ಅರ್ಹತಾ ಪಂದ್ಯದಲ್ಲಿ ಗೆದ್ದ ಬಾಂಗ್ಲಾ ಪ್ರಧಾನ ಹಂತಕ್ಕೆ

ಟಿ20 ವಿಶ್ವಕಪ್ ನ ಭಾನುವಾರ ನಡೆದ ಅರ್ಹತಾ ಪಂದ್ಯದಲ್ಲಿ ಒಮನ್ ವಿರುದ್ಧ ಬಾಂಗ್ಲಾದೇಶ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ..
ಗೆದ್ದ ಸಂಭ್ರಮದಲ್ಲಿ ಬಾಂಗ್ಲಾ ಆಟಗಾರರು (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆದ್ದ ಸಂಭ್ರಮದಲ್ಲಿ ಬಾಂಗ್ಲಾ ಆಟಗಾರರು (ಚಿತ್ರಕೃಪೆ: ಕ್ರಿಕ್ ಇನ್ಫೋ)

ಧರ್ಮಶಾಲಾ: ಟಿ20 ವಿಶ್ವಕಪ್ ನ ಭಾನುವಾರ ನಡೆದ ಅರ್ಹತಾ ಪಂದ್ಯದಲ್ಲಿ ಒಮನ್ ವಿರುದ್ಧ ಬಾಂಗ್ಲಾದೇಶ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಧಾನ ಹಂತದ  ತಂಡಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಟಾಸ್ ಗೆದ್ದ ಒಮನ್ ಬಾಂಗ್ಲಾದೇಶವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಬಳಿಕ ರನ್ ಚೇಸ್ ಮಾಡುವ ಅಭಿಲಾಶೆಯಿಂದಾಗಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಒಮನ್ ತಂಡದ  ಎಲ್ಲ ಲೆಕ್ಕಾಚಾರಗಳನ್ನು ಬಾಂಗ್ಲಾದೇಶ ತಂಡ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ನುಚ್ಚುನೂರು ಮಾಡಿದರು. ಕೇವಲ 91 ಎಸೆತಗಳನ್ನು ಎದುರಿಸಿದ ತಮೀಮ್ ಇಕ್ಬಾಲ್ 5 ಸಿಕ್ಸರ್ ಮತ್ತು  10 ಬೌಂಡರಿಗಳ ಸಹಾಯದಿಂದ ಅಜೇಯ 103 ರನ್ ಪೇರಿಸದರು. ತಮೀಮ್ ಗೆ ಶಬ್ಬೀರ್ ರೆಹಮಾನ್ (44 ರನ್) ಉತ್ತಮ ಸಾಥ್ ನೀಡಿದರು.

ಒಮನ್ ಪರ ಲಖೇತಾ ಮತ್ತು ಖವಾರ್ ಅಲಿ ತಲಾ 1 ವಿಕೆಟ್ ಗಳಿಸಿದ್ದನ್ನು ಬಿಟ್ಟರೆ ಇನ್ನಾವುದೇ ಬೌಲರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡ ನಿಗದಿತ  20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಬರೊಬ್ಬರಿ 180 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಢಕ್ವರ್ತ್ ಲೂಯಿಸ್ ನಿಯಮದನ್ವಯ ಒಮನ್  ಗೆ ಗೆಲ್ಲಲು 120 ಓವರ್ ಗಳಲ್ಲಿ 120 ರನ್ ಗಳ ಗುರಿ ನಿಗದಿ ಪಡಿಸಲಾಯಿತು.

ಈ ಮೊತ್ತವನ್ನು ಬೆನ್ನುಹತ್ತಿದ ಒಮನ್ ತಂಡ ಆರಂಭದಿಂದಲೂ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಜತೀಂದರ್ ಸಿಂಗ್ 25 ರನ್ ಮತ್ತು ಅದ್ನಾನ್ ಇಲಿಯಾಸ್ 13 ರನ್ ಗಳಿಸಿದ್ದನ್ನು  ಬಿಟ್ಟರೆ ಒಮನ್ ಇನ್ನಾವುದೇ ಆಟಗಾರರೂ ಎರಡಂಕಿ ಮೊತ್ತವನ್ನೂ ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಓಮನ್ ತಂಡ 12 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 65 ರನ್ ಗಳನಷ್ಟೇ  ಸೇರಿಸಲು ಶಕ್ತವಾಯಿತು. ಆ ಮೂಲಕ ಬಾಂಗ್ಲಾ ಎದುರು 54 ರನ್ ಗಳ ಹೀನಾಯ ಸೋಲುಕಂಡಿತು.

ಬಾಂಗ್ಲಾಪರ ಶಕೀಬ್ ಅಲ್ ಹಸನ್ 4 ವಿಕೆಟ್ ಗಳನ್ನು ಕಬಳಿಸಿದರೆ, ಸಬ್ಬೀರ್ ರೆಹಮಾನ್, ಮುಶ್ರಫೆ ಮೋರ್ತಾಜ, ಟಸ್ಕಿನ್ ಅಹ್ಮದ್ ಮತ್ತು ಅಲ್ ಅಮೀನ್ ಹೊಸೇನ್ ತಲಾ 1 ವಿಕೆಟ್ ಪಡೆದರು.  ಬಾಂಗ್ಲಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ತಮೀಮ್ ಇಕ್ಬಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com