ಕೋಲ್ಕತಾ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಸಾಂಘಿಕ ಹೋರಾಟ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್-9 ಟೂರ್ನಿಯ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ.
ಯೂಸುಫ್ ಪಠಾಣ್(ಅಜೇಯ 52ರನ್), ಮನೀಷ್ ಪಾಂಡೆ (48 ರನ್) ಭರ್ಜರಿ ಬ್ಯಾಟಿಂಗ್ ಮತ್ತು ಸುನಿಲ್ ನರೇನ್ (26 ಕ್ಕೆ 3) ಮತ್ತು ಕುಲ್ದೀಪ್ ಯಾದವ್ (28 ಕ್ಕೆ 2) ಭರ್ಜರಿ ಬೌಲಿಂಗ್ ಕೋಲ್ಕತಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೋಲ್ಕತ ನೈಟ್ ರೈಡರ್ಸ್ ತಂಡದ ಮೊತ್ತ 57 ರನ್ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಯೂಸುಫ್ ಪಠಾಣ್ (ಅಜೇಯ 52) ಮತ್ತು ಮನೀಷ್ ಪಾಂಡೆ (48ರನ್) ತಂಡಕ್ಕೆ ಆಸರೆ ಒದಗಿಸಿದರು. 4ನೇ ವಿಕೆಟ್ಗೆ 87 ರನ್ ಜತೆಯಾಟವಾಡಿದ ಈ ಜೋಡಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. ಪಾಂಡೆ ಔಟಾದ ನಂತರ ಕ್ರೀಸ್ಗೆ ಬಂದ ಬ್ಯಾಟ್ಸ್ಮನ್ಗಳು ಅಲ್ಪ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಕೆಕೆಆರ್ ನೀಡಿದ 172 ರನ್ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೆಕೆಆರ್ ವಿರುದ್ಧ 20 ರನ್ಗಳಿಂದ ಸೋಲನುಭವಿಸಿತು. ಹೈದರಾಬಾದ್ ಪರ ಶಿಖರ್ ಧವನ್ (51) ಮಾತ್ರ ಕೊಂಚ ಪ್ರತಿರೋಧ ತೋರಿದರು. ಉಳಿದಂತೆ ಬೇರೆ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ತಂಡ ಸೋಲನುಭವಿಸಬೇಕಾಯಿತು. ಕೆಕೆಆರ್ ಪರ ಸುನಿಲ್ ನರೇನ್ 3 ಮತ್ತು ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು. ಹೈದರಾಬಾದ್ ಪರ ದೀಪಕ್ ಹೂಡ (16 ಕ್ಕೆ 2) ಪ್ರಭಾವಿ ಬೌಲಿಂಗ್ ದಾಳಿ ನಡೆಸಿದರು.
ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೋಲ್ಕತಾದ ಯೂಸುಫ್ ಪಠಾಣ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement