
ನವದೆಹಲಿ: ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ್ದು, ತಾನು ರಚಿಸಿದ ಸಮಿತಿಯ ಎಲ್ಲ ಶಿಫಾರಸ್ಸುಗಳನ್ನು ಜಾರಿಯಾಗಲೇ ಬೇಕು ಎಂದು ಹೇಳಿದೆ.
ಬಿಸಿಸಿಐಗೆ ನೂತನ ಆಡಳಿತ ಮಂಡಳಿ ಸಿಬ್ಬಂದಿ ನೇಮಕ ಮಾಡುವ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಜಸ್ಟಿಸ್ ಲೋಧಾ ಸಮಿತಿಯ ಎಲ್ಲ ಶಿಫಾರಸ್ಸುಗಳು ಜಾರಿಯಾಗಲೇ ಬೇಕು ಎಂದು ಹೇಳಿರುವ ನ್ಯಾಯಾಲಯ, ಅದನ್ನು ಹೇಗೆ ಜಾರಿ ಮಾಡಬೇಕು ಎಂಬ ವಿಚಾರದ ಬಗ್ಗೆ ಮಾತ್ರ ಬಿಸಿಸಿಐ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಿಎಸ್ ಠಾಕೂರ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಬಿಸಿಸಿಐ ರಾತ್ರೋರಾತ್ರಿ 400 ಕೋಟಿ ಹಣವನ್ನು ವರ್ಗಾವಣೆ ಮಾಡುವಂತಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗಿನ ಆರ್ಥಿಕ ವ್ಯವಹಾರಗಳು ಕಡ್ಡಾಯವಾಗಿ ಪಾರದರ್ಶಕವಾಗಿರಬೇಕು ಎಂದು ಹೇಳುವ ಮೂಲಕ ಬಿಸಿಸಿಐನ ಖಾತೆಗಳ ಮೇಲೆ ಲೋಧಾ ಸಮಿತಿ ಇರಿಸಿರುವವ ನಿಗಾವನ್ನು ಬೆಂಬಲಿಸಿದೆ.
ಇತ್ತೀಚೆಗಷ್ಟೇ ಜಸ್ಟಿಸ್ ಲೋಧಾ ನೇತೃತ್ವದ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವದರ ಮೂಲಕ ಬಿಸಿಸಿಐನ ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಬ್ರೇಕ್ ಹಾಕಿತ್ತು. ಇದು ಬಿಸಿಸಿಐ ಹಾಗೂ ಲೋಧಾ ಸಮಿತಿಯ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು.
Advertisement