ಅಂತೂ ಇರಲಿ, ಹೀಗೆ ಅಲ್ಲಿ ವಿದ್ಯೆಯನ್ನು ಅಧ್ಯಯನ ಮಾಡಲಿಕ್ಕಾಗಿ ಹೊರಟಿದ್ದಾನೆ ಒಬ್ಬ ವಿದ್ಯಾಪಿಪಾಸು ಎಂದಿಟ್ಟುಕೊಳ್ಳಿ, ಆ ಕಥೆಯ ಪ್ರಕಾರ. ದಾರಿಯಲ್ಲೊಬ್ಬ ಕನ್ಯಾ ಪಿತೃ ಸಿಗಬೇಕೆ? ಮಗಳಿಗೆ ಗಂಡು ಹುಡುಕಿ ಸುಸ್ತಾಗಿದ್ದ ಆ ವ್ಯಕ್ತಿ ಹೇಳುತ್ತಾನಂತೆ, "ನನ್ನ ಮಗಳನ್ನು ಮದುವೆಯಾಗಿ ಅನಂತರ ವಿದ್ಯಾಭಾಸ ಮುಂದುವರಿಸಿ ಅವಳೊಟ್ಟಿಗೆ". ಈ ಬೆಪ್ಪ ವಿದ್ಯಾರ್ಥಿ ತಕ್ಷಣಕ್ಕೆ ಒಪ್ಪಿ ಮದುವೆಗೆ ಸಿದ್ಧನೇ ಆಗಿಬಿಟ್ಟ! ಅವನನ್ನು ಕರೆತಂದು ಮಗಳನ್ನು ಧಾರೆ ಎರೆದರಂತೆ. ಮುಂದೆ? ಕಥೆ ಅಲ್ಲಿಗೆ ನಿಂತು ಹೋಯಿತು. ಅವನೇನು ಹೋದನೋ, ಇಲ್ಲವೋ, ಈ ದುರ್ಬಲ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಇಂದು ಈ ಕಾಶಿ ಯಾತ್ರೆ ನಾಟಕವನ್ನು ಆಡುತ್ತಿದ್ದಾರೆ. ಹೆಚ್ಚಾಗಿ ಇದು ನಿಮ್ಮಲ್ಲಿ, ಎಂದರೆ ಬ್ರಾಹ್ಮಣರಲ್ಲಿದೆ, ಅದನ್ನು ನೋಡಿ ನಮ್ಮಲ್ಲೂ, ಅಂದರೆ ಅದೇ ನಾಟಕ ಕೆಲವರು ಆಡಲು ಪ್ರಯತ್ನಿಸುತ್ತಿದ್ದಾರೆ. ಇದೆಷ್ಟು ಹಾಸ್ಯಾಸ್ಪದವೆಂದರೆ, ಗಂಡು-ಹೆಣ್ಣು ನೋಡುತ್ತಾರೆ, ಮದುವೆಗೆ ಸಿದ್ಧವಾಗುತ್ತಾರೆ, ಮದುವೆಗೆ ಬಂದಿರುತ್ತಾರೆ, ಕೊನೆಗೆ ಮಾವನೇ ಕಾಶಿ ಯಾತ್ರೆಯ ವೇಷವನ್ನೂ ಕೊಡುತ್ತಾನೆ, ಹೆಣ್ಣಿನ ಕಡೆಯವರೇ ಬೇಕೋ, ಬೇಡವೋ ಕೊಡೆಯನ್ನೂ ಹಿಡಿಯುತ್ತಾರೆ, ಕನ್ಯಾಮಂಟಪದಿಂದ ಹತ್ತು ಹೆಜ್ಜೆ ತಾಳ ಮೇಳಗಳೊಡನೆ ಹೋಗುವುದೂ ಆಗುತ್ತದೆ, ನಿಮ್ಮಂತಹ ಪುರೋಹಿತರು ಕನ್ಯಾಪಿತೃವಿನಿಂದ ಹೇಳಿಸಿ ವಾಪಸ್ ಕರೆಸಿಕೊಂಡು ನೇರ ಈಗಾಗಲೇ ಸಿದ್ಧವಿರುವ ಕಲ್ಯಾಣ ಮಂಟಪಕ್ಕೇ ಕರೆತರುತ್ತಾರೆ.