ಬೆಂಗಳೂರು: ಬರದ ಕಾರಣ ಮುಂದಿಟ್ಟು ಐಪಿಎಲ್ ಪಂದ್ಯವನ್ನು ಸ್ಥಳಾಂತರಿಸಬೇಕೆಂದು ಮುಂಬೈ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಯಶಸ್ವಿಯಾದ ಬೆನ್ನಲ್ಲೇ, ಐಪಿಎಲ್ ಪಂದ್ಯ ನಡೆಸಲು ಅನುಮತಿ ನಿರಾಕರಿಸಲು ಕೋರಿ ಮತ್ತಷ್ಟು ಸರಣಿ ಪಿಐಎಲ್ ಗಳು ಸಿದ್ಧಗೊಂಡಿವೆ.
ಮುಂಬೈ ನಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಮುಂಬೈ ಹೈಕೋರ್ಟ್ ನೀಡಿರುವ ತೀರ್ಪು, ಬರ ಎದುರಿಸುತ್ತಿರುವ ಬೇರೆ ರಾಜ್ಯಗಳಿಗೂ ಮಾದರಿಯಾಗುವ ಸಾಧ್ಯತೆಗಳಿದ್ದು, ಬೆಂಗಳೂರಿನಲ್ಲೂ ಮುಂಬೈ ಮಾದರಿಯಲ್ಲೇ ಐಪಿಎಲ್ ಪಂದ್ಯಾವಳಿ ವಿರೋಧಿಸಿ ಪಿಐಎಲ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಮುಂಬೈ ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿರುವ ಹೈಕೋರ್ಟ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗಾಗಿ ನೀರನ್ನು ಪೋಲು ಮಾಡಬಾರದು ಎಂದು ನಿರ್ದೇಶನ ನೀಡಿದೆ.
ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗಳಿಗೆ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲು ಮುಂದಾಗಿರುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್, ಪಂದ್ಯಾವಳಿಗಾಗಿ ಕ್ರೀಡಾಂಗಣಾಕ್ಕೆ ಅಗತ್ಯವಿರುವ ನೀರನ್ನು ಪೂರೈಕೆ ಮಾಡಲು ಸ್ವಂತವಾದ ಒಳಚರಂಡಿ ನೀರು ಸಂಸ್ಕರಣೆ ಘಟಕವನ್ನು ಸ್ಥಾಪನೆ ಮಾಡುತ್ತಿರುವುದಾಗಿ ತಿಳಿಸಿದೆ.
Advertisement