ಜಮೈಕಾ: ಕಿಂಗ್ ಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಚ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ನಲ್ಲೂ ಇನ್ನಿಂಗ್ಸ್ ಜಯದತ್ತ ಭಾರತ ದಾಪುಗಾಲಿರಿಸಿದ್ದು, ವಿಂಡೀಸ್ ಗೆ ಮಳೆರಾಯ ಆಸರೆಯಾಗಿದ್ದಾನೆ.
ವಿಂಡೀಸ್ ನೀಡಿದ 196 ರನ್ ಗಳ ಮೊದಲ ಇನ್ನಿಂಗ್ಸ್ ಗೆ ಬದಲಾಗಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 500 ರನ್ ಗಳನ್ನು ಸಿಡಿಸಿ 304 ರನ್ ಗಳ ಭಾರಿ ಮುನ್ನಡೆ ಸಾಧಿಸಿತು. ಭಾರತ ತಂಡ ಕಿ೦ಗ್ಸ್ಟನ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ 500ಕ್ಕೂ ಅಧಿಕ ರನ್ ದಾಖಲಿಸಿದ್ದು, ಒಟ್ಟಾರೆ ವಿ೦ಡೀಸ್ ನೆಲದಲ್ಲಿ 5ನೇ 500ಕ್ಕೂ ಅಧಿಕ ಮೊತ್ತವಾಗಿದೆ. ಇನ್ನು ಭಾರತ ತಂಡದ ಈ ಬೃಹತ್ ಮುನ್ನಡೆಯನ್ನು ಬೆನ್ನುಹತ್ತಿದೆ ವಿಂಡೀಸ್ ಪಡೆ 4ನೇ ದಿನದಾಟದಂತ್ಯಕ್ಕೆ ಕೇವಲ 48 ರನ್ ಗಳಿಗೆ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ವಿಂಡೀಸ್ ಗೆ ಆಸರೆಯಾದ ಮಳೆರಾಯ
ಇನ್ನು ಸೋಮವಾರ 3ನೇ ದಿನದಾಟದಲ್ಲಿ ಭೋಜನ ವಿರಾಮದ ಬಳಿಕ ಆರಂಭವಾದ ಮಳೆ ಭಾರತ ಜಯಕ್ಕೆ ಅಡ್ಡಗಾಲು ಹಾಕಿತ್ತು. ಇದೀಗ ಮತ್ತೆ ಐದನೇ ದಿನವೂ ಮಳೆಯಾಗುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ನೀಡಿದ್ದು, ಮಳೆಯಾದರೆ ಪಂದ್ಯ ಡ್ರಾದತ್ತ ಸಾಗುವ ಸಾಧ್ಯತೆಗಳಿವೆ. ಹೀಗಾಗಿ ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ಭಾರತ ತಂಡ ಕೇವಲ ವಿಂಡೀಸ್ ತಂಡದ ವಿಕೆಟ್ ಪಡೆದರೆ ಸಾಲದು ಮಳೆ ಬಾರದಂತೆ ಪ್ರಾರ್ಥಿಸಬೇಕಿದೆ.
ಈಗಾಗಲೇ ವಿಂಡೀಸ್ ತಂಡ 48 ರನ್ ಗಳಿಗೆ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದ್ದು, ಐದನೇ ಮತ್ತು ಪಂದ್ಯದ ಅಂತಿಮ ದಿನಪೂರ್ತಿ ಆಡಲೇ ಬೇಕಾದ ಅನಿರ್ವಾಯತೆಗೆ ಸಿಲುಕಿದೆ.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಮಹಮದ್ ಶಮಿ 25 ರನ್ ನೀಡಿ 2 ವಿಕೆಟ್ ಪಡೆದರು.
Advertisement