ಇದೊಂದು ಸಮೂಹ ಸನ್ನಿ!. ಇಂತಹ ಸಮೂಹ ಸನ್ನಿ ರಸ್ತೆಗಿಳಿದು ಕೆಲಸಮಾಡುವ ಮಟ್ಟಕ್ಕೆ ಬೆಳೆದು ಬಿಟ್ಟರೆ ಸಾಕು!! ಅಲ್ಲಿಗೆ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪ್ಲಾನೆಟ್ ಬಿಟ್ಟು ಹೋಗಬಹದು. ಇಷ್ಟೆಲ್ಲಾ ಪೀಠಿಕೆ ಹಾಕುವ ಉದ್ದೇಶ ಬಹಳ ಸರಳ. ಗಮನಿಸಿ ನೋಡಿ ಜಗತ್ತಿನಲ್ಲಿ ಯಾವುದೇ ಅತಿ ಸಣ್ಣ ಅಥವಾ ಅತಿ ದೊಡ್ಡದು ಏನೇ ಘಟಿಸಲಿ ಆದರ ಹಿಂದೆ 'ಹಣ' ಎನ್ನುವುದು ಇದ್ದೇ ಇರುತ್ತದೆ. ಬದುಕಿಗೆ ಉಸಿರು ಹೇಗೋ ಹಾಗೆ ಜಗತ್ತಿಗೆ 'ಹಣ' ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅವಶ್ಯಕ ಹಣವನ್ನ ಗಳಿಸಲು ಮನುಷ್ಯ ಯಾವ ಹಂತಕ್ಕೂ ಹೋಗಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಆನೆಗಳ ಕೊಂದು ಅವುಗಳ ದಂತವನ್ನ, ಕಾಡನ್ನ ಕಡಿದು ಮರವನ್ನ ಮಾರಿಕೊಂಡ ಒಬ್ಬ ವೀರಪ್ಪನ್ ಹೆಸರು ನೆನೆಪಿಗೆ ಬರುತ್ತದೆ. ಇಂತಹ ವೀರಪ್ಪನ್ ವ್ಯವಸ್ಥೆಯ ಅತ್ಯಂತ ಚಿಕ್ಕ ಕೊಂಡಿ. ಅಮೆರಿಕಾ, ಯೂರೋಪು, ಚೀನಾ ದೇಶಗಳು ವಿಶ್ವದ ದೊಡ್ಡಣ್ಣನಾಗಲು ಜಟಾಪಟಿಯಲ್ಲಿ ಯಾವುದನ್ನೂ ಲೆಕ್ಕಿಸದೇ ನಾವು ಕುಳಿತ ರೆಂಬೆಯನ್ನ ಕತ್ತರಿಸುವ ಹುಂಬುತನಕ್ಕೆ ಬಿದ್ದಿದ್ದಾರೆ. ಈಗಾಗಲೇ ನಮ್ಮ ಭೂಮಿಗೆ ನಾವು ಹೊಡೆದಿರುವ ಮೊಳೆಗಳ ಲೆಕ್ಕ ಇಡುವರಾರು? ಹಾಗೆಂದು ಪ್ರಕೃತ್ತಿ ಸುಮ್ಮನೆ ಬಿಡುವುದಿಲ್ಲ. ನಾವು ಮಾಡಿದ ತಪ್ಪುಗಳಿಗೆ ಅದು ದಂಡ ವಿಧಿಸುತ್ತದೆ ಖಂಡಿತ.