ಡಾ. ಬಿ.ಆರ್ ಅಂಬೆಡ್ಕರ್ ಹೆಸರನ್ನ ಭಾರತದಲ್ಲಿ ಕೇಳದವರೇ ಇಲ್ಲ ಎನ್ನಬಹುದು. ಅಂಬೇಡ್ಕರ್ ಅವರದು ಅಷ್ಟು ದೊಡ್ಡ ಹೆಸರು. ಜನ ಸಾಮಾನ್ಯನಿಗೆ ಅಂಬೇಡ್ಕರ್ ಎಂದರೆ ನಮ್ಮ ಸಂವಿಧಾನವನ್ನ ರಚಿಸಿದವರು, ' ಫಾದರ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ ' ಎನ್ನುವುದು ತಿಳಿದಿದೆ. ಇನ್ನೊಂದು ವರ್ಗ ಅವರನ್ನ ದಲಿತ ನಾಯಕ ಎನ್ನುವಂತೆ ಬಿಂಬಿಸಲು ಮತ್ತು ಅಂಬೇಡ್ಕರ್ ಅವರಂತಹ ಮಹಾನ್ ಆತ್ಮವನ್ನ ಕೇವಲ ಒಂದು ಸೀಮಿತ ಪರಿಧಿಯಲ್ಲಿ ಬಂಧಿಸಲು ನೋಡುತ್ತಾರೆ. ಆದರೆ ಅಂಬೇಡ್ಕರ್ ಅವರು ಇವೆಲ್ಲವನ್ನ ಮೀರಿದ ತುಂಬು ವ್ಯಕ್ತಿತ್ವವನ್ನ ಹೊಂದಿದ್ದವರು. ಭಾರತದ ಅರ್ಥ ವ್ಯವಸ್ಥೆ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು.
ಯಾವ ರೀತಿಯಲ್ಲಿ ಅರ್ಥ ವ್ಯವಸ್ಥೆಯನ್ನ ಮುಂದುವರಿಸಿದರೆ ಸಾಮಾಜಿಕವಾಗಿ ನಾವು ಇನ್ನಷ್ಟು ಪ್ರಬಲರಾಗಬಹುದು ಎನ್ನುವ ದೂರದರ್ಶಿತ್ವ ಕೂಡ ಇತ್ತು ಎನ್ನುವುದಕ್ಕೆ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಡಾ. ಬಿ .ಆರ್ ಅಂಬೆಡ್ಕರ್ ಅವರು ಸಂವಿಧಾನ ಶಿಲ್ಪಿ ಅಷ್ಟೇ ಅಲ್ಲ ಅವರೊಬ್ಬ ಮಹಾನ್ ಎಕಾನಾಮಿಸ್ಟ್ ಆಗಿದ್ದರು. ಅವರ ಬಗೆಗಿನ ಈ ವಿಷಯ ಹೆಚ್ಚು ಜನಪ್ರಿಯವಲ್ಲ. ಆದರೆ ಭಾರತಕ್ಕೆ ಎಕನಾಮಿಸ್ಟ್ ಆಗಿ ಅವರು ನೀಡಿರುವ ಕೊಡುಗೆ ಅಪಾರ. ಅದೇನು? ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.
ಬಹಳ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ, ಅದೇನೆಂದರೆ ಅಂಬೇಡ್ಕರ್ ಅವರು ತಮ್ಮ ವೃತ್ತಿ ಜೀವನವನ್ನ ಎಕನಾಮಿಸ್ಟ್ ಆಗಿ ಪ್ರಾರಂಭಿಸುತ್ತಾರೆ. ಅಂದಿನ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ಇವರ ಹೆಸರಿಲ್ಲದೆ ಮುಕ್ತಾಯ ಕಾಣುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ತಿಳಿದುಕೊಂಡವರಾಗಿದ್ದರು. ಅಂದಿನ ದಿನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಕಾನಮಿ ಬಗ್ಗೆ ಅಧ್ಯಯನ ಮಾಡಿದ ವ್ಯಕ್ತಿ ಅಂಬೇಡ್ಕರ್ ಎನ್ನುವುದು ನಿರ್ವಿವಾದ. ಬಾಬಾ ಸಾಹೇಬ್ ಅವರು ಒಂದಲ್ಲ ಎರಡೆರೆಡು ಯೂನಿವೆರ್ಸಿಟಿಗಳಿಂದ ಡಾಕ್ಟರೇಟ್ ಪದವಿಯನ್ನ ಪಡೆದವರು. ಅಮೆರಿಕಾದ ಕೊಲಂಬಿಯಾ ಯೂನಿವೆರ್ಸಿಟಿಯಲ್ಲಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನ ಪಡೆದಿದ್ದಾರೆ. ಇಂದಿಗೂ ಇವರ ಹಲವಾರು ಅರ್ಥ ವ್ಯವಸ್ಥೆಯ ಚಿಂತನೆಗಳು ಪ್ರಸ್ತುತವಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳನ್ನ ಗಮನಿಸೋಣ.
ಸರ್ ಆರ್ಥರ್ ಲೀವಿಸ್ ಎನ್ನುವ ಅರ್ಥ ಶಾಸ್ತ್ರಜ್ಞ ಅಂಬೆಡ್ಕರ್ ಅವರ ಈ ಆರ್ಥಿಕತೆಯ ಎಳೆಯನ್ನ ಇನ್ನಷ್ಟು ವಿಸ್ತರಿಸಿ ಒಂದು ಸೆಕ್ಟರ್ ನಲ್ಲಿ ಇರುವ ಕೊರತೆಯನ್ನ ಇನ್ನೊಂದು ಸೆಕ್ಟರ್ ನಲ್ಲಿ ಹೆಚ್ಚು ಕೆಲಸವಿಲ್ಲದ ಜನರನ್ನ ಬಳಸಿಕೊಂಡು ಕೈಗಾರಿಕಾ ಕ್ರಾಂತಿ, ಮತ್ತು ಹೆಚ್ಚು ಕ್ಷಮತೆಯಿಂದ ಮ್ಯಾನ್ ಪವರ್ ಉಪಯೋಗಿಸಿ ಕೊಳ್ಳುವುದರಿಂದ ಹೇಗೆ ದೇಶದ ಆರ್ಥಿಕತೆ ಬದಲಾಗುತ್ತದೆ ಮತ್ತು ಪೆರ್ಸನಲ್ ಫೈನಾನ್ಸ್ ಕೂಡ ಬಲಿಷ್ಠವಾಗುತ್ತದೆ ಎನ್ನುವುದನ್ನ ಮಂಡಿಸಿ ಎಕನಾಮಿಕ್ಸ್ ಗೆ ನೀಡುವ ನೊಬೆಲ್ ಪ್ರಶಸ್ತಿಗೆ ಕೂಡ ಭಾಜನರಾಗುತ್ತಾರೆ. ಗಮನಿಸಿ ನೋಡಿ, ಸರ್ ಅರ್ಥರ್ ರವರು ಈ ವಾದ ಮಂಡಿಸುವ ದಶಕಗಳ ಮುಂಚೆಯೇ ಅಂಬೇಡ್ಕರ್ ಅವರು ಇದನ್ನ ಪ್ರಸ್ತಾಪಿಸಿದ್ದರು. ಈ ಘಟನೆ ಅಂಬೇಡ್ಕರ್ ಅವರು ಕೇವಲ ಭಾರತೀಯ ಆರ್ಥಿಕತೆಗೆ ಮಾತ್ರವಲ್ಲ ಜಾಗತಿಕ ಆರ್ಥಿಕತೆಗೆ ಕೂಡ ದಿಕ್ಕು ತೋರಿಸಬಲ್ಲ ಅರ್ಥಶಾಸ್ತ್ರಜ್ಞರಾಗಿದ್ದರು ಎನ್ನುವುದನ್ನ ಸಾಬೀತು ಮಾಡುತ್ತದೆ.
ಅಂಬೇಡ್ಕರ್ ಅವರ ಈ ಮಂಡನೆಯನ್ನ ವೇದವಾಕ್ಯದಂತೆ ತೆಗೆದುಕೊಂಡು ಬಹಳಷ್ಟು ದೇಶಗಳು ಇಂದಿಗೆ ಮುಂದುವರಿದ ದೇಶಗಳ ಪಟ್ಟಿಗೆ ಸೇರಿವೆ. ಭಾರತ ಮಾತ್ರ ಈ ಕ್ಷೇತ್ರದಲ್ಲಿ ಇಂದಿಗೂ ಹಾಗೆ ಉಳಿದುಕೊಂಡಿದೆ. ವಾಸ್ತವದ ಪ್ರಸ್ತಾಪನೆ ಮಾಡಬೇಕೆಂದರೆ 2016 ರಿಂದ ಈಚೆಗೆ ಅಂಬೇಡ್ಕರ್ ಅವರ ಹಲವು ಅರ್ಥ ನೀತಿಗಳಿಗೆ ಕಾಯಕಲ್ಪ ನೀಡುವ ಕೆಲಸವಾಗುತ್ತಿದೆ. ಆದರು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ.
ಕೊನೆಮಾತು: ಅಂಬೇಡ್ಕರ್ ಅವರು ತಮ್ಮ ಜೀವನದ ಒಂದು ಹಂತದ ನಂತರ ರಾಜಕೀಯ ಕ್ಷೇತ್ರಕ್ಕೆ ಬಂದರು. ಅಲ್ಲಿನ ತಮ್ಮ ಮಾತುಗಳಲ್ಲಿ ಕೂಡ ಭಾರತೀಯ ಆರ್ಥಿಕತೆ ಬಗ್ಗೆ ಅವರಿಗಿದ್ದ ಕಳಕಳಿ ವ್ಯಕ್ತಪಡಿಸುತ್ತಲೆ ಇದ್ದರು. ದೇಶ ಆರ್ಥಿಕವಾಗಿ ಭದ್ರವಾಗದ ಹೊರತು ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ದೇಶ ಆರ್ಥಿಕವಾಗಿ ಭದ್ರವಾಗಲು ದೇಶದ ಪ್ರಜೆಗಳ ಆರ್ಥಿಕತೆ ಭದ್ರವಾಗಬೇಕು ಎನ್ನುವುದು ಕೂಡ ಅವರಿಗೆ ತಿಳಿದಿತ್ತು. ಯಾವ ದೇಶದಲ್ಲಿ ಗಳಿಕೆಯ ಜೊತೆಗೆ ಉಳಿಸುವ ಸಂಪ್ರದಾಯ ಬರುತ್ತದೆ, ಆ ದೇಶದಲ್ಲಿ ಆರ್ಥಿಕ ಭದ್ರತೆ ತಾನೇ ತಾನಾಗಿ ಬರುತ್ತದೆ ಎನ್ನುವುದು ಕೂಡ ಬಾಬಾ ಸಾಹೇಬರ ಮಾತಾಗಿತ್ತು. ಒಂದು ಹಂತದ ವರೆಗೆ ಅವರ ಮಾತನ್ನ ಭಾರತದ ಸಮಾಜ ಪಾಲಿಸಿದೆ. ಬಹಳಷ್ಟು ಪಾಲಿಸುವ ಅವಶ್ಯಕತೆಯಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರನ್ನ ಯಾವುದೇ ಒಂದು ವರ್ಗಕ್ಕೆ ಸೀಮಿತ ಮಾಡದೆ ಅವರಲೊಬ್ಬ ದಾರ್ಶನಿಕ ಅರ್ಥಶಾಸ್ತ್ರಜ್ನರನ್ನ ನಾವು ಕಾಣಬೇಕಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement