social_icon

ಸಬ್ಸಿಡಿಗಳ ಭರಾಟೆ; ಅರ್ಜೆಂಟಿನಾದಲ್ಲಿ ಆರ್ಥಿಕ ಕುಸಿತ; ಹಣದುಬ್ಬರದ್ದೆ ಗಲಾಟೆ! (ಹಣಕ್ಲಾಸು)

ಹಣಕ್ಲಾಸು-361

ರಂಗಸ್ವಾಮಿ ಮೂನಕನಹಳ್ಳಿ

Published: 25th May 2023 08:04 AM  |   Last Updated: 25th May 2023 04:07 PM   |  A+A-


File pic

ಸಾಂಕೇತಿಕ ಚಿತ್ರ

Posted By : Srinivas Rao BV
Source :

ಅರ್ಜೆಂಟಿನಾ ಎಂದ ತಕ್ಷಣ ಅವರ ಫುಟ್ಬಾಲ್ ಬಗೆಗಿನ ಪ್ರೀತಿ ಮಸ್ತಕದಲ್ಲಿ ಹಾದು ಹೋದರೆ ಅದು ಸಾಮಾನ್ಯ. ಅರ್ಜೆಂಟಿನಿಯನ್ನರು ಫುಟ್ಬಾಲ್ ಕ್ರೀಡೆಯನ್ನ ಆ ಮಟ್ಟಿಗೆ ಪ್ರೀತಿಸುತ್ತಾರೆ. ಅದೇ ಪ್ರೀತಿ, ಅದೇ ಡೆಡಿಕೇಷನ್ ಆರ್ಥಿಕತೆಯನ್ನ ನಿರ್ವಹಿಸುವುದರಲ್ಲಿ ಇದಿದ್ದಿದ್ದರೆ ಈ ಸಾಲುಗಳನ್ನ ಬರೆಯುವ ಪ್ರಮೇಯ ಬರುತ್ತಿರಲಿಲ್ಲ. ಅರ್ಜೆಂಟಿನಾ ಇಂದಿಗೆ 104 ಪ್ರತಿಶತ ಹಣದುಬ್ಬರವನ್ನ ಎದುರಿಸುತ್ತಿದೆ!!. ಅಂದರೆ ವರ್ಷದಲ್ಲಿ ಸರುಕು ಮತ್ತು ಸೇವೆಯ ಬೆಲೆ 100 ಪೆಸೊ ಇದದ್ದು 200 ದಾಟಿರುತ್ತದೆ. ಮುಂದಿನ ವರ್ಷ 200 ಪೆಸೊ 400ಕ್ಕೂ ಮೇಲೇರಿರುತ್ತದೆ. ಅಂದರೆ ವರ್ಷದಿಂದ ವರ್ಷಕ್ಕೆ ಹೊಸ ಬೆಲೆಯ ಮೇಲೆ 104 ಪ್ರತಿಶತ ಹೆಚ್ಚಳ ಕಾಣುತ್ತಾ ಹೋಗುತ್ತಿದೆ. ಅರ್ಜೆಂಟಿನಾ ಈ ರೀತಿಯ ಹಣಕಾಸು ನಿರ್ವಹಣೆಯಲ್ಲಿ ಲೆಕ್ಕ ತಪ್ಪುತ್ತಿರುವುದು ಮೊದಲೇನಲ್ಲ, ಅಲ್ಲಿನ ಹಣಕಾಸು ನಿರ್ವಹಣೆ ಹದಗೆಟ್ಟು ಜನ ಬೀದಿಗಿಳಿದು ಪ್ರತಿಭಟಿಸಿದ್ದನ್ನ ಕಂಡ ಅನುಭವ ನನ್ನದು. ಇದೀಗ 2023 ರಲ್ಲಿ ಕೂಡ ಜನ ಮತ್ತೆ ಬೀದಿಗಿಳಿದಿದ್ದಾರೆ. ಈ ಬಾರಿ ಸಂಘರ್ಷ ಸ್ವಲ್ಪ ಜೋರಾಗೆ ಇದೆ. ಅದು ಹಿಂಸೆಗೂ ಕೂಡ ತಿರುಗುತ್ತಿದೆ ಎನ್ನುವುದು ಮಾತ್ರ ಖೇದಕರ. ಈ ಮಟ್ಟದ ಹಣದುಬ್ಬರಕ್ಕೆ ಪ್ರಮುಖ ಕಾರಣಗಳೇನು? ಎನ್ನುವುದನ್ನ ಒಂದಷ್ಟು ಅರಿತುಕೊಳ್ಳುವ ಪ್ರಯತ್ನಮಾಡೋಣ.

ಇದನ್ನೂ ಓದಿ: ಕೊರೋನೋತ್ತರ ಹಣದುಬ್ಬರ: ಜಗತ್ತಿಗೆ ಜಗತ್ತೇ ತತ್ತರ!

ಸಬ್ಸಿಡಿಗಳ ಭರಾಟೆಯಲ್ಲಿ ಖಜಾನೆ ಖಾಲಿಯಾಗಿ ಹೋಯ್ತು: ಅರ್ಜೆಂಟೀನಾದಲ್ಲಿ ಇರುವುದು ಎಡಪಂಥೀಯ ಸೋಷಿಯಲಿಸ್ಟ್ ಸರಕಾರ. ಅದೂ ಪೂರ್ಣ ಬಹುಮತವಿಲ್ಲದ ಹೊಂದಾಣಿಕೆ ಸರಕಾರ. ಈ ದೇಶದಲ್ಲಿ ಯೂನಿವೆರ್ಸಿಟಿ ಓದು, ಸಾರಿಗೆ ವ್ಯವಸ್ಥೆ, ಹೆಲ್ಥ್ ಕೇರ್, ಮತ್ತು ಎನೆರ್ಜಿ ಅಂದರೆ ವಿದ್ಯುತ್, ಗ್ಯಾಸ್, ಪೆಟ್ರೋಲಿಯಂ ಪದಾರ್ಥಗಳ ಮೇಲೆ ಬಹಳಷ್ಟು ಸಬ್ಸಿಡಿಯನ್ನ ನೀಡಲಾಗಿದೆ. ಜನರು ಈ ಸೌಕರ್ಯಗಳಿಗೆ ನೀಡುವ ಹಣ ಇಲ್ಲವೆನ್ನುವಷ್ಟು ಕಡಿಮೆ. ಹೀಗಾಗಿ ಸರಕಾರಕ್ಕೆ ಆದಾಯದ ಮೂಲದಲ್ಲಿ ಕೊಡಲಿ ಪೆಟ್ಟು ಬಿದ್ದಿದೆ. ಸರಕಾರದ ಬಳಿ ಹಣವಿಲ್ಲದ ಕಾರಣ ಅದು ಡೆಟ್ ಬಾಂಡ್ಗಳನ್ನ ಹೊರಡಿಸಿ ಹಣವನ್ನ ಮಾರುಕಟ್ಟೆಯಿಂದ ಪಡೆದುಕೊಂಡಿತು. ಸಾಲ 2018 ರಿಂದ ಹೆಚ್ಚುತ್ತಾ ಹೋಯ್ತು.

  1. 2020ರ ಆರಂಭದಲ್ಲಿ ಶುರುವಾದ ಕೋವಿಡ್ ಎಳೆದ ಬರೆ ಕೂಡ ದೊಡ್ಡದು: ಜಗತ್ತಿಗೆ ಜಗತ್ತೇ ಕೋವಿಡ್ ಲಾಕ್ ಡೌನ್ನಿಂದ ತತ್ತರಿಸಿ ಹೋಗಿದ್ದು ತಿಳಿದ ವಿಷಯ. 2018ರಿಂದ ಆರ್ಥಿಕ ಬಿಕ್ಕಟ್ಟು ಎದುರಿಸಲು ಶುರುವಾಗಿದ್ದ ಅರ್ಜೆಂಟಿನಾ ಮಟ್ಟಿಗೆ ಕೋವಿಡ್ ಕೊಟ್ಟ ಪೆಟ್ಟು ಅತ್ಯಂತ ತೀವ್ರವಾಗಿತ್ತು. ಈ ವರ್ಷಗಳಲ್ಲಿ ಅಲ್ಪಸ್ವಲ್ಪವಿದ್ದ ಆದಾಯಕ್ಕೂ ಪೆಟ್ಟು ಬಿತ್ತು, ಜೊತೆಗೆ ಖರ್ಚು ಕೂಡ ಬಹಳ ಹೆಚ್ಚಾಯ್ತು. ಹೀಗಾಗಿ ಸಾಲದ ಭಾರ ಇನ್ನಷ್ಟು ಜಾಸ್ತಿಯಾಯ್ತು.
  2. ಹೆಚ್ಚಿದ ಸಾಲದ ಮೇಲಿನ ಇಂಟರೆಸ್ಟ್, ಅಸಲು ಮರುಪಾವತಿಯಲ್ಲಿ ತಪ್ಪಿದ ಸರಕಾರ: ಸರಕಾರ ಡೆಟ್ ಬಾಂಡ್ ಹೊರಡಿಸಿ ಹಣವನ್ನ ಪಡೆದು ಅಂದಿನ ದಿನವನ್ನ ಹೇಗೋ ಕಳೆದು ಬಿಟ್ಟಿತ್ತು. ಆದರೆ ಸಾಲದ ಮೇಲಿನ ಬಡ್ಡಿಯನ್ನ ಕೊಡುವ ಸಮಯದಲ್ಲಿ, ಒಂದಷ್ಟು ಅಸಲು ಮರುಪಾವತಿಸಬೇಕಾದ ಸಮಯದಲ್ಲಿ ಹಣವಿಲ್ಲದ ಕಾರಣ 'ಡಿಫಾಲ್ಟ್ ' ಮಾಡಿತು. ಸರಕಾರವೇ ಡಿಫಾಲ್ಟರ್ ಎನ್ನಿಸಿಕೊಂಡರೆ? ಇನ್ನ್ಯಾರನ್ನ ನಂಬುವುದು? ಜನರಿಗೆ ಪೆಸೊ ಮೇಲಿನ ನಂಬಿಕೆ ಹೊರಟುಹೋಯ್ತು. ದೇಶದ ಹಣದ ಮೇಲೆ ಜನರು ನಂಬಿಕೆ ಕಳೆದುಕೊಂಡರು.
  3. ತನ್ನ ಕಂತುಗಳನ್ನ ಪಾವತಿಸಲು, ದೇಶ ನಡೆಸಲು ಹೆಚ್ಚಿನ ಹಣವನ್ನ ಮನಬಂದಂತೆ ಮುದ್ರಿಸಲಾಯಿತು: ಹೌದು ಕೊರೋನ ಕಾಲದ ಸಂಕಷ್ಟದ ಜೊತೆಗೆ ತನ್ನ ಹಳೆಯ ಬಾಕಿಗಳನ್ನ ತೀರಿಸಲು ಹಣವನ್ನ ಮುದ್ರಿಸಿಲಾಯಿತು. ತಕ್ಷಣಕ್ಕೆ ಜನರೂ ಖುಷಿ, ಸಮಸ್ಯೆಯೂ ಪರಿಹಾರವಾಯ್ತು. ಯಾವಾಗ ಹೆಚ್ಚಿನ ಹಣವನ್ನ ಮುದ್ರಿಸಿ ಹಂಚಲಾಯಿತು, ಹಣದುಬ್ಬರ ತಲೆಯೆತ್ತಿತ್ತು. ಸರುಕು ಮತ್ತು ಸೇವೆಯ ಬೆಲೆ ಇನ್ನಿಲ್ಲದೆ ಹೆಚ್ಚಾಗ ತೊಡಗಿತು. ನಿಧಾನವಾಗಿ ಜನ ಪೆಸೊ ಮೇಲಿನ ನಂಬಿಕೆಯನ್ನ ಕಳೆದುಕೊಂಡರು. ಇದರಿಂದ ಪೆಸೊ ಡಾಲರ್ ಎದುರು ಇನ್ನಿಲ್ಲದ ಕುಸಿತ ಕಂಡಿತು.
  4. ಡಾಲರ್ ಡಾಮಿನೇನ್ಸ್: ಯಾವುದೇ ದೇಶ ಕುಸಿತ ಕಂಡರೆ ರಣಹದ್ದಿನಂತೆ ಎರಗುವ ಅಮೆರಿಕಾ ಇಲ್ಲಿ ಕೂಡ ಅದನ್ನೇ ಮಾಡಿತು. ದೇಶದ ಅರ್ಧಕರ್ಧ ವೆಲ್ತ್ ಸದ್ದಿಲ್ಲದೇ ಅಮೆರಿಕಾ ಕಸಿದು ಕೊಂಡು ಬಿಟ್ಟಿತು. ಜನ ಯಾವ ಮಟ್ಟಕ್ಕೆ ಪೆಸೊ ಮೇಲಿನ ನಂಬಿಕೆ ಕಳೆದುಕೊಂಡರು ಎಂದರೆ ಗಮನಿಸಿ 1 ಡಾಲರ್ಗೆ 140 ಪೆಸೊ ನೋಂದಾಯಿತ ಎಕ್ಸ್ಚೇಂಜ್ ಬೆಲೆಯಾಗಿದ್ದರೆ, ಕಪ್ಪು ಮಾರುಕಟ್ಟೆಯಲ್ಲಿ 1 ಡಾಲರ್ ಗೆ 290ಕ್ಕೂ ಹೆಚ್ಚು ಪೆಸೊ ನೀಡಿ ಜನ ಡಾಲರ್ ಖರೀದಿಸ ತೊಡಗಿದ್ದಾರೆ. ಗಮನಿಸಿ ಹೀಗೇಕೆ ಆಗುತ್ತದೆ ಎಂದರೆ ನಿಮ್ಮ ಬಳಿ 1000ಪೆಸೊ ಇರುತ್ತದೆ ಎಂದುಕೊಳ್ಳಿ ಹಣದುಬ್ಬರ ಹೆಚ್ಚಾದಾಗ ಆರು ತಿಂಗಳಲ್ಲಿ 1000 ಪೆಸೊ 500 ಅಥವಾ 400 ಪೆಸೋಗೆ ಸಮವಾಗುತ್ತದೆ. ಕುಳಿತಲ್ಲೇ ಹಣ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಜನ ಡಾಲರ್ ಖರೀದಿಸಲು ಮುಗಿ ಬೀಳುತ್ತಾರೆ. ಡಾಲರ್ ಇನ್ಫ್ಲೇಶನ್ ಎದುರು ಹೆಡ್ಜ್ ನಂತೆ ಕಾರ್ಯ ಮಾಡುತ್ತದೆ. ಭಾರತದಲ್ಲಿ ನೆಲದ ಬೆಲೆ ಅಂದರೆ ರಿಯಲ್ ಎಸ್ಟೇಟ್ ಬೆಲೆ ಹೆಚ್ಚಳಕ್ಕೂ ಹಣದುಬ್ಬರ ಕಾರಣ.
  5. ಮೇಲಿನ ಎಲ್ಲಾ ಕಾರಣದಿಂದ ಬಡತನ ಹೆಚ್ಚಾಯ್ತು: ಸೌತ್ ಅಮೆರಿಕಾದ ಎರಡನೇ ಅತಿ ದೊಡ್ಡ ಎಕಾನಮಿ ಎನ್ನುವ ಅರ್ಜೆಂಟೀನಾದಲ್ಲಿ ಇಂದಿಗೆ ಬಡತನ ತಾಂಡವಾಡುತ್ತಿದೆ. ಒಟ್ಟು ಜನಸಂಖ್ಯೆಯ 40 ಪ್ರತಿಶತ ಜನರು ಬಡತನದಲ್ಲಿದ್ದರೆ ಎನ್ನುವ ಅಂಕಿಅಂಶ ನಿಜಕ್ಕೂ ಆಘಾತಕಾರಿ. ಇವೆಲ್ಲವೂ ಚೈನ್ ಲಿಂಕ್ ಇದ್ದಹಾಗೆ. ಒಳಿತಾದರೆ ಹೆಚ್ಚು ಒಳಿತಾಗುತ್ತದೆ. ಕೆಡುಕಾದರೆ ಹೆಚ್ಚು ಕೆಡುಕು. ಬಡತನ ಇನ್ನಷ್ಟು ಬಡತನಕ್ಕೆ ಕಾರಣವಾಗುತ್ತಿದೆ.
  6. ಕಿಚಡಿ ಸರಕಾರ, ಒಮ್ಮತವಿಲ್ಲದ ಸರಕಾರದ ನಿರ್ಧಾರಗಳು: ಇಂಗ್ಲೆಂಡ್ ದೇಶದಲ್ಲಿ ಆದ ಪರಿಸ್ಥಿತಿ ಹೆಚ್ಚು ಕಡಿಮೆ ಅರ್ಜೆಂಟೀನಾದಲ್ಲಿ ಕೂಡ ಆಗಿದೆ. ರಾಜಕೀಯ ಪಕ್ಷಗಳಲ್ಲಿ ಸಹಮತವಿಲ್ಲ. ಅರ್ಜೆಂಟೀನಾದಲ್ಲಿ ಮೂರು ಪಕ್ಷಗಳ ಹೊಂದಾವಣಿಕೆ ಸರಕಾರ ನಡೆಯುತ್ತಿದೆ. ತೀವ್ರ ಎಡಪಂತೀಯ ಪಕ್ಷವೊಂದು ಇನ್ನೆರೆಡು ಲಿಬರಲ್ ಪಕ್ಷಗಳ ಜೊತೆ ಕೈ ಜೋಡಿಸಿ ಅಧಿಕಾರ ಹಿಡಿದಿದೆ. ಜನರಿಗೆ ಯಾರಾದರೂ ಅಧಿಕಾರ ನಡೆಸಲಿ ನಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿ ಸುಧಾರಿಸಿದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಅಕ್ಟೋಬರ್ 2023 ರಲ್ಲಿ ಸಾರ್ವಜನಿಕ ಚುನಾವಣೆ ನಡೆಯಬೇಕಿದೆ. ಅದು ಹಿಂಸೆಗೆ ತಿರುಗದಿದ್ದರೆ ಸಾಕು.

ಎಲ್ಲವೂ ಪುಕ್ಕಟೆ ಅಥವಾ ಸಬ್ಸಿಡಿಯಲ್ಲಿ ಸಿಕ್ಕಾಗ ಇದು ಬೇಡ, ಸೇವೆಗೆ ತಕ್ಕ ಬೆಲೆಯನ್ನ ತೆಗೆದುಕೊಳ್ಳಿ ಎಂದು ಯಾವೊಂದು ನಾಗರೀಕ ಸಂಸ್ಥೆಯೂ ಮುಂದೆ ಬರಲಿಲ್ಲ. ಸಿಕ್ಕದ್ದನ್ನ ತಿಂದುಂಡು ಸುಖವಾಗಿದ್ದು, ಇದೀಗ ಅದಕ್ಕೆ ಬೆಲೆ ತೆರುವ ಕಾಲದಲ್ಲಿ ರಾಜಕಾರಿಗಳನ್ನ, ರಾಜಕೀಯ ಪಕ್ಷವನ್ನ ಪೂರ್ಣವಾಗಿ ಹೊಣೆ ಮಾಡುವುದು ಕೂಡ ಸರಿಯಲ್ಲ. ಹಿಂದೆ ಯಥಾ ರಾಜ, ತಥಾ ಪ್ರಜಾ ಎನ್ನುವ ಮಾತಿತ್ತು. ಇಂದು ಅದು ಬದಲಾಗಿದೆ ಯಥಾ ಪ್ರಜಾ, ತಥಾ ರಾಜ ಎನ್ನುವಂತಾಗಿದೆ. ಗಮನಿಸಿ ನೋ , ಮೇಲಿನ ಅಂಶಗಳನ್ನ ಲಿಂಕ್ ಮಾಡಿ ನೋಡಿ, ಅವೆಲ್ಲವೂ ಒಂದಕ್ಕೊಂದು ಪೂರಕವಾಗಿದೆ, ಎಲ್ಲವೂ ಶುರುವಾಗಿದ್ದು ಸಬ್ಸಿಡಿ ನೀಡುವುದರಿಂದ ಎನ್ನುವುದು ವೇದ್ಯ.

ಇದನ್ನೂ ಓದಿ: ಯೂರೋಪು ವಲಸೆ: ಭಾರತೀಯರ ಮುಂದಿದೆ ಸವಾಲು-ಅವಕಾಶ!

ಪ್ರಜೆಗಳಾಗಿ ನಾವು ಒಂದು ಪ್ರಶ್ನೆಯನ್ನ ನಾವು ಕೇಳಿಕೊಳ್ಳಬೇಕು. ನಮ್ಮ ಮನೆಗೆ ಆದಾಯವಿಲ್ಲದಿದ್ದರೆ ಮನೆ ನಡೆಸಲು ಹೇಗೆ ಸಾಧ್ಯ? ಸುಮ್ಮನೆ ಊಹಿಸಿಕೊಂಡು ನೋಡಿ. ಯಾವುದೇ ಆದಾಯವಿಲ್ಲದೆ ಎಷ್ಟು ದಿನ, ತಿಂಗಳು, ವರ್ಷ ನೀವು ಮನೆಯನ್ನ ನಡೆಸಬಲ್ಲಿರಿ? ಈಗ ಇದೆ ಪ್ರಶ್ನೆಯನ್ನ ರಾಜ್ಯಕ್ಕೂ, ದೇಶಕ್ಕೂ ವಿಸ್ತರಿಸಿಕೊಳ್ಳಿ. ಉತ್ತರ ನಿಮಗೆ ಸಿಗುತ್ತದೆ. ಸರಕಾರ ನಡೆಸಲು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು, ಸಮಾಜದ ಅಭಿವೃದ್ಧಿಗೆ ಎಲ್ಲಕ್ಕೂ ಹಣ ಬೇಕು. ಸರಕಾರ ನಡೆಸುವುದು ಎಂದರೆ ಅದು ಸುಲಭದ ಮಾತಲ್ಲ. ಅದು ಎರಡು ಅಲುಗಿನ ಕತ್ತಿ. ಎಲ್ಲವನ್ನೂ ಎಲ್ಲರಿಗೂ ಪುಕ್ಕಟೆ ಕೊಡದಿದ್ದರೂ, ಸಬ್ಸಿಡಿ, ಅಂದರೆ ಕಡಿಮೆ ಬೆಲೆಯಲ್ಲಿ, ಡಿಸ್ಕೌಂಟ್ ಬೆಲೆಯಲ್ಲಿ ಕೊಡುವುದು ಕೂಡ ಸಾಧ್ಯವಿಲ್ಲದ ಮಾತು ಎನ್ನುವುದನ್ನ ಅರ್ಜೆಂಟಿನಾ ಸಾಬೀತು ಮಾಡಿದೆ. ವೆನಿಜುವೆಲಾ ಎನ್ನುವ ಇನ್ನೊಂದು ದೇಶದ ಆರ್ಥಿಕ ಪರಿಸ್ಥಿತಿ ವಿವರಿಸಲು ಕೂಡ ಆಗದಷ್ಟು ಹಾಳಾಗಿದೆ. ಅಲ್ಲಿಯ ಕಥೆಯು ಸೇಮ್. ಪುಕ್ಕಟೆ ಕೊಟ್ಟಾಗ ಹುಗೊ ಚಾವೇಸ್ ಎನ್ನುವ ನಾಯಕನನ್ನ ದೇವರು ಎಂದಿದ್ದ ಜನತೆ ಇಂದಿಗೆ ಶಪಿಸುತ್ತಿದ್ದಾರೆ.

ಇದನ್ನೂ ಓದಿ: ಡಿರೈವೆಟಿವ್ಸ್ ಅಂದರೆ ಏನು-ಎತ್ತ? ಮಾಹಿತಿಯತ್ತ ಇರಲಿ ಚಿತ್ತ!

ಕೊನೆಮಾತು: ಅರ್ಜೆಂಟಿನಾ ಇಂದಿಗೆ ದಿವಾಳಿಯತ್ತ ಸಾಗಿದೆ.ಅಂದರೆ ದೇಶದಲ್ಲಿ ಹಣವಿರುವುದಿಲ್ಲ, ಅಂದರೆ ಮೌಲ್ಯವಿರುವುದಿಲ್ಲ. ಜಾಗತಿಕ ಮಟ್ಟದಲ್ಲಿ ಇದನ್ನ ರನ್ನಿಂಗ್ ಔಟ್ ಆಫ್ ಮನಿ ಎನ್ನಲಾಗುತ್ತದೆ. ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಉಳಿದಿವೆ. ಈ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಆರ್ಥಿಕವಾಗಿ ಬಸವಳಿದಿರುವ ಅಮೆರಿಕಾ ಹಸಿದ ಮುದಿ ಸಿಂಹದಂತೆ ಸಿಕ್ಕದ್ದು ತಿಂದು ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ. ಅರ್ಜೆಂಟಿನಾ ಅಮೆರಿಕಾ ಎನ್ನುವ ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆಯಾಗಲಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Hanuma B

    All parties who promise free guarantees especially Congress, AAP and regional parties should read this article. Central government should pass a bill to restrict free items in the election manifesto.
    6 days ago reply
flipboard facebook twitter whatsapp