DK Shivakumar- Siddaramaiah
ಡಿಕೆ ಶಿವಕುಮಾರ್- ಸಿದ್ದರಾಮಯ್ಯonline desk

DK Shivakumar ಅಸಹಜ ತಾಳ್ಮೆ ಹಿಂದಿನ ನಿಗೂಢ ಲೆಕ್ಕಾಚಾರ ಏನು? (ಸುದ್ದಿ ವಿಶ್ಲೇಷಣೆ)

ಮುಖ್ಯಮಂತ್ರಿ ಪಟ್ಟಕ್ಕೇರಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಿವಕುಮಾರ್ ನಿಧಾನವಾಗಿ ಬದಲಾಗುತ್ತಿದ್ದಾರೆ.
Published on

ಅದೊಂದು ಬಗೆಯ ಅಸಹಜ ತಾಳ್ಮೆ. ಅದರ ಹಿಂದಿರುವ ಲೆಕ್ಕಾಚಾರವನ್ನು ಆಳಕ್ಕಿಳಿದು ನೋಡಿದರೆ ರಾಜಕೀಯ ಚೆದುರಂಗದಾಟದ ವಿಶ್ವರೂಪದ ದರ್ಶನವಾಗುತ್ತದೆ. ಇವರು ಡಿ.ಕೆ.ಶಿವಕುಮಾರ್. ರಾಜ್ಯ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ. ಜತೆಗೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಕೂಡ. ಮೂರೂವರೆ ದಶಕಗಳ ರಾಜಕೀಯ ಇತಿಹಾಸವನ್ನು ಹತ್ತಿರದಿಂದ ಗಮನಿಸುತ್ತಾ ಬಂದವರಿಗೆ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿ ಆಗಿರುವ ಅವರೀಗ ಇದ್ದಕ್ಕಿದಂತೆ ಪ್ರಬುದ್ಧ ನಾಯಕನಂತೆ ತಾಳ್ಮೆಯನ್ನು ಮೈಗೂಢಿಸಿಕೊಂಡಿರುವುದರ ಮರ್ಮವಾದರೂ ಏನು? ಎಂಬ ಪ್ರಶ್ನೆ ಪುಟಿದೇಳುವುದು ಸಹಜ.

ಮುಖ್ಯಮಂತ್ರಿ ಪಟ್ಟಕ್ಕೇರಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಿವಕುಮಾರ್ ನಿಧಾನವಾಗಿ ಬದಲಾಗುತ್ತಿದ್ದಾರೆ. ಅದಕ್ಕೆ ಅಗತ್ಯವಾದ ಮನೋ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಅದರ ಮುಂದುವರಿದ ಭಾಗವೆಂಬಂತೆ ತಮ್ಮ ರಾಜಕೀಯ ಚೆದುರಂಗದಾಟ ಆರಂಬಿಸಿದ್ದು ಅತ್ಯಂತ ಜಾಣ್ಮೆಯಿಂದ ತಮ್ಮ ಕಾಯಿಗಳನ್ನು ನಡೆಸತೊಡಗಿದ್ದಾರೆ. ನಿಜವಾಗಿಯೂ ಅವರು ಬದಲಾಗಿದ್ದಾರೋ ಇಲ್ಲವೋ ಎಂಬುದನ್ನು ನಿಖರವಾಗಿ ಹೇಳಲಾಗದಿದ್ದರೂ ಅವರ ಸೂಕ್ಷ್ಮ ಮತ್ತು ಚೆತುರ ನಡೆ ಪಕ್ಷದೊಳಗೇ ಇರುವ ಅವರ ಎದುರಾಳಿಗಳಿಗೂ ಕಗ್ಗಂಟಾಗಿದೆ.

ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತು. ಸಹಜವಾಗೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ಪಾತ್ರವೂ ಈ ಗೆಲುವಿನಲ್ಲಿತ್ತು. ಮುಖ್ಯಮಂತ್ರಿ ಪಟ್ಟಕ್ಕೇರುವ ಮಹತ್ವಾಕಾಂಕ್ಷೆ ಹೊಂದಿದ್ದ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೆಲವು ತಾಂತ್ರಿ ಕಾರಣಗಳ ಹಿನ್ನಲೆಯಲ್ಲಿ ಸುಮ್ಮನಾಗಿರಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದು ಈಗ ಇತಿಹಾಸ.

ಈ ಸಂದರ್ಭದಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂಬುದು ಕಾಂಗ್ರೆಸ್ ಮೂಲಗಳು ನೀಡುವ ಸ್ಪಷ್ಟನೆ.

ಆದರೆ ಇಂತಹ ಯಾವುದೋ ಒಪ್ಪಂದ ಆಗಿಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ಖಚಿತ ನುಡಿ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಗೂಢ ಮೌನಕ್ಕೆ ಶರಣಾಗಿರುವುದೇ ಈ ಗೊಂದಲ ಮುಂದುವರಿಯಲು ಕಾರಣ. ಅದೇನೇ ಇರಲಿ. ಅಕ್ಟೋಬರ್ ನಂತರ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂಬುದಾಗಿ ಅವರ ಬೆಂಬಲಿಗರು ಭವಿಷ್ಯ ನುಡಿಯುತ್ತಾರೆ.

ಮುಖ್ಯಮಂತ್ರಿ ಪಟ್ಟದ ಅಧಿಕಾರ ಹಂಚಿಕೆ ವಿಚಾರದಲ್ಲಿ ಶಿವಕುಮಾರ್ ಅತ್ಯಂತ ತಾಳ್ಮೆಯ ಮತ್ತು ನಿಧಾನಗತಿಯ ಹೆಜ್ಜೆ ಇಡುತ್ತಿರುವುದರ ಹಿಂದೆ ಕಾರಣಗಳೂ ಇವೆ. ಅಧಿಕಾರ ಪಡೆಯಲು ಸಿದ್ದರಾಮಯ್ಯ ಜತೆ ಸಂಘರ್ಷಕ್ಕಿಳಿ ಯುವುದಕ್ಕಿಂತ ಅವರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಅವರ ಮನವೊಲಿಸಿಯೇ ಅಧಿಕಾರ ಪಡೆದುಕೊಳ್ಳುವ ಜಾಣ್ಮೆ ಅವರದ್ದು. ಅದಕ್ಕಾಗಿ ಪಕ್ಷದೊಳಗಿರುವ ಸಿದ್ದರಾಮಯ್ಯ ಬೆಂಬಲಿಗರಿಂದ ಎಷ್ಟೇ ಪ್ರಚೋದನೆ ಎದುರಾಗಲೀ ಅವರು ಆವೇಶದ ಉತ್ತರ ನೀಡುತ್ತಿಲ್ಲ. ಬದಲಾಗಿ ಅದೊಂದು ಮುಖ್ಯ ವಿಚಾರವೇ ಅಲ್ಲ ಎಂಬಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಅವರ ಈ ನಡೆ ಬೆಂಬಲಿಗರನ್ನೂ ಗೊಂದಲಕ್ಕೆ ತಳ್ಳಿದೆ. ಮೂರುವರೆ ದಶಕಗಳ ರಾಜಕೀಯ ಅನುಭವ ಹೊಂದಿರುವ ಅವರಿಗೆ ಮುಖ್ಯಮಂತ್ರಿ ಅಧಿಕಾರದ ಹೊರತಾಗಿಯೂ ಸಿದ್ದರಾಮಯ್ಯ ರಾಜಕೀಯವಾಗಿ ಪ್ರಬಲ ಶಕ್ತಿ ಎಂಬುದು ಮನವರಿಕೆ ಆಗಿದೆ. ಈವತ್ತಿಗೂ ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯ ಅಚ್ಚುಮೆಚ್ಚು.ಅವರನ್ನು ಸರಿಗಟ್ಟುವ ಮತ್ತೊಬ್ಬ ನಾಯಕ ಕಾಂಗ್ರೆಸ್ ನಲ್ಲೂ ಇಲ್ಲ, ಪ್ರತಿಪಕ್ಷಗಳಲ್ಲೂ ಇಲ್ಲ.

DK Shivakumar- Siddaramaiah
ಹೈಕಮಾಂಡ್ ತಂತ್ರ: ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)

ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವಾಗ ಶಿವಕುಮಾರ್ ರಾಜಕಾರಣವನ್ನು 'ಚೆಸ್ ಪಂದ್ಯ’ಕ್ಕೆ ಹೋಲಿಸುತ್ತಾರೆ. ರಾಜಕಾರಣದ ಚೆದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ಅತ್ಯಂತ ಜಾಣ್ಮೆಯಿಂದ ನಡೆಸುತ್ತಿದ್ದಾರೆ, ಅಧಿಕಾರ ಹಂಚಿಕೆ ಒಪ್ಪಂದವನ್ನು ಜಾರಿಗೊಗೊಳಿಸುವ ವಿಚಾರವನ್ನು ಹೈಕಮಾಂಡ್ ಗೇ ಬಿಟ್ಟಿರುವ ಅವರು ಅಷ್ಟಕ್ಕೇ ಸುಮ್ಮನಾಗದೇ ರಾಜ್ಯ ರಾಜಕಾರಣದಲ್ಲಿ ತಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸರ್ಕಾರದ ಶಿಷ್ಟಾಚಾರದ ವಿಚಾರದಲ್ಲಿ ಮುಖ್ಯಮಂತ್ರಿಗೆ ಸಮನಾದ ಅಧಿಕಾರವನ್ನು ಚಲಾಯಿಸುತ್ತಿರುವ ಶಿವಕುಮಾರ್ ಇದೀಗ ಸಹಕಾರಿ ರಾಜಕಾರಣಕ್ಕೂ ಪ್ರವೇಶ ಮಾಡಿರುವುದು ಹೊಸ ಬೆಳವಣಿಗೆ. ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕೆಎಂಎಫ್ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟಿರುವ ಅವರೀಗ ತಮ್ಮ ಸೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಆ ಪಟ್ಟದ ಮೇಲೆ ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಪರಾಭವಗೊಂಡ ನಂತರ ಸುರೇಶ್ ರಾಜಕಾರಣದ ಕುರಿತು ವೈರಾಗ್ಯದ ಮಾತುಗಳನ್ನೇ ಆಡುತ್ತಾ ಬಂದಿದ್ದರು. ಆದರೆ ಇದೀಗ ಬೆಂಗಳೂರು ಹಾಲು ಒಕ್ಕೂಟ(ಬಮುಲ್)ದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಸಹಕಾರಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯನ್ನೊಳಗೊಂಡಂತೆ ಇರುವ ಬೆಂಗಳೂರು ಹಾಲು ಒಕ್ಕೂಟ ಒಕ್ಕಲಿಗರೇ ಅಧಿಕವಾಗಿರುವ ಪ್ರದೇಶಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ. ಈ ಸಂಸ್ಥೆಯ ಅಧ್ಯಕ್ಷರಾಗುವ ಮೂಲಕ ಸುರೇಶ್ ರಾಜಕಾರಣದಲ್ಲಿ ಒಂದು ಸುತ್ತಿನ ಮೇಲುಗೈ ಸಾಧಿಸಿದ್ದಾರೆ. ಇನ್ನುಳಿದಂತೆ ಇರುವುದು ಕೆಎಂಎಫ್ ಅಧ್ಯಕ್ಷ ಗಿರಿಯ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ. ಒಟ್ಟು 16 ಜಿಲ್ಲಾ ಹಾಲು ಒಕ್ಕೂಟಗಳನ್ನು ಒಳಗೊಂಡಿರುವ ಕೆಎಂಎಫ್ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದೆ. ಇದರ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರೆ ಹಳೇ ಮೈಸೂರು ಪ್ರಾಂತ್ಯದ ಜತೆಗೇ ಇಡೀ ರಾಜ್ಯದ ರಾಜಕಾರಣದ ಹಿಡಿತ ಸಿಗುತ್ತದೆ.

ಹಾಲು ಉತ್ಪಾದಕರ ಒಕ್ಕೂಟಗಳು, ಗ್ರಾಮೀಣ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೇಲೆ ಹಿಡಿತ ಸಾಧಿಸಬಹುದು, ಜತೆಗೇ ರಾಜ್ಯದಲ್ಲಿ ಬೇರು ಮಟ್ಟದಲ್ಲಿ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬಹುದು, ಬೆಂಬಲಿಗರ ಪಡೆ ಸೃಷ್ಟಿಸಿಕೊಳ್ಳಲೂಬಹುದು. ಇದು ಈ ಸೋದರರ ಲೆಕ್ಕಾಚಾರ.

ರಾಜ್ಯದ ಹಾಲು ಒಕ್ಕೂಟಗಳ ಪೈಕಿ ಕೆಲವು ಒಕ್ಕೂಟಗಳ ಚುನಾ್ವಣೆ ಮುಗಿದಿದೆ. ಕೆಲವು ಕಾನೂನಾತ್ಮಕ ಸಮಸ್ಯೆಗಳಿಂದ ಮುಂದಕ್ಕೆ ಹೋಗಿದೆ. ಏನೇ ಆದರೂ ಜುಲೈ ಮಧ್ಯಭಾಗದಲ್ಲಿ ಕೆಎಂಎಫ್ ಅಧ್ಯಕ್ಷರ ಚುನಾವಣೆ ನಡೆಯುವುದು ಖಚಿತ.ಚುನಾಯಿತ ನಿರ್ದೇಶಕರುಗಳ ಜತೆಗೇ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರೂ ಮತ ಚಲಾಯಿಸಬೇಕಿರುವುದರಿಂದ ಅಧ್ಯಕ್ಷರ ಆಯ್ಕೆ ಮುಖ್ಯಮಂತ್ರಿಯ ಮರ್ಜಿ ಅನುಸರಿಸಿ ನಡೆಯುತ್ತದೆ.

ಮಹಾ ಮಂಡಳದ ವ್ಯಾಪ್ತಿಯಲ್ಲಿ 25 ಲಕ್ಷ ಹಾಲು ಉತ್ಪಾದಕರು ಬರುತ್ತಾರೆ. ಅಧ್ಯಕ್ಷರಾಗುವವರು ತಮ್ಮ ಐದು ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದರೆ ಈ ಹಾಲು ಉತ್ಪಾದಕರ ಜತೆ ನಿಕ ಸಂಪರ್ಕ ಸಾಧಿಸಬಹುದು. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ಮಾಜಿ ಸಚಿವ ಎಚ್.ಡಿ.ರೇವಣ್ಣ 13 ವರ್ಷಗಳ ಕಾಲ ಈ ಸಂಸ್ಥೆಯ ಅಧ್ಯಕ್ಷರಾಗಿ ದರ್ಬಾರು ನಡೆಸಿದರು. ಕೆಎಂಎಫ್ ಅಧ್ಯಕ್ಷಪದವಿ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ಶಿವಕುಮಾರ್ ಸೋದರರು ಪ್ರಯತ್ನ ನಡೆಸಿರುವುದರ ಹಿಂದೆ ಇದೂ ಒಂದು ಕಾರಣವಿದೆ. ಪ್ರಶ್ನಾತೀತ ಒಕ್ಕಲಿಗ ನಾಯಕನಾಗಿ ಹೊರ ಹೊಮ್ಮಲು ಈ ಅಧಿಕಾರವೂ ಒಂದು ಸಾಧನ ಎಂಬುದು ಇದರ ಹಿಂದಿನ ಇನ್ನೊಂದು ಲೆಕ್ಕಾಚಾರ.

ಆದರೆ ಇದ್ಯಾವುದೂ ಸುಲಭವಾಗಿ ಸುರೇಶ್ ಗೆ ದೊರಕುವ ಪರಿಸ್ಥಿತಿ ಸದ್ಯಕ್ಕಿಲ್ಲ. ಹಾಲಿ ಕೆಎಂಎಫ್ ಅಧ್ಯಕ್ಷರಾಗಿರುವ ಬಳ್ಳಾರಿಯ ಕಾಂಗ್ರೆಸ್ ಮುಖಂಡ ಭೀಮಾನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ. ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಯನ್ನು ಪೂರೈಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರಿಗೆ ಸಿದ್ದರಾಮಯ್ಯ ಕೃಪಾಶೀರ್ವಾದ ಇದೆ.

ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬರು ಮಾಲೂರು ಶಾಸಕ ನಂಜೇಗೌಡ.ಶತಾಯ ಗತಾಯ ಈ ಹುದ್ದೆ ಪಡೆಯಲೇಬೇಕೆಂದು ಹಟ ತೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಚೆಂಡು ಸಿದ್ದು ಅಂಗಳದಲ್ಲಿದೆ.

ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಶಿವಕುಮಾರ್ ಗೆ ರಾಜಕೀಯವಾಗಿ ಭೀಮ ಬಲ ಬಂದಂತಾಗುತ್ತದೆ. ಹಾಗೊಂದು ವೇಳೆ ಅದೇ ನಿಜವಾದರೆ ಸಹಕಾರಿ ಸಂಸ್ಥೆಯನ್ನು ದಾಳವಾಗಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಪಡೆಯಲು ಅವರು ಕಾರ್ಯತಂತ್ರ ನಡೆಸುತ್ತಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗೇ ಶಿವಕುಮಾರ್ ಪ್ರಬಲರಾಗಿರುವುದಷ್ಟೇ ಅಲ್ಲ. ಹೈಕಮಾಂಡ್ ಮಟ್ಟದಲ್ಲೂ ಪ್ರಭಾವಿ ಆಗಿದ್ದಾರೆ. ಅಧ್ಯಕ್ಷಗಿರಿಯಿಂದ ಅವರನ್ನು ಇಳಿಸುವುದು ಸುಲಭವಂತೂ ಅಲ್ಲ. ಜತೆಗೇ ಉಪ ಮುಖ್ಯಮಂತ್ರಿ ಪದವಿಯೂ ಇರುವುದರಿಂದ ಇನ್ನಷ್ಟು ಪ್ರಬಲರಾಗಿದ್ದಾರೆ.ಪ್ರಚೋದನೆಗಳಿಗೆ ಬಗ್ಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಆದರೆ ರಾಜಕೀಯವಾಗಿ ತಮ್ಮ ಅಸ್ತಿತ್ವವೇ ಮುಗಿದು ಹೋಗುವ ಅಪಾಯಗಳು ಜಾಸ್ತಿ ಎಂಬುದು ಕಾಂಗ್ರೆಸ್ ನಲ್ಲಿರುವ ಅವರ ವಿರೋಧಿಗಳ ಆತಂಕ.

ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸೋದರನನ್ನು ಕೂರಿಸುವ ರಾಜತಂತ್ರ ಕೈಗೂಡದೇ ಇದ್ದರೆ ಸುರೇಶ್ ಬೆಂಗಳೂರು ಹಾಲು ಒಕ್ಕೂಟಕ್ಕೇ ಮಾತ್ರ ಸೀಮಿತವಾಗುತ್ತಾರೆ.ಎಂಬುದು ವಿರೋಧಿಗಳ ಲೆಕ್ಕಾಚಾರ. ಈ ಆಧಾರದಲ್ಲೇ ಸುರೇಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಂತೆ ಮುಖ್ಯಮಂತ್ರಿ ಮೇಲೆ ಈ ವಿರೋಧಿಗಳ ಗುಂಪು ಒತ್ತಡ ಹೇರುತ್ತಿದೆ.

ಸದ್ಯದ ವರ್ತಮಾನಗಳ ಪ್ರಕಾರ ಹಾಲಿ ಅಧ್ಯಕ್ಷ ಭೀಮಾನಾಯಕ್ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಬಳಗದಲ್ಲಿ ಚರ್ಚೆಗಳು ನಡೆದಿವೆ. ಎರಡನೇ ಇನ್ನುಳಿದ ಅವಧಿಯನ್ನು ನಂಜೇಗೌಡ ಹಾಗೂ ಡಿ.ಕೆ.ಸುರೇಶ್ ಗೆ ಹಂಚುವುದು ಇದರ ಹಿಂದಿನ ಲೆಕ್ಕಾಚಾರ.

ರಾಜಕೀಯವಾಗಿ ಏನೂ ಸ್ಥಿತ್ಯಂತರ ಸಂಭವಿಸದೇ ಇದ್ದರೆ 2028 ಕ್ಕೆ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. 2025 -26 ಮತ್ತು 2026-27 ರ ಅವಧಿಗೆ ನಂಜೇಗೌಡರನ್ನು . ಇನ್ನುಳಿದ ಎರಡು ವರ್ಷಗಳ ಅವಧಿಗೆ ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿಸುವ ಕುರಿತು ಚರ್ಚೆಗಳು ನಡೆದಿವೆ. ಅಧಿಕಾರದ ಆಟದಲ್ಲಿ ಬಾಯಿಮಾತಿನ ಭರವಸೆ, ಒಪ್ಪಂದಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಒಪ್ಪಂದಗಳು ಆಯಾ ಸಂದರ್ಭಾನುಸಾರ ಅನುಷ್ಠಾನಗೊಳ್ಳುತ್ತವೆ. ಇದನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ ಸುರೇಶ್ ಗೆ ಸದ್ಯಕ್ಕೆ ಅಧ್ಯಕ್ಷ ಪಟ್ಟ ದೊರೆಯುವುದು ಅನುಮಾನ. ಹೀಗಾದರೆ ಶಿವಕುಮಾರ್ ಗೆ ಇದೊಂದು ರಾಜಕೀಯ ಹಿನ್ನಡೆ ಆಗುತ್ತದೆ. ಈಗಾಗಲೇ ರಾಜ್ಯದ ಇನ್ನೊಂದು ಪ್ರತಿಷ್ಠಿತ ಸಹಕಾರಿ ಸಂಸ್ಥೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಬಿಜೆಪಿಯ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರನ್ನು ಪದಚ್ಯುತಿಗೊಳಿಸುವ ತಂತ್ರಕ್ಕೆ ಕೈ ಹಾಕಿದ ಶಿವಕುಮಾರ್ ಪ್ರಯತ್ನವನ್ನು ಸ್ವಪಕ್ಷೀಯ ನಾಯಕರೇ ವಿಫಲಗೊಳಿಸಿದರು. ರಾಜಕೀಯವಾಗಿ ಅವರಿಗೆ ಇದೊಂದು ಪ್ರಮುಖ ಹಿನ್ನಡೆ.

ಸದ್ಯದಲ್ಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಅವಧಿಯೂ ಮುಗಿಯಲಿದ್ದು ಹೊಸ ಅಧ್ಯಕ್ಷರ ಆಯ್ಕೆ ಆಗಲಿದೆ. ಈ ಸ್ಥಾನದ ಮೇಲೆ ತಮ್ಮ ಸೋದರ ಸಂಬಂಧಿ ವಿಧಾನ ಪರಿಷತ್ ಸದಸ್ಯ ರವಿ ಅವರನ್ನು ಕೂರಿಸುವ ಲೆಕ್ಕಾಚಾರ ಶಿವಕುಮಾರ್ ಅವರದ್ದು. ಇದೇನಾದರೂ ಕೈಗೂಡಿದರೆ ಎರಡು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳ ಆಡಳಿತ ಅವರ ಕಪಿಮುಷ್ಠಿಗೆ ಸಿಕ್ಕಲಿದೆ. ಆಗ ಅವರು ರಾಜಕೀಯವಾಗಿ ಇನ್ನೂ ಪ್ರಬಲರಾಗುತ್ತಾರೆ.

DK Shivakumar- Siddaramaiah
ಬೆಂಗಳೂರು ದುರಂತ: ಅಧಿಕಾರಸ್ಥರ ಅಹಂ ಎದುರು ಅಸಹಾಯಕರಾದ ಪೊಲೀಸರು!! (ಸುದ್ದಿ ವಿಶ್ಲೇಷಣೆ)

ಈ ಎಲ್ಲ ಲೆಕ್ಕಾಚಾರಗಳನ್ನು ಸಾಧಿಸಿಕೊಳ್ಳುವ ನಿಟ್ಟಿನಲ್ಲೇ ಶಿವಕುಮಾರ್ ಸಹಕಾರಿ ಧುರೀಣರೂ ಆದ ಸಚಿವ ಕೆ.ಎನ್.ರಾಜಣ್ಣ ಅವರೊಂದಿಗೆ ಎಲ್ಲ ಕಹಿಗಳನ್ನು ಮರೆತು ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಆದರೆ ಸಹಕಾರಿ ರಾಜಕಾರಣದ ಬೀಜ ಗಣಿತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ರಾಜಣ್ಣ ಶಿವಕುಮಾರ್ ರವರ ಸಂಧಾನದ ತಂತ್ರಗಳಿಗೆ ಮಣಿಯುತ್ತಾರಾ ಎಂಬುದೇ ಯಕ್ಷ ಪ್ರಶ್ನೆ. ಮತ್ತೊಂದು ಬೆಳವಣಿಗೆಯಲ್ಲಿ ಇದರ ಮುಂದುವರಿದ ಭಾಗವಾಗಿ ಸತೀಶ ಜಾರಕಿಹೊಳಿ ಜತೆಗೂ ಶಿವಕುಮಾರ್ ಈಗಾಗಲೇ ಮಾತುಕತೆ ಮುಗಿಸಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ ಯಾವುದೇ ಭರವಸೆ ಸತೀಶ್ ಅವರಿಂದ ಸಿಕ್ಕಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಅವರು ಉತ್ತರ ನೀಡಿದ್ದಾರೆ. ಹೀಗಾಗಿ ತಮ್ಮನಿಗೆ ಹಾಗೂ ಸೋದರ ಸಂಬಂಧಿಗೆ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳ ಅಧ್ಯಕ್ಷಗಿರಿ ದಕ್ಕಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಯಾವುದೇ ಕಾರಣಕ್ಕೂ ಸಂಘರ್ಷ ಮಾಡಿಕೊಳ್ಳದಿರಲು ನಿರ್ಧರಿಸಿರುವ ಶಿವಕುಮಾರ್ ತಮ್ಮ ರಾಜಕೀಯ ದಾಳವನ್ನು ಅತಿ ಜಾಣ್ಮೆಯಿಂದ ಉರುಳಿಸುತ್ತಿದ್ದಾರೆ.

ಅದಕ್ಕಾಗೇ ತಮ್ಮ ಎಂದಿನ ಆಕ್ರಮಣಕಾರಿ ಸ್ವಭಾವವನ್ನು ಪಕ್ಕಕ್ಕಿಟ್ಟು ಸಂಧಾನದ ರಾಜಕಾರಣದ ಮೊರೆ ಹೋಗಿದ್ದಾರೆ. ಆದರೆ ಈ ಕಸರತ್ತುಗಳು ಫಲ ನೀಡುತ್ತಾ? ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.

ಸಿದ್ದರಾಮಯ್ಯ ಅಸಹನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಅನಗತ್ಯವಾಗಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.ರಾಜಕೀಯವಾಗಿ ನಾಲ್ಕು ದಶಕಗಳ ಅನುಭವ ಹೊಂದಿರುವ ಅವರಲ್ಲಿ ಒಬ್ಬ ಪಳಗಿದ ನಾಯಕನಿಗಿರಬೇಕಾದ ಸೂಕ್ಷ್ಮತೆ, ತಾಳ್ಮೆ ಇತ್ತೀಚೆಗೆ ಕಾಣುತ್ತಿಲ್ಲ. ಮೂರ್ನಾಲ್ಕು ಪ್ರಸಂಗಗಳಲ್ಲಿ ಪ್ರಶ್ನೆ ಕೇಳಿದ ವರದಿಗಾರರ ಮೇಲೆಯೇ ಏರಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಅಸಹನೆಯ ಚಡಪಡಿಕೆ ಕಾಣುತ್ತಿದೆ. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು, ಭಿನ್ನಮತ ಅವರನ್ನು ಈ ಪರಿಸ್ಥಿತಿಗೆ ದೂಡಿರಲೂಬಹುದು. ಏನೇ ಆಗಲಿ ಅವರು ಮೊದಲಿದ್ದಂತೆ ಇಲ್ಲ. ಯಾಕೆ ಎಂಬುದೇ ನಿಗೂಢ!

100%

-ಯಗಟಿ ಮೋಹನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com