ಸಾಮಾನ್ಯವಾಗಿ ಬೇಸಿಗೆಯ ಉರಿಬಿಸಿಲಿನ ಸಮಯದಲ್ಲಿ ನಾವು ಹೆಚ್ಚಾಗಿ ಬೆವರುವುದರಿಂದ ಸಣ್ಣ ಪುಟ್ಟ ಚರ್ಮದ ಸೋಂಕುಗಳು ಎದುರಾಗುತ್ತವೆ. ಇತ್ತೀಚೆಗೆ ಹವಾಮಾನ ವೈಪರೀತ್ಯದ ಕಾರಣದಿಂದ ಚಳಿಗಾಲದಲ್ಲಿಯೂ ಬಿಸಿಲು ಹೆಚ್ಚಾಗಿರುವುದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಆಗಾಗ ತುರಿಕೆ, ದದ್ದುಗಳು, ಗುಳ್ಳೆಗಳು ಇತ್ಯಾದಿ ಚರ್ಮ ಸಂಬಂಧಿತ ತೊಂದರೆಗಳು ಉಂಟಾಗುವುದು ಸಹಜ. ಇವೆಲ್ಲವೂ ಅಂಟು ಜಾಡ್ಯಗಳು. ಫಂಗಸ್ಗಳಿಂದ ಬರುವಂಥದ್ದು. ಗಜಕರ್ಣ ಇಂತಹ ಒಂದು ಸಾಮಾನ್ಯ ಶಿಲೀಂಧ್ರ (ಫಂಗಲ್) ಸೋಂಕು. ಇದಕ್ಕೆ ಹುಳುಕಡ್ಡಿ ಎಂದೂ ಕರೆಯುತ್ತೇವೆ.
ಈ ಶಿಲೀಂಧ್ರ ಸೋಂಕು ತಗುಲಿದಾಗ ಉಬ್ಬಾದ ಅಂಟು ಹೊಂದಿರುವ ದುಂಡಗಿನ ಆಕಾರದ ದದ್ದು ಅಥವಾ ಗುಳ್ಳೆ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕಡಿತವನ್ನು ಉಂಟುಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿಯಾದರೂ ಚರ್ಮದ ಪದರಪದರವಾಗಿ ಏಳುವಂತೆ ಮಾಡಬಹುದು. ಈ ಫಂಗಸ್ ಉಗುರು, ಕೂದಲನ್ನು ಒಳಗೊಂಡ ಸತ್ತ ಚರ್ಮದ ಅಂಗಾಂಶಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಪಾದ, ತೊಡೆ ಸಂದು, ಒಳ ತೊಡೆ, ಕಂಕುಳು ಮತ್ತು ಕೈ ತೋಳುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ತಲೆಯಲ್ಲಿ ಗಜಕರ್ಣ ಕಾಣಿಸಿಕೊಂಡಾಗ ಕೂದಲು ಉದುರುತ್ತದೆ. ಕಾಲಿನಲ್ಲಿ ಗಜಕರ್ಣ ಪ್ರಭಾವ ತೋರಿದಾಗ ತುಂಬಾ ಕಡಿತ ಬರುತ್ತದೆ. ಕಾಲು ಬೆರಳುಗಳ ಮಧ್ಯೆ ಚರ್ಮ ಬಿರುಕು ಬಿಟ್ಟುಕೊಳ್ಳುತ್ತದೆ. ಈ ಸೋಂಕು ಉಗುರಿನಲ್ಲಿಯೂ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)
ಗಜಕರ್ಣ ಕಿರಿಯರು ಹಿರಿಯರೆನ್ನದೇ ಎಲ್ಲರಲ್ಲೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಡರ್ಮಟೋಫೈಟ್ಸ್ ಎಂಬ ಹೆಸರಿನ ಚರ್ಮದ ಫಂಗಸ್ಸಿನಿಂದ ಬರುತ್ತದೆ. ಈ ಫಂಗಸ್ ದೇಹದ ಒಳಭಾಗಕ್ಕೆ ಪ್ರವೇಶಿಸುವುದಿಲ್ಲ. ಹೊರಗೇ ಸಾಕುಸಾಕು ಎನ್ನಿಸುವಷ್ಟು ತೊಂದರೆ ಕೊಡುತ್ತದೆ. ಸೋಂಕುಪೀಡಿತರ ಚರ್ಮದ ಮೇಲಿನ ಗುಳ್ಳೆಯನ್ನು ಸ್ಪರ್ಶಿಸಿ ಅಥವಾ ತುರಿಸಿಕೊಂಡಾಗ, ಫಂಗಸ್ ಚರ್ಮಕ್ಕೆ ಅಂಟಿಕೊಂಡು ಅಥವಾ ಉಗುರಿನ ಒಳಗೆ ಪ್ರವೇಶ ಪಡೆದು ಆ ವ್ಯಕ್ತಿ ಇನ್ನೊಬ್ಬರನ್ನು ಮುಟ್ಟಿದಾಗ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಹಾಗೆಯೇ ಒಬ್ಬರ ಬಾಚಣಿಗೆಗಳನ್ನು ಇನ್ನೊಬ್ಬರು ಬಳಸಿದರೆ ತಲೆಯ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಗಜಕರ್ಣ ಬಂದವರು ಅದು ತಮ್ಮ ದೇಹದ ಇತರ ಭಾಗಗಳಿಗೆ ಅಥವಾ ಇತರರಿಗೆ ಹರಡದಂತೆ ಎಚ್ಚರಿಕೆಯನ್ನು ವಹಿಸಬೇಕು.
ಈ ಸಮಸ್ಯೆ ಬರಲು ಮುಖ್ಯ ಕಾರಣ ಎಂದರೆ ಸ್ವಚ್ಛತೆ ಪಾಲನೆ ಮಾಡದಿರುವುದು. ಚರ್ಮದ ಮೇಲೆ ಎಲ್ಲಿ ಬೇಕಾದರೂ ಈ ಸೋಂಕು ಬರಬಹುದು. ಗಜಕರ್ಣ ಮುಖ್ಯವಾಗಿ ತೊಡೆಯ ಸಂಧಿಯಲ್ಲಿ, ತೋಳುಗಳ ಕೆಳಗೆ, ಸೊಂಟದ ಸುತ್ತಲೂ ಹಾಗೂ ಕತ್ತಿನ ಹತ್ತಿರ ಕಾಣಿಸಿಕೊಳ್ಳುತ್ತದೆ. ಈ ಫಂಗಸ್ ಸೋಂಕು ಬಂದರೆ ಚರ್ಮದಲ್ಲಿ ಆಗಾಗ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತಲೇ ಇರುತ್ತದೆ. ಒಂದು ವೇಳೆ ಇದನ್ನು ಕೆರೆದುಕೊಳ್ಳಬೇಕು ಎಂದು ಅನ್ನಿಸಿದರೂ ಸಹ ಅದನ್ನು ಆದಷ್ಟೂ ತಡೆದುಕೊಳ್ಳಬೇಕು. ಏಕೆಂದರೆ ಅದನ್ನು ಕೆರೆದುಕೊಂಡು ಮತ್ತೆ ಅದೇ ಕೈಯಿಂದ ದೇಹದ ಇತರ ಭಾಗವನ್ನು ಸ್ಪರ್ಶಿಸಿದರೆ ಈ ಸೋಂಕು ಅಲ್ಲಿಗೂ ಹರಡುತ್ತದೆ.
ಗಜಕರ್ಣ ಕಾಣಿಸಿಕೊಂಡಾಗ ಮೊದಲಿಗೆ ಚರ್ಮದ ಬಾಧಿತ ಜಾಗವನ್ನು ತುಂಬ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅ ಸ್ಥಳವನ್ನು ಆದಷ್ಟು ಸೋಪಿನಿಂದ ಸ್ವಚ್ಛಗೊಳಿಸಬೇಕು. ಸೋಪ್ ಬಳಸಿ ತೊಳೆದಾಗ ಸೋಂಕು ಹರಡುವುದನ್ನು ತಡೆಯಬಹುದು. ಸ್ವಚ್ಛತೆಯಿಂದ ಇದ್ದಾಗ ಸೋಂಕನ್ನು ಸುಲಭವಾಗಿ ಹರಡದಂತೆ ತಡೆಯಬಹುದು.
ಸುಲಭವಾಗಿ ಈ ಮನೆಮದ್ದುಗಳನ್ನು ಬಳಸಿ ಗಜಕರ್ಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದೆಲ್ಲಾ ಮಾಡಿಯೂ ಸಮಸ್ಯೆ ಸರಿಹೋಗದಿದ್ದಲ್ಲಿ ಅಥವಾ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ತಡಮಾಡದೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.
ಇದನ್ನೂ ಓದಿ: ಜಾಂಡಿಸ್ ಅಥವಾ ಕಾಮಾಲೆ ರೋಗ (ಕುಶಲವೇ ಕ್ಷೇಮವೇ)
ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಔಷಧಿಗಳಿವೆ. ಪಂಚಕರ್ಮ ಚಿಕಿತ್ಸೆ ಇದಕ್ಕೆ ಅತ್ಯುತ್ತಮ ಪರಿಹಾರ ವಿಧಾನ. ಪದೇ ಪದೇ ಈ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ ಈ ಚಿಕಿತ್ಸೆ ಒಳ್ಳೆಯದು. ಇದರಲ್ಲಿ ಶೋಧನದ ಮೂಲಕ ದೇಹವನ್ನು ಶುದ್ಧಿಗೊಳಿಸಿ ನಂತರ ಶಮನ ಚಿಕಿತ್ಸೆ ನೀಡುವುದರಿಂದ ಉತ್ತಮ ಫಲಿತಾಂಶ ದೊರಕುತ್ತದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಮೊದಲು ಸ್ನೇಹನ, ಸ್ವೇದನ ಮಾಡಿ ನಂತರ ವಿರೇಚನ ಚಿಕಿತ್ಸೆ ಮಾಡುತ್ತೇವೆ. ಜೊತೆಗೆ ಮಹಾಮಂಜಿಷ್ಟಾದಿ ಕಷಾಯ, ಖದಿರಾರಿಷ್ಟ ಮುಂತಾದ ಔಷಧಿಗಳು ಲಭ್ಯ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
Advertisement