ನಿಮಗೆ ಗೊತ್ತಿರಲೇಬೇಕಾದ ಬ್ಯಾಂಕಿಂಗ್ ವ್ಯವಹಾರದ ಕಥೆ

ಒಬ್ಬ ದೊಡ್ಡ ಉದ್ಯಮಿ ಸಾವಿರಾರು ಕೋಟಿ ಸಾಲ ಕೇಳಿಕೊಂಡು ಬರುತ್ತಾನೆ. ನೂರಾರು ಕಟ್ಟಲೆಗಳನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಕೊಡುವ ಮುನ್ನ ಅಳೆದು ತೂಗಿ ಸಾಲ ಕೊಡುತ್ತವೆ, ಹೀಗಿದ್ದೂ...
ಹಣಕ್ಲಾಸು
ಹಣಕ್ಲಾಸು
ದಶಕಗಳಿಂದ ನಾವೆಲ್ಲಾ ರಾಷ್ಟ್ರೀಯ ಸರಕಾರ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾವಿರ ಕೋಟಿಗಳಲ್ಲಿ ಬಂಡವಾಳ ಹೂಡುವುದಾಗಿ ಹೇಳುವುದು ಮತ್ತು ಹೇಳಿದಂತೆ ಹೂಡಿಕೆ ಮಾಡುವುದು ನೋಡಿಕೊಂಡು ಬಂದಿದ್ದೇವೆ. ಅಲ್ಲದೆ ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಅವಶ್ಯ ಎನಿಸಿದರೆ ಹೂಡಿಕೆ ಮಾಡುವುದಾಗಿ ಭರವಸೆಯನ್ನೂ ನೀಡುತ್ತದೆ. ಇದು ಹೊಸತೇನಲ್ಲ ಮೊದಲೇ ಹೇಳಿದಂತೆ ದಶಕಗಳಿಂದ ನೆಡೆದು ಬಂದಿದೆ. ಸರಿ, ಸರಕಾರವೇಕೆ ಬ್ಯಾಂಕ್ಗೆ ಬಂಡವಾಳ ಹೂಡುತ್ತದೆ? ಎನ್ನುವುದು ಸಹಜವಾಗೇ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ, ನೋಡಿ ಬ್ಯಾಂಕ್ ನ ಕೆಲಸ ಗ್ರಾಹಕರಿಂದ ಡಿಪೋಸಿಟ್ ಇರಿಸಿಕೊಳ್ಳುವುದು ಮತ್ತು ಸೂಕ್ತ ಗ್ರಾಹಕರಿಗೆ ಸಾಲ ಕೊಡುವುದು, ಕೊಟ್ಟ ಸಾಲವನ್ನು ಬಡ್ಡಿ ಸಮೇತ ವಸೂಲಿ ಮಾಡುವುದು, ತನ್ನಲ್ಲಿ ಹಣವಿಟ್ಟ ಗ್ರಾಹಕನಿಗೆ ನಿಗದಿತ ಬಡ್ಡಿ ನೀಡುವುದು. ಆದರೆ ಕೆಲವೊಮ್ಮೆ ಕೊಟ್ಟ ಸಾಲ ವಸೂಲಾತಿ ಆಗದೆ ಉಳಿದು ಬಿಡುತ್ತದೆ. ಇವುಗಳನ್ನ ಒಟ್ಟಾಗಿ ನಾನ್ ಪರ್ಫಾರ್ಮಿಂಗ್ ಅಸೆಟ್ ಎನ್ನುತ್ತೇವೆ.
12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಆಗದಿದ್ದರೆ ಅದನ್ನು ಸಬ್ ಸ್ಟ್ಯಾಂಡರ್ಡ್ ಅಸೆಟ್ ಎಂದು ವರ್ಗೀಕರಿಸಲಾಗುತ್ತದೆ. ಬಾಕಿ ಉಳಿದ ಮೊತ್ತದ 15 ರಿಂದ 25 ಭಾಗ ಪ್ರಾವಿಷನ್ ಒದಗಿಸಿ ತನ್ನ ನಿವ್ವಳ ಲಾಭ ತೋರಿಸುತ್ತದೆ. 12 ತಿಂಗಳು ಮೀರಿದ ಸಾಲಗಳನ್ನು ಡೌಟ್ಫುಲ್ ಎಂದು ವರ್ಗಿಕರಿಸಲಾಗುತ್ತದೆ. ಇಲ್ಲಿ 25 ರಿಂದ 100 ಪ್ರತಿಶತ ಪ್ರಾವಿಷನ್ ಮಾಡಬೇಕಾಗುತ್ತದೆ.
ಹೀಗೆ ವಸೂಲಾಗದೆ ಉಳಿದ ಸಾಲದ ಮೊತ್ತ ಹೆಚ್ಚಿದಷ್ಟು ಗ್ರಾಹಕನಿಗೆ, ಬ್ಯಾಂಕ್ ಷೇರು ಖರೀದಿ ಮಾಡುವ ಹೂಡಿಕೆದಾರನಿಗೆ ಎಲ್ಲರಿಗೂ ಬ್ಯಾಂಕ್ನ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ನಾನು ಇಟ್ಟ ಹಣ ನನ್ನ ಸಮಯಕ್ಕೆ ಮರಳಿ ದೊರಕುವುದೇ ಎನ್ನುವ ಪ್ರಶ್ನೆ ಹುಟ್ಟಿದರೆ ಮುಗಿಯಿತು, ನೆನಪಿಡಿ ವಿತ್ತ ವಲಯ ಕಾರ್ಯ ನಿರ್ವಹಿಸುತ್ತಿರುವುದು ನಂಬಿಕೆಯ ಆಧಾರದ ಮೇಲೆ. ಗ್ರಾಹಕನ ನಂಬಿಕೆಗೆ ಪೆಟ್ಟು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ಉದಾಹರಣೆ ಅರ್ಜೆಂಟಿನ, ಐಸ್ಲ್ಯಾಂಡ್, ಸೈಪ್ರಸ್, ಗ್ರೀಸ್, ಸ್ಪೇನ್ ದೇಶಗಳು ನಮ್ಮ ಕಣ್ಣ ಮುಂದಿದೆ. ಈ ದೇಶಗಳಲ್ಲಿ ಠೆವಣಿ ಇಟ್ಟ ವ್ಯಕ್ತಿ ತನ್ನ ಹಣ ವಾಪಸ್ಸು ಕೇಳಿದರೆ ಬ್ಯಾಂಕ್ ತನ್ನ ಬಳಿ ನೀನಿಟ್ಟ ಹಣ ಇಲ್ಲ ಎಂದಿವೆ, 100 ರುಪಾಯಿ ನಿಡುವ ಕಡೆ 3೦/4೦ ರುಪಾಯಿ ಕೊಟ್ಟು ಉಳಿದದ್ದು ಕೊಡುತ್ತೇವೆ ಎಂದಿವೆ, ಎಂದು ಎನ್ನುವುದು ಯಕ್ಷ ಪ್ರಶ್ನೆ.
ಹೀಗೆ ಬ್ಯಾಂಕ್ಗಳೇ ದಿವಾಳಿ ಏಳುವ ಸ್ಥಿತಿ ತಪ್ಪಿಸಲು, ಜನರ ಮನದಲ್ಲಿ, ಹೂಡಿಕೆದಾರರ ಮನಸ್ಸಿನಲ್ಲಿ ನಂಬಿಕೆ ಸೃಷ್ಟಿಸಲು ಸರಕಾರ ಆಗಾಗ್ಗೆ ಸಾಕಷ್ಟು ಹಣವನ್ನು ಬ್ಯಾಂಕ್ಗಳಿಗೆ ಬಂಡವಾಳದ ರೂಪದಲ್ಲಿ ಹಣ ಹೂಡುತ್ತದೆ. ಯುರೋಪಿನಲ್ಲಿ ಹಲವು
ಬ್ಯಾಂಕ್ಗಳಿಗೆ ಅಲ್ಲಿನ ಸರಕಾರ ಬಂಡವಾಳ ಹೂಡುವ ಸ್ಥಿತಿ ಮೀರಿ, ಬೈಲ್ ಔಟ್ ಮಾಡುವ ಹಂತಕ್ಕೆ ತಲುಪಿದ್ದು ಇದರ ಕಾರಣದಿಂದ ಇಡೀ ದೇಶವೇ ದಿವಾಳಿ ಎದದ್ದು ವಿತ್ತ ಪ್ರಪಂಚದ ಆಗು-ಹೋಗು ಗಮನಿಸುವ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಏನು ಭಾರತೀಯ ಬ್ಯಾಂಕ್ಗಳ ಅರ್ಥಿಕ ಆರೋಗ್ಯ ಅಷ್ಟರಮಟ್ಟಿಗೆ ಹದಗೆಟ್ಟಿದೆಯೇ? ಎಂದು ನೀವು ಪ್ರಶ್ನಿಸಿದರೆ, ಸಮಾಧಾನಿಸಿ ಉತ್ತರ 'ಇಲ್ಲ', ಅರ್ಥ ನಮ್ಮ ಬ್ಯಾಂಕ್ಗಳ ಪರಸ್ಥಿತಿ ಹದಗೆಟ್ಟಿಲ್ಲ, ಆದರೆ ಉತ್ತಮ ಎಂದು ಹೇಳುವಂತೆಯೂ ಇಲ್ಲ, ಇದೆಲ್ಲಾ
ದಶಕಗಳಿಂದ ನಡೆಯುತ್ತಾ ಬಂದಿದೆ ಮತ್ತೆ ಈಗೇಕೆ ದಿಢೀರನೆ 'ಜಡ ಮೊತ್ತ' ದ ಬಗ್ಗೆ ಇಷ್ಟೊಂದು ಕಾಳಜಿ? ಎನ್ನುವುದಕ್ಕೆ ಉತ್ತರ ನಮ್ಮ ಬ್ಯಾಂಕ್ಗಳಲ್ಲಿ ಸಂಗ್ರಹವಾಗಿರುವ ನಾನ್ ಪರ್ಫಾರ್ಮಿಂಗ್ ಆಸೆಟ್ಗಳು ಬೆಳೆಯುತ್ತಿರುವ ವೇಗ! ಹೀಗಾಗಿ ನಾನ್ ಪರ್ಫಾರ್ಮಿಂಗ್ ಅಸ್ಸೆಟ್ಗಳಿಗೆ ಪ್ರಮಾಣದ ಪ್ರಾವಿಷನ್ ಮಾಡಿ ಮತ್ತು ಅದನ್ನ ತಮ್ಮ ಲಾಭದಿಂದ ಕಡಿತಗೊಳಿಸಬೇಕು ಹೀಗೆ ಮಾಡುವುದರಿಂದ ಮೊದಮೊದಲಿಗೆ ನಮ್ಮ ಬ್ಯಾಂಕ್ಗಳ ಆರ್ಥಿಕತೆಯಲ್ಲಿ ಸ್ವಲ್ಪ ಏರುಪೇರು ಉಂಟಾಗುತ್ತದೆ ಆದರೆ ಮುಂಬರುವ ದಿನಗಳಲ್ಲಿ ಇದರಿಂದ ಹೆಚ್ಚಿನ ಒಳಿತಾಗಲಿದೆ. ಗ್ರಾಹಕ ಮತ್ತು ಹೂಡಿಕೆದಾರ ತಾತ್ಕಾಲಿಕವಾಗಿ ಬ್ಯಾಂಕ್ ನ ಮೇಲಿನ ಹೂಡಿಕೆಯಿಂದ ಹಿಮ್ಮುಖನಾಗಬಹುದು, ಆದರೆ ಮುಂದಿನ ದಿನಗಳಲ್ಲಿ ದೇಶದ, ಜನರ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಈ ನಿರ್ಧಾರ ಅಂತ್ಯಂತ ಮಹತ್ವದ್ದು. ನೋಡಿ ಒಂದು ಸಣ್ಣ ಬೆಂಕಿಯ ಕಿಡಿ ನೋಡದೆ, ನಂದಿಸದೆ ಹೋದರೆ ಅದು ಒಂದು ಮನೆಯನ್ನೇ ಸುಡಬಲ್ಲದು, ಹಾಗೆಯೇ ಇಂದಿಗೆ ಅಷ್ಟೇನೂ ದೊಡ್ಡದಲ್ಲದ (ಭಾರತದಂತ ದೇಶದ ವಹಿವಾಟಿನ ಮುಂದೆ ಹೋಲಿಸಿದರೆ ಮಾತ್ರ, ಹಾಗೆ ಸುಮ್ಮನೆ ನೋಡಿದರೆ ಎಂತವರ ಹೃದಯವೂ ಒಂದು ಸೆಕೆಂಡು ಕಾರ್ಯ ನಿಲ್ಲಿಸುವುದು) ಜಡ ಸಾಲದ ಮೊತ್ತವನ್ನು ಅದಷ್ಟೂ ವಸೂಲು ಮಾಡುವುದು, ಸಾಧ್ಯವೇ ಇಲ್ಲ
ಎನ್ನುವ ಸ್ಥಿತಿ ಬಂದರೆ, ತನ್ನ ನಿವ್ವಳ ಲಾಭದಲ್ಲಿ ಕಡಿತ ಮಾಡುವುದು, ಭವಿಷ್ಯದ ಅರ್ಥಿಕ ಭದ್ರತೆಗೆ ಹಾಕಿರುವ ಅಡಿಪಾಯ.
ಒಬ್ಬ ದೊಡ್ಡ ಉದ್ಯಮಿ ಸಾವಿರಾರು ಕೋಟಿ ಸಾಲ ಕೇಳಿಕೊಂಡು ಬರುತ್ತಾನೆ, ನೂರಾರು ಕಟ್ಟಲೆಗಳನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಕೊಡುವ ಮುನ್ನ ಅಳೆದು ತೂಗಿ ಸಾಲ ಕೊಡುತ್ತವೆ, ಹೀಗಿದ್ದೂ ಇಷ್ಟೊಂದು ಅವ್ಯವಹಾರ, ಆಕಸ್ಮಾತ್ ಆ ದೊಡ್ಡ ಉದ್ಯಮಿ ತನ್ನದೇ ಬ್ಯಾಂಕ್ ತೆಗೆಯಲು ಅವಕಾಶ ಸಿಕ್ಕರೆ? ತೋಳಕ್ಕೆ ಕುರಿ ಕಾಯಲು ಬಿಟ್ಟಂತೆ ಆಗುವುದು ಸುಳ್ಳಲ್ಲ. ಏಪ್ರಿಲ್ 2014 ರಿಂದ ಇಲ್ಲಿನ ವರೆಗೆ 23 ಹೊಸ ಬ್ಯಾಂಕಿಂಗ್ ಲೈಸನ್ಸ್ ಕೊಟ್ಟಿದ್ದಾರೆ , ಅವುಗಳಲ್ಲಿ ಎರಡು ಯೂನಿವರ್ಸಲ್ ಬ್ಯಾಂಕ್ ಲೈಸನ್ಸ್ ಉಳಿದಂತೆ 11 ಪೇಮೆಂಟ್ ಬ್ಯಾಂಕ್ಗಳು, ಇನ್ನುಳಿದ 10 ಸ್ಮಾಲ್ ಬ್ಯಾಂಕ್ ಅಡಿಯಲ್ಲಿ ಬಂದಿವೆ.  ಆದಿತ್ಯ ಬಿರ್ಲಾ, ರಿಲಯನ್ಸ್, ಟೆಕ್ ಮಹಿಂದ್ರ, ಪ್ರಮುಖರು.
11 ವಿದೇಶಿ ಬ್ಯಾಂಕ್ಗಳು ಕೂಡ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಈ ಎಲ್ಲಾ ಬ್ಯಾಂಕ್ಗಳು RBI  ಹೇಳಿರುವ ರೂಪುರೇಷೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಆದರೆ ಹಣವನ್ನು ದುರ್ಬಳಕೆ ಮಾಡಿ ದಿವಾಳಿ ಏಳುವ ಸ್ಥಿತಿ ಬಂದರೆ ಅಲ್ಲಿ ಹಣ ತೊಡಗಿಸಿದ್ದ ಗ್ರಾಹಕನ, ಹೂಡಿಕೆದಾರನ ಗತಿ ಏನು?
ನಿಮಗೆ ತಿಳಿದಿರಲಿ, ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಬ್ಯಾಂಕ್ ಇರಲಿ, ಅದು ಪ್ರೈವೇಟ್ ಇರಬಹುದು, ವಿದೇಶಿ ಬ್ಯಾಂಕ್ ಇರಬಹುದು ಅಥವಾ ರಾಷ್ಟ್ರೀಕೃತ ಬ್ಯಾಂಕ್ ಇರಬಹುದು, ಒಂದು ಲಕ್ಷದವರೆಗೆ ನಿಮಗೆ ಹಣ ಸಂದಾಯವಗುವ ವಿಮೆ ಅಥವಾ ಗ್ಯಾರಂಟೀ ಇದೆ, ಈ ಒಂದು ಲಕ್ಷ ಡಿಪೋಸಿಟ್ ಮತ್ತು ಬಡ್ಡಿ ಎರಡನ್ನು ಸೇರಿಸಿದ ಒಟ್ಟು ಮೊತ್ತ. ಉದಾಹರಣೆ ನೋಡಿ ರಾಮ ಎನ್ನುವ ವ್ಯಕ್ತಿ ಪ್ರೈವೇಟ್ ಬ್ಯಾಂಕ್ ಒಂದರಲ್ಲಿ 10 ಲಕ್ಷ ಹಣ ಡಿಪಾಸಿಟ್ ಇಟ್ಟಿದ್ದರು ಎನ್ನಿ, ಅದರ ಮೇಲಿನ ಬಡ್ಡಿ ಎರಡು ಲಕ್ಷ, ಒಟ್ಟು 12 ಲಕ್ಷ ಬ್ಯಾಂಕ್ನಿಂದ ಹಣ ಬರಬೇಕಿತ್ತು, ಆಕಸ್ಮಾತ್ ಬ್ಯಾಂಕ್ ದಿವಾಳಿ ಎದ್ದರೆ ರಾಮನಿಗೆ ನಿಗೆ ಸಿಗುವುದು 1 ಲಕ್ಷ ಮಾತ್ರ!. ಕಷ್ಟಪಟ್ಟು ದುಡಿದು ಉಳಿಸಿದ ಹಣ ಆವಿಯಂತೆ ಕರಗಿ ಹೋದರೆ ಮಾಡುವುದೇನು?
ಜಗತ್ತಿನಾದ್ಯಂತ ಹಣಕಾಸಿನ ಅವ್ಯವಹಾರಗಳಿಗೆ ಕಠಿಣ ಶಿಕ್ಷೆ ಇಲ್ಲದಿರುವುದು ನಿಜಕ್ಕೂ ಖೇದಕರ.
ನಿಮಗೆ ಗೊತ್ತೇ? ಇಲ್ಲಿಯ ತನಕ ಭಾರತದಲ್ಲಿ Insolvency and Bankruptcy ಬಗ್ಗೆ ವ್ಯವಹರಿಸುವ (ಡೀಲಿಂಗ್ ) ಒಂದು (ಸಿಂಗಲ್ ಲಾ ) ಕಾನೂನು ಇಲ್ಲ! ಕಂಪನಿಗಳ Insolvency and Bankruptcy ಕೋರ್ಟ್ ನಲ್ಲೂ, ವ್ಯಕ್ತಿಗತ Insolvency and
Bankruptcy ಅನ್ನು the Presidency Towns Insolvency Act, 1909 ಮತ್ತು Provincial Insolvency Act, 1920. ಅಡಿಯಲ್ಲಿ ನಿರ್ವಹಿಸಲಾಗುತಿತ್ತು.
ಇದೀಗ  Insolvency and Bankruptcy Code ಜಾರಿಗೆ ಬಂದಿರುವುದು ಸಂತೋಷದ  ವಿಷಯ,ಈ ಹೊಸ ಕಾನೂನಿನ ಪ್ರಕಾರ ‘Insolvency and Bankruptcy Board of India’ಎನ್ನುವ ಒಂದು ಪ್ರಾಧಿಕಾರವನ್ನು ತೆರೆಯಲಾಗುವುದು ಮತ್ತು  ಒಂದು ನಿಧಿಯನ್ನು ಸ್ಥಾಪಿಸಲಾಗುವುದು ಅದನ್ನು Insolvency and Bankruptcy Fund of India…,” ಎಂದು ಕರೆಯಲಾಗುವುದು .ಈ ಕಾನೂನಿಂದ  ಮಲ್ಯನಂತವರು  ಸುಲಭವಾಗಿ ಹಣ ಮರಳಿ ಕೊಡದೆ ಓಡಿ ಹೋಗುವುದು ಕಷ್ಟವಾಗಲಿದೆ .
ಎಸ್ಬಿಐ ನಂತ ದೈತ್ಯ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಲ್ಲಿ ಇಡಬೇಕಾದ ಕನಿಷ್ಠ ಮೊತ್ತ ಇರದಿದ್ದರೆ ಅದಕ್ಕೆ ದಂಡವಿಧಿಸಿ ಹಣ ಸಂಗ್ರಹಿಸಿದ್ದು ನಂತರದ ದಿನಗಳಲ್ಲಿ ಕನಿಷ್ಠ ಮೊತ್ತವನ್ನ ಕಡಿಮೆ ಮಾಡಿದ್ದು , ಹಲವು ಪ್ರೈವೇಟ್ ಬ್ಯಾಂಕ್ಗಳು ಟ್ರಾನ್ಸಕ್ಟನ್ ಮೇಲೆ ಹಣ ವಸೂಲಿ  ಮಾಡಲು ಶುರು  ಮಾಡಿದ್ದು ಇವೆಲ್ಲಾ ಬ್ಯಾಂಕಿಂಗ್ ಕ್ಷೇತ್ರ ದಶಕದ ಹಿಂದೆ ಇದ್ದಂತೆ ಇಲ್ಲ ಎನ್ನುವುದನ್ನ ಸಾರುತ್ತಿದೆ . ಅವಶ್ಯಕೆತೆಗಿಂತ ಹೆಚ್ಚಾಗಿ ಹರಿದು ಬಂದ ಹಣದ ಹರಿವು ಬ್ಯಾಂಕ್ಗಳ ಖಜಾನೆಯನ್ನ ತುಂಬಿಸಿವೆ ನಿಜ ಆದರೇನು ಹಾಗೆ ಬಂದ ಹಣವನ್ನ ದುಡಿಸಬೇಕು . ಠೇವಣಿ ಇಟ್ಟ ಹಣದ ಮೇಲೆ ಬಡ್ಡಿ ಕೊಡಬೇಕೆಂದರೆ ಆ ಹಣವನ್ನ ಮೊತ್ತಬ್ಬರಿಗೆ ಸಾಲ ನೀಡಬೇಕು ವಸೂಲಿ ಸರಿ ಇರಬೇಕು , ಮತ್ತೆ ಅದು ಜಡ ಮೊತ್ತವಾಗಲು ಬಿಡಬಾರದು ., ಹೀಗೆ ವ್ಯವಸ್ಥೆಯ ಒಂದು ಹಂತ ತಪ್ಪಿದರೂ ಅಪಾಯ ತಪ್ಪಿದ್ದಲ್ಲ.
ಬ್ಯಾಂಕ್ಗಳು ನೀಡುತಿದ್ದ ಸೇವೆಯ ಮಟ್ಟ ಕೂಡ ಹೀನಾಯ ಸ್ಥಿತಿಗೆ ಇಳಿದಿದೆ. ಪ್ರಿಂಟರ್ ಸರಿ ಇಲ್ಲ, ಸರ್ವರ್ ಕೆಲಸ ಮಾಡುತ್ತಿಲ್ಲ ಎನ್ನುವುದು., ಇಂದಿನ ದಿನಗಳಲ್ಲಿ ಬ್ಯಾಂಕ್ಗೆ ಹೋಗುವುದು ಒಂದು ಯಾತನೆಯಾಗಿ ಮಾರ್ಪಾಟಾಗಿದೆ. ಮೇಲಿನ ಸಾಲುಗಳಲ್ಲಿ ಹೇಳಿದಂತೆ ಸಮಸ್ಯೆಗಳ ಆಗರವಾಗಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಸರಿ ಮಾಡದೆ ಹೊಸದಾಗಿ ಪ್ರೈವೇಟ್ ಬ್ಯಾಂಕ್ಗಳನ್ನ ಕೂಡ ಪೈಪೋಟಿಗೆ ಬಿಟ್ಟರುವುದು ಹೊಸ ಸಮಸ್ಯೆ ಸೃಷ್ಟಿಯಾದಂತೆ ಸರಿ. ವಿತ್ತ ಪ್ರಪಂಚದಲ್ಲಿ ಗಳಿಗೆ ಗಳಿಗೆಗೂ ಬದಲಾಗುವ ಆಟದ ನಿಯಮಗಳನ್ನ ನಮ್ಮ ಜನಸಾಮಾನ್ಯರು ಗ್ರಹಿಸಲು ಸಾಧ್ಯವೇ ಇಲ್ಲ. ಎಲ್ಲಿಯವರೆಗೆ ಗ್ರಾಹಕ ಅಥವಾ ಜನ ಸಾಮಾನ್ಯ ಎಚ್ಚರವಾಗುವುದಿಲ್ಲವೋ ಅಲ್ಲಿಯವರೆಗೆ ಇವೆಲ್ಲಾ ನೆಡೆಯುತ್ತಲೆ
ಇರುತ್ತದೆ. ನಮ್ಮ ದೇಶದ ಕಥೆಯೇ ಇಷ್ಟು ಅಂತ ಸಿನಿಕರಾಗುವುದು ಬೇಕಿಲ್ಲ ಏಕೆಂದರೆ ಇದು ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ., ಹಲವು ಸಮಸ್ಯೆಗಳಂತೆ ಇದು ಕೂಡ ಗ್ಲೋಬಲ್.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com