
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ, ಭಾರತ 1960ರಿಂದ ಜಾರಿಯಲ್ಲಿರುವ, ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರಿಂದಾಗಿ, ಮೊದಲೇ ಸೂಕ್ಷ್ಮವಾಗಿದ್ದ ಭಾರತ - ಪಾಕ್ ಸಂಬಂಧಗಳು ಇನ್ನಷ್ಟು ವಿಷಮಗೊಂಡಿವೆ. ಭಾರತದ ನಡೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ 1972ರ ಶಿಮ್ಲಾ ಒಪ್ಪಂದವೂ ಸೇರಿದಂತೆ, ಭಾರತದ ಜೊತೆಗಿನ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿಟ್ಟಿದೆ. ಈ ಬೆಳವಣಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ನೆರೆ ರಾಷ್ಟ್ರಗಳು ಸಂಬಂಧ ಅತ್ಯಂತ ಕೆಳ ಹಂತವನ್ನು ತಲುಪಿರುವುದಕ್ಕೆ ಸಾಕ್ಷಿಯಾಗಿದೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಬಳಿಕ, ಜುಲೈ 2, 1972ರಂದು ಜಾರಿಗೆ ಬಂದ ಶಿಮ್ಲಾ ಒಪ್ಪಂದ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವಲ್ಲಿ ಒಂದು ಪ್ರಮುಖ ಪ್ರಯತ್ನವಾಗಿತ್ತು. ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಪ್ರಧಾನಿ ಜುಲ್ಫೀಕರ್ ಅಲಿ ಭುಟ್ಟೋ ನಡುವೆ ಈ ಒಪ್ಪಂದದ ಮಾತುಕತೆ ನಡೆದಿತ್ತು. ಈ ಒಪ್ಪಂದವನ್ನು ರೂಪಿಸಲು ಉಭಯ ರಾಷ್ಟ್ರಗಳಿಗೆ ಸೋವಿಯತ್ ಅಧಿಕಾರಿಗಳು ನೆರವಾಗಿದ್ದರು. ಈ ಒಪ್ಪಂದ, 93,000 ಪಾಕಿಸ್ತಾನಿ ಯುದ್ಧ ಖೈದಿಗಳನ್ನು ಪಾಕಿಸ್ತಾನಕ್ಕೆ ಮರಳಿಸುವುದು ಮತ್ತು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅಂಶಗಳನ್ನು ಒಳಗೊಂಡಿತ್ತು. ಉಭಯ ದೇಶಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸರಿಪಡಿಸುವುದಾಗಿ ಶಿಮ್ಲಾ ಒಪ್ಪಂದ ಸ್ಪಷ್ಟಪಡಿಸಿತ್ತು. ಈ ಒಪ್ಪಂದದ ಪರಿಣಾಮವಾಗಿ, ಭಾರತ - ಪಾಕಿಸ್ತಾನಗಳ ನಡುವಿನ ಕಾಶ್ಮೀರದಲ್ಲಿನ ಕದನ ವಿರಾಮ ರೇಖೆಯನ್ನು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಎಂದು ಮರುನಾಮಕರಣ ಮಾಡಲಾಯಿತು. ಈ ರೇಖೆಯನ್ನು ಭಾರತ - ಪಾಕಿಸ್ತಾನಗಳ ನಡುವಿನ ಸೇನಾ ಗಡಿ ಎಂದು ಗುರುತಿಸಲಾಯಿತು. ಈ ಒಪ್ಪಂದದ ಮೂಲಕ ಪಾಕಿಸ್ತಾನ ಬಾಂಗ್ಲಾದೇಶವನ್ನು ಒಂದು ಅಧಿಕೃತ, ಸ್ವತಂತ್ರ ರಾಷ್ಟ್ರ ಎಂದು ಒಪ್ಪಿಕೊಂಡಿತು.
ಈ ಒಪ್ಪಂದ ಜಾರಿಗೆ ಬಂದ ಸಮಯದಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಅನ್ನು ಅಧಿಕೃತ ಗಡಿಯನ್ನಾಗಿ ಮಾರ್ಪಡಿಸುವಂತೆ ಮಾಡಬೇಕಿತ್ತು ಎಂದು ಜನರು ಅಭಿಪ್ರಾಯ ಹೊಂದಿ, ಇಂದಿರಾ ಗಾಂಧಿಯವರನ್ನು ಟೀಕಿಸಿದ್ದರು. ಎಲ್ಒಸಿ ಒಂದು ಮಿಲಿಟರಿ ಗಡಿಯೇ ಹೊರತು, ಅಧಿಕೃತವಾಗಿ ಗುರುತಿಸಿರುವ ಅಂತಾರಾಷ್ಟ್ರೀಯ ಗಡಿಯಲ್ಲ. ಒಂದು ವೇಳೆ ಅದನ್ನು ಶಾಶ್ವತ ಗಡಿಯನ್ನಾಗಿಸಿದರೆ, ಅದು ಕಾಶ್ಮೀರ ವಿವಾದವನ್ನು ಕೊನೆಗೊಳಿಸಿ, ಭವಿಷ್ಯದ ಯುದ್ಧಗಳು ನಡೆಯದಂತೆ ಮಾಡುತ್ತಿತ್ತು.
ಕಾಶ್ಮೀರ ವಿವಾದದ ಕುರಿತ ಮಾತುಕತೆಯಿಂದ ವಿಶ್ವಸಂಸ್ಥೆ ಮತ್ತು ಇತರ ದೇಶಗಳನ್ನು ಹೊರಗಿಟ್ಟು, ಭಾರತದೊಡನೆ ದ್ವಿಪಕ್ಷೀಯ ಮಾತುಕತೆಯ ಮೂಲಕ ಪರಿಹರಿಸಲು ಒಪ್ಪಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಭುಟ್ಟೋ ಟೀಕೆಗೊಳಗಾದರು. ಕಾಶ್ಮೀರದ ಜನರನ್ನು ಈ ಮಾತುಕತೆ ಒಳಗೊಳ್ಳಲಿಲ್ಲ ಎಂದು ಕಾಶ್ಮೀರಿ ಮುಖಂಡ, ಮಾಜಿ ಮುಖ್ಯಮಂತ್ರಿ ಶೇಕ್ ಅಬ್ದುಲ್ಲಾ ಸಹ ಅಸಮಾಧಾನಗೊಂಡಿದ್ದರು.
ಶೇಕ್ ಅಬ್ದುಲ್ಲಾ ಅವರು ಫಾರೂಖ್ ಅಬ್ದುಲ್ಲಾ ಅವರ ತಂದೆ, ಮತ್ತು ಇಂದಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ತಾತ.
ಕಾಲ ಕಳೆದಂತೆ, ಶಿಮ್ಲಾ ಒಪ್ಪಂದ ತನ್ನ ಮಹತ್ವವನ್ನು ಕಳೆದುಕೊಂಡಿತು. ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡಿ, 1999ರ ಕಾರ್ಗಿಲ್ ಯುದ್ಧ ಸೇರಿದಂತೆ ನೇರ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗುವ ಮೂಲಕ ಶಿಮ್ಲಾ ಒಪ್ಪಂದವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನದ ಕ್ರಮಗಳು ಶಾಂತಿಯುತ ಪರಿಹಾರ ಕಂಡುಕೊಳ್ಳುವ ಶಿಮ್ಲಾ ಒಪ್ಪಂದದ ಭರವಸೆಯನ್ನೇ ಮುರಿದು ಹಾಕಿದ್ದವು. 1994ರಲ್ಲಿ ಸಂಪೂರ್ಣ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂಬ ಭಾರತದ ಅರೆ ಮಿಲಿಟರಿ ಘೋಷಣೆ ಮತ್ತು 2019ರಲ್ಲಿ ಭಾರತ ಸಂವಿಧಾನದ 30ನೇ ವಿಧಿಯನ್ನು ರದ್ದುಗೊಳಿಸಿದ್ದು ಒಪ್ಪಂದದ ಇನ್ನುಳಿದ ಪ್ರಭಾವವನ್ನೂ ಕಡಿತಗೊಳಿಸಿತು. ಮಾಜಿ ರಾಜತಂತ್ರಜ್ಞರಾದ ಅವತಾರ್ ಸಿಂಗ್ ಭಾಸಿನ್ ಅವರು ಶಿಮ್ಲಾ ಒಪ್ಪಂದ ಎಂದಿಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಒಪ್ಪಂದವಾಗಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. 1971ರ ಯುದ್ಧದ ತಕ್ಷಣದ ಪರಿಣಾಮಗಳನ್ನು ನಿರ್ವಹಿಸುವ ಸಲುವಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಯಿತು ಎಂದು ಅವರು ವಿವರಿಸಿದ್ದಾರೆ.
ಪಾಕಿಸ್ತಾನ ಎಪ್ರಿಲ್ 24ರಂದು ಹೇಳಿಕೆ ನೀಡಿ, ತಾನು ಶಿಮ್ಲಾ ಒಪ್ಪಂದ ಮಾತ್ರವಲ್ಲದೆ, ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತುಗೊಳಿಸುವುದಾಗಿ ಘೋಷಿಸಿತ್ತು. ಆದರೆ, ಆ ಬಳಿಕ ಯಾವುದೇ ಅಧಿಕೃತ ರಾಜತಾಂತ್ರಿಕ ಸಂವಹನ ನಡೆದಿಲ್ಲ. ಭಾರತಕ್ಕೆ ಯಾವುದೇ ಅಧಿಕೃತ ಸೂಚನೆಗಳೂ ಬಂದಿಲ್ಲ.
ಒಂದು ವೇಳೆ ಪಾಕಿಸ್ತಾನ ಅಧಿಕೃತವಾಗಿ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿದರೆ, ಅದು ಎಲ್ಒಸಿಯ ಪರಿಕಲ್ಪನೆಯನ್ನೇ ರದ್ದುಗೊಳಿಸಿ, ಗಂಭೀರ ಪರಿಣಾಮಗಳನ್ನು ಸೃಷ್ಟಿಸಬಲ್ಲದು. ಒಂದು ವೇಳೆ ಪಾಕಿಸ್ತಾನ ಏನಾದರೂ ಎಲ್ಒಸಿ ದಾಟಿ ಮುಂದೆ ಬರುವ ಧೈರ್ಯ ಪ್ರದರ್ಶಿಸಿದರೆ, ಆಗ ಭಾರತವೂ ಅದೇ ಕ್ರಮ ಕೈಗೊಂಡು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನ ಅಧಿಕೃತವಾಗಿ ಯಾವುದೇ ಒಪ್ಪಂದಗಳನ್ನು ಹೆಸರಿಸದಿದ್ದರೂ, ಅದು 'ಎಲ್ಲ ದ್ವಿಪಕ್ಷೀಯ ಒಪ್ಪಂದಗಳು' ಎಂದು ಹೇಳಿರುವುದರಿಂದ ಕೆಲವು ಪ್ರಮುಖ ಒಪ್ಪಂದಗಳು ಅಮಾನತಿಗೊಳಗಾಗಬಹುದು. ಅವೆಂದರೆ:
ನೆಹರೂ - ಲಿಯಾಕತ್ ಒಪ್ಪಂದ (1950): ಉಭಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ಒಪ್ಪಂದ.
1974ರ ತೀರ್ಥಯಾತ್ರಾ ಶಿಷ್ಟಾಚಾರ: ಇದು ಗಡಿಯಾಚೆಗಿರುವ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲ ಕಲ್ಪಿಸುತ್ತದೆ.
ಕರ್ತಾರ್ಪುರ್ ಕಾರಿಡಾರ್ (2019): ಈ ಜಂಟಿ ಯೋಜನೆ ಭಾರತೀಯ ಸಿಖ್ಖರಿಗೆ ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಲು ಅನುಮತಿ ನೀಡುತ್ತದೆ. ಸದ್ಯದ ಮಟ್ಟಿಗೆ ಈ ಯೋಜನೆ ಮುಂದುವರಿಯುವ ಸಾಧ್ಯತೆಗಳಿವೆ.
ಇದು ಒಂದಷ್ಟು ಭದ್ರತಾ ಸಂಬಂಧಿ ಒಪ್ಪಂದಗಳನ್ನೂ ಒಳಗೊಂಡಿದೆ. ಅವೆಂದರೆ:
1988 ಪರಮಾಣು ಘಟಕಗಳ ಒಪ್ಪಂದ: ಉಭಯ ದೇಶಗಳು ತಮ್ಮ ಪರಮಾಣು ಘಟಕಗಳ ಕುರಿತು ವಾರ್ಷಿಕವಾಗಿ ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ.
1991ರ ಕ್ಷಿಪಣಿ ಪರೀಕ್ಷಾ ಮಾಹಿತಿ ಒಪ್ಪಂದ: ಯಾವುದೇ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗೆ ಮುನ್ನ ಉಭಯ ದೇಶಗಳು ಪರಸ್ಪರ ಮಾಹಿತಿ ನೀಡುತ್ತವೆ.
1991 ವಾಯು ಪ್ರದೇಶ ಉಲ್ಲಂಘನಾ ಒಪ್ಪಂದ: ಇದು ಆಕಸ್ಮಿಕವಾದ ವೈಮಾನಿಕ ಬಿಕ್ಕಟ್ಟುಗಳನ್ನು ತಡೆಯುತ್ತದೆ.
ಗಮನಾರ್ಹವಾಗಿ, ಭಾರತ - ಪಾಕಿಸ್ತಾನಗಳು 2021ರಲ್ಲಿ ತಮ್ಮ 2003ರ ಕದನ ವಿರಾಮವನ್ನು ಮುಂದುವರಿಸಲು ನಿರ್ಧರಿಸಿದ್ದವು. ಆದರೆ ಭಯೋತ್ಪಾದನೆಯ ವಿರುದ್ಧ ಹೆಚ್ಚುತ್ತಿರುವ ಮಿಲಿಟರಿ ಕ್ರಮಗಳು ಒಪ್ಪಂದವನ್ನು ಅಪಾಯಕ್ಕೆ ತಳ್ಳಬಹುದು.
ಸಿಂಧೂ ನದಿ ಒಪ್ಪಂದದ ಅಮಾನತಿನ ಬಳಿಕ, ನದಿ ಹರಿವನ್ನು ನಿಯಂತ್ರಿಸುವುದರಿಂದ ಇನ್ನಷ್ಟು ತೊಂದರೆಗಳು ಉಂಟಾಗಬಹುದು. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಜೀವನಾಡಿ. ನದಿ ಹರಿವನ್ನು ತಡೆಯುವ ಯಾವುದೇ ಪ್ರಯತ್ನವನ್ನೂ ಪಾಕಿಸ್ತಾನ ಯುದ್ಧ ಎಂದೇ ಪರಿಗಣಿಸುತ್ತದೆ. ಭಾರತ ಈ ನದಿಗಳ ಮೇಲ್ದಂಡೆಗಳನ್ನು ಹೊಂದಿರುವುದರಿಂದ, ಭಾರತ ಅವುಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ. ಆದರೆ, ಭಾರತವೂ ಸಹ ಚೀನಾದಿಂದ ಹರಿದು ಬರುವ ನದಿಗಳ ಮೇಲೆ ಅವಲಂಬಿತವಾಗಿದೆ. ಈಗ ಚೀನಾದಂತಹ ನೆರೆ ರಾಷ್ಟ್ರಗಳು ಸಹ ಭಾರತ ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಒಟ್ಟಾರೆಯಾಗಿ, ಭಾರತ ಪಾಕಿಸ್ತಾನಗಳ ನಡುವೆ ನಡೆಯುತ್ತಿರುವ ನೀನಾ - ನಾನಾ ಎಂಬಂತಹ ಕ್ರಮಗಳು ಇಷ್ಟು ವರ್ಷಗಳ ಜಾಗರೂಕ ರಾಜತಾಂತ್ರಿಕ ಕ್ರಮಗಳನ್ನು ಹಾಳು ಮಾಡುವ ಅಪಾಯಗಳಿವೆ. ಶಿಮ್ಲಾ ಒಪ್ಪಂದ ಕೇವಲ ಸಾಂಕೇತಿಕವಾಗಿದ್ದರೂ, ಅದು ಮತ್ತು ಇತರ ಒಪ್ಪಂದಗಳ ಅಮಾನತು ಉಳಿದಿರುವ ಆಶಾ ಭಾವವನ್ನೇ ಹಾಳುಗೆಡವುವ ಅಪಾಯವಿದೆ. ಉಭಯ ದೇಶಗಳೂ ಆರ್ಥಿಕ ಮತ್ತು ರಾಜಕೀಯ ಒತ್ತಡಗಳನ್ನು ಎದುರಿಸುತ್ತಿದ್ದು, ಸಂಪರ್ಕ ಕಡಿತಗೊಳಿಸುವ ಬದಲು, ಮಾತುಕತೆಯ ಹಾದಿಗೆ ಮರಳುವುದು ಶಾಂತಿ ಸ್ಥಾಪನೆಗಿರುವ ಏಕೈಕ ಹಾದಿಯಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement