ರವಿಶಾಸ್ತ್ರಿಗೆ ಬ್ಯಾಟಿಂಗ್ ಕೋಚ್ ಹುದ್ದೆ ನೀಡಲು ಬಿಸಿಸಿಐ ನಕಾರ
ನವದೆಹಲಿ: ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳುವ ಸಲಹಾ ಸಮಿತಿಯ ಶಿಫಾರಸ್ಸನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿರಸ್ಕರಿಸಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ತೀವ್ರ ಪೈಪೋಟಿ ನಡೆಸಿ ಕೊನೆಗೆ ಅವಕಾಶ ವಂಚಿತರಾಗಿದ್ದ ರವಿಶಾಸ್ತ್ರಿ ಅವರನ್ನು ತಂಡದ ಭಾಗವನ್ನಾಗಿ ಮಾಡುವ ಸಲುವಾಗಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಣಣ್ ಒಳಗೊಂಡ ಸಲಹಾ ಸಮಿತಿ ಬಿಸಿಸಿಐಗೆ ಪ್ರಸ್ತಾವನೆ ಸಲ್ಲಿಸಿತ್ತು.
ಸತತ ಎಂಟು ಗಂಟೆಗೂ ಅಧಿಕ ಕಾಲ ನಡೆದ ಬಿಸಿಸಿಐ ಸಭೆಯಲ್ಲಿ ಸಲಹಾ ಸಮಿತಿ ರವಿಶಾಸ್ತ್ರಿ ಅವರನ್ನು ಬ್ಯಾಟಿಂಗ್ ಕೋಚ್ ಮಾಡುವಂತೆ ಸೂಚಿಸಿತ್ತು. ಆದರೆ ಸಮಿತಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಮಾತ್ರ ಹೆಸರು ಸೂಚಿಸುವಂತೆ ಅಧಿಕಾರ ನೀಡಲಾಗಿತ್ತು. ಇದರಿಂದಾಗಿ ಬ್ಯಾಟಿಂಗ್ ಕೋಚ್ ಗೆ ಸಮಿತಿಯ ಪ್ರಸ್ತಾವನೆಯನ್ನು ನಿರಾಕರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಕುಂಬ್ಳೆ ಪ್ರಸ್ತುತ ಹಂಗಾಮಿ ಬ್ಯಾಟಿಂಗ್ ಹಾಗೂ ಫಿಲ್ಡಿಂಗ್ ಕೋಚ್ ಗಳಾದ ಅಭಯ್ ಶರ್ಮ ಹಾಗೂ ಸಂಜಯ್ ಬಂಗಾರ್ ಕುರಿತು ಒಲವು ತೋರಿಸಿದ ಹಿನ್ನೆಲೆಯಲ್ಲಿ ಅವರೆ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.