಹೇಳುತ್ತೆ. ಡಿಜಿಟಲ್ ಯುಗವ ಪ್ರಮುಖ ಭಾಗವಾಗಿರುವ ಮೊಬೈಲ್ ಅಡಿಕ್ಷನ್ ದೈನಂದಿನ ಜೀವನದಲ್ಲಿ ಹೇಗೆ ಮಹತ್ವದ ಸ್ಥಾನ ಪಡೆದುಕೊಂಡಿದೆ, ಮೊಬೈಲ್ ಚಟದ ಕರಾಳತೆಯ ಸಿನಿಮಾ ಕಥೆ ಸಾಗುತ್ತದೆ.
ನಗರದಲ್ಲಿ ನಡೆಯುವ 13 ನಿಗೂಢ ಆತ್ಮಹತ್ಯೆ ಗಳ ನಡುವೆ ನಾಯಕ ನಾಯಕಿಯ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಅವಕಾಶ್(ವಿಶಾಲ್ ಮಣ್ಣೂರು) ಮತ್ತು ಆಕೃತಿ (ವಿಹಾನಿ ಗೌಡ)ಇಬ್ಬರಿಗೂ ಅವರ ಜೀವನದಲ್ಲಿ ಭೂತಕಾಲದ ಒಂದು ಕಥೆಯಿರುತ್ತದೆ. ವಿಧಿಯ ನಿಯಮದ ಪ್ರಕಾರ ಅವರಿಬ್ಬರೂ ಒಂದಾಗುತ್ತಾರೆ. ಈ ಸರಣಿ ಆತ್ಮಹತ್ಯೆಗೆ ಕಾರಣವೇನು? ಅದರ ಹಿಂದಿನ ಕಾಣದ ಕೈಗಳು ಯಾರು ಎಂಬ ತಿಳಿದುಕೊಳ್ಳುವತ್ತ ಕಥೆ ಸಾಗುತ್ತದೆ.
ಅವಕಾಶ್ ಮತ್ತು ಆಕೃತಿ ಇಬ್ಬರು ಒಂದು ಅಪರಿಚಿತ ಜಾಗಕ್ಕೆ ತೆರಳುತ್ತಾರೆ, ಅಲ್ಲಿ ಒಬ್ಬರಿಗೊಬ್ಬರು ಪರಸ್ಪರ ಸಾಂತ್ವನ ಕಂಡುಕೊಳ್ಳಲು ಬಯಸುತ್ತಾರೆ, ಇದರ ಜೊತೆ ಜೊತೆಗೆ ಅವರಿಗೆ ವಿಚಿತ್ರ ಅನುಭವ ಉಂಟಾಗುತ್ತದೆ.ಶಾಂತಿ ಕಂಡು ಕೊಳ್ಳಲು ಬಂದ ಅವರಿಬ್ಬರಿಗೂ ಅಂದುಕೊಂಡದ್ದು ನಡೆಯುತ್ತದೆಯೇ ಅಥವಾ ಕಾಣದ ಕೈಗಳ ಆಟಕ್ಕೆ ಸಿಲುಕುತ್ತಾರೆಯೇ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ಅದ್ವೈತ್ ಪಾತ್ರದಲ್ಲಿ ವಿಜಯ್ ಕುಮಾರ್ ಗಮನ ಸೆಳೆಯುತ್ತಾರೆ. ಸಾವಿನ ರಹಸ್ಯ ತಿಳಿಯುವ ಪತ್ತೇದಾರಿ ಪಾತ್ರ ನಿರ್ವಹಿಸುತ್ತಾರೆ, ಅವರು ತಮ್ಮ ಸಹೋದರಿ ಲಾಸ್ಯ (ಅರ್ಪಿತಾ ನವರಸ) ಜೊತೆಗೆ ಮೃತ ಜೋನಾಥನ್ (ಗಣೇಶ್ ಗ್ಯಾನು) ಬಿಟ್ಟುಹೋದ ಸುಳಿವುಗಳ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಸಾವಿನ ಸರಮಾಲೆಯ ಹಿಂದಿನ ಸತ್ಯವನ್ನು ಬಿಚ್ಚಿಡಲು ನಿರ್ಧರಿಸಿದ ನಂತರ ಹಲವು ರೀತಿಯ ಅನುಮಾನಗಳನ್ನು ಎದುರಿಸುತ್ತಾರೆ, ಇದೆಲ್ಲದರ ನಡುವೆ ರಹಸ್ಯ ಬೇಧಿಸುತ್ತಾರಾ ಎಂಬುದೇ ಕ್ಲೈಮ್ಯಾಕ್ಸ್.
ರಹಸ್ಯಗಳು ಬಯಲಾಗುತ್ತಿದ್ದಂತೆ, ಅವಕಾಶ ಮತ್ತು ಆಕೃತಿ ಅವರು ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅಡಗಿಟ್ಟಿದ್ದ ಕೆಟ್ಟ ಸತ್ಯವನ್ನು ಬಹಿರಂಗಪಡಿಸುತ್ತಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡ 13 ಜನರಂತೆ ಇವರು ಬಲಿಪಶುಗಳಾಗುತ್ತಾರಾ ಎಂಬುದು ಸಸ್ಪೆನ್ಸ್.
ಗಂಭೀರವಾದ ವಿಷಯವನ್ನು ಸೂಕ್ತವಾಗಿ ನಿರೂಪಿಸುವ ಶೈಲಿಯಲ್ಲಿ ನಿರ್ದೇಶಕರು ಸ್ವಲ್ಪ ಹಿಂದೆ ಬಿದ್ದಂತಿದೆ. ಪ್ರೇಕ್ಷಕರ ಗಮನ ಸೆಳೆಯಲು ನಿರ್ದೇಶಕರು ಹೆಣಗಾಡಿದ್ದಾರೆ. ಹೆಚ್ಚು ಪಾತ್ರಗಳಿಲ್ಲ, ಇತಿಮಿತಿಗಳೇ ಕೆಲವು ಕಡೆ ಸಿನಿಮೀಯ ಅನುಭವವನ್ನು ತಗ್ಗಿಸುತ್ತದೆ. ಚಲನಚಿತ್ರವು ಸಾಂದರ್ಭಿಕವಾಗಿ ಅನಿರೀಕ್ಷಿತ ತಿರುವುಗಳೊಂದಿಗೆ ತನ್ನ ಪ್ರೇಕ್ಷಕರನ್ನು ಸೆಳೆಯುತ್ತದೆ. ಕೊನೆಯದಾಗಿ ಪ್ರೇಕ್ಷಕರೇ ಕ್ಲೈಮ್ಯಾಕ್ಸ್ ಊಹಿಸಬಹುದಾಗಿದೆ. ಹೀಗಾಗಿ ನಿರಾಸೆ ಕಟ್ಟಿಟ್ಟ ಬುತ್ತಿ, ಸಿನಿಮಾ ಅಂತ್ಯದಲ್ಲಿ ಅಪರಾಧಿ ಯಾರು ಎಂಬ ಬಗ್ಗೆ ತಿಳಿಯುತ್ತದೆ. ಸಿನಿಮಾಗೆ ನಾಗೇಂದ್ರ ಪ್ರಸಾದ್ ಸಂಗೀತ ನೀಡಿದ್ದು, ಅಷ್ಟಕ್ಕಷ್ಟೆ ಎನ್ನುವಂತಿದೆ. ಉಳಿದಂತೆ ವಿಶಾಲ್ ಮಣ್ಣೂರು ಮತ್ತು ವಿಹಾನಿ ಗೌಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.