ಭಾರತೀಯರ ಸರಾಸರಿ ಆಯಸ್ಸು ಈಗ 74 ವರ್ಷ. ಅಂದರೆ ದೇಶದಲ್ಲಿ 60 ಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇದು ಸ್ವಾಗತಾರ್ಹವಾದರೂ ವೃದ್ಧರ ಬದುಕು ಸಮಾಧಾನಕರವಾಗಿದೆಯೇ? ಅವರು ಸಂತೋಷವಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ 'ಇಲ್ಲ'.
ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ. ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯಗಳು ಕಡಿಮೆಯಾಗುವುದರ ಜೊತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ಆಸರೆ ಕೂಡ ಕಡಿಮೆಯಾಗುತ್ತಿರುವುದರಿಂದ ವೃದ್ಧಾಪ್ಯ ಅಸಹನೀಯವಾಗುತ್ತಿದೆ.
ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು
ಏಕಪ್ಪಾ ಆಯಸ್ಸು ಕೊಟ್ಟೆ ಬೇಗ ಕರೆದುಕೊಳ್ಳಬಾರದೇ ಎಂದು ಸಾಕಷ್ಟು ಹಿರಿಯರು ದೇವರನ್ನು ನಿತ್ಯ ಬೇಡುತ್ತಾರೆ! ದೇಹದ ಪ್ರತಿಯೊಂದು ಅಂಗಾಂಗವ್ಯವಸ್ಥೆಯೂ ದುರ್ಬಲವಾಗುತ್ತದೆ. ಜೀರ್ಣಾಂಗಗಳು ದುರ್ಬಲಗೊಂಡು ಆಹಾರ ಜೀರ್ಣವಾಗುವುದು ಕಷ್ಟ. ಅಪೌಷ್ಟಿಕತೆ ಉಂಟಾಗುತ್ತದೆ. ಮಲಬದ್ದತೆ ಬರುತ್ತದೆ. ಹೃದಯ-ರಕ್ತ ಚಲನಾವ್ಯವಸ್ಥೆಯಲ್ಲಿ ಕೊರತೆ, ಹೃದಯಾಘಾತ, ಲಕ್ವಾ ಹೊಡೆಯಬಹುದು. ಉಸಿರಾಟದ ವ್ಯವಸ್ಥೆ ಶಿಥಿಲವಾಗಿ ಉಸಿರಾಟ ಏರುಪೇರಾಗುತ್ತದೆ. ಮೂಳೆ-ಕೀಲು-ಚಾಲನೆ ಕಷ್ಟವಾಗುತ್ತದೆ. ಮಿದುಳಿನ ನರಮಂಡಲ ಬಲಹೀನವಾಗಿ ಮರೆವು, ಬುದ್ಧಿಶಕ್ತಿ ಕುಗ್ಗುತ್ತದೆ, ಸಮತೋಲನವಿಲ್ಲದೆ ಬಿದ್ದು ಮೂಳೆ-ಮುರಿಯಬಹುದು. ಪಾರ್ಕಿನ್ಸನ್ ಕಾಯಿಲೆ. ಆಲ್ಝೈಮರ್ಕಾಯಿಲೆ ಬರಬಹುದು.
ವೃದ್ಧಾಪ್ಯದಲ್ಲಿ ಆತಂಕ
ಮನಸ್ಸು ಭಯ ಆತಂಕ, ದುಃಖ, ಕೋಪ, ಹತಾಶೆ, ನಿರಾಶೆಗಳಿಂದ ಆವೃತವಾಗುತ್ತದೆ. ಅಭದ್ರತೆ, ಅನಿಶ್ಚಯತೆ, ಮಕ್ಕಳು ಬಂಧುಮಿತ್ರರ ನಿರ್ಲಕ್ಷ್ಯ, ಆರ್ಥಿಕ ಅವಲಂಬನೆ, ಸಾವಿನ ಭಯವು ಮನಸ್ಸು ಪ್ರಕ್ಷುಬ್ಧಗೊಳ್ಳುವಂತೆ ಮಾಡುತ್ತದೆ. ಎಲ್ಲದಕ್ಕಿಂತ, ಒಂಟಿತನ, ಹಿಂದೆ ಮಾಡಿದ ತಪ್ಪುಗಳು, ತೆಗೆದುಕೊಂಡ ತಪ್ಪು ನಿರ್ಧಾರಗಳು, ಪಾಪಪ್ರಜ್ಞೆ ನಕ್ಷತ್ರಿಕನಂತೆ ಕಾಡತೊಡಗುತ್ತದೆ. ಹೀಗಾಗಿ ಶೇಕಡಾ 30 ರಿಂದ 50 ರಷ್ಟು ವೃದ್ಧರು ಖಿನ್ನತೆ ಮತ್ತು ಆತಂಕದ ಮನೋಬೇನೆಯಿಂದ ಬಳಲುತ್ತಾರೆ. ಜೊತೆಗೆ ವೃದ್ಧರಿಗೆ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆಯೂ ದೊರೆಯದಿರಬಹುದು. ವೈದ್ಯರಲ್ಲಿಗೆ-ಆಸ್ಪತ್ರೆಗೆ ಕರೆದೊಯ್ಯುವವರಿಲ್ಲ. ವೈದ್ಯ ಖರ್ಚನ್ನು ಭರಿಸುವವರಿಲ್ಲ. ಅಸಹಾಯಕತೆ ಆವರಿಸಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಆರೋಗ್ಯ ಚೆನ್ನಾಗಿದ್ದರೆ ಪ್ರೀತಿಯಿಂದ ಆರೈಕೆ ಮಾಡುವವರಿರುತ್ತಾರೆ. ಆರ್ಥಿಕ ನೆರವು ಇದ್ದರೆ, ವೃದ್ಧಾಪ್ಯ ದೀರ್ಘವಾದರೂ ಹಿತ. ಇಲ್ಲದಿದ್ದರೆ ಅಹಿತವಾಗುತ್ತದೆ.
ವೃದ್ಧಾಪ್ಯ ಚೆನ್ನಾಗಿರಬೇಕೆಂದರೆ ಅದಕ್ಕೆ ಸಿದ್ಧತೆಯು ನಾವು 40 ರ ಆಸುಪಾಸಿನಲ್ಲಿಯೇ ಪ್ರಾರಂಭವಾಗಬೇಕು.
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com
Advertisement