ಹೈದರಾಬಾದ್: ಬೆಂಗಳೂರು ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದ ಟೀಂ ಇಂಡಿಯಾ ಬೌಲರ್ ಅಮಿತ್ ಮಿಶ್ರಾ ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಅವರ ಬದಲಿಗೆ ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಸ್ಥಾನ ನೀಡಲಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ-20 ಪಂದ್ಯದ ವೇಳೆ ಅಮಿತ್ ಮಿಶ್ರಾ ಮೊಣಕಾಲಿನ ನೋವಿಗೊಳಗಾಗಿದ್ದರು. ಗಾಯವಾಗಿ ಹಲವು ದಿನಗಳೇ ಕಳೆದರೂ ಮಿಶ್ರಾ ನೋವಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಅಂತೆಯೇ ಮಿಶ್ರಾ ಸ್ಥಾನಕ್ಕೆ 22 ವರ್ಷದ ಬೌಲರ್ ಕುಲದೀಪ್ ಯಾದವ್ ಗೆ ಟೀಂ ಇಂಡಿಯಾ ಪರ ಆಡುವ ಅದೃಷ್ಟ ಒಲಿದುಬಂದಿದೆ.
ಕುಲದೀಪ್ ಯಾದವ್ ಗೆ ರಾಷ್ಟ್ರೀಯ ತಂಡದಿಂದ ಕರೆ ಬರುತ್ತಿರುವುದು ಇದೇ ಮೊದಲು. ಈ ಹಿಂದೆ ಯಾದವ್ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿದ್ದರು. ಆ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 32ಕ್ಕೆ 1 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 2 ರನ್ ಗೆ 2 ವಿಕೆಟ್ ಉರುಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿ 16ರಿಂದ ಆರಂಭವಾಗಲಿರುವ ಮೂರು ದಿನ ಅಭ್ಯಾಸ ಪಂದ್ಯಕ್ಕಾಗಿ ಆರಿಸಲಾದ ತಂಡದಲ್ಲೂ ಯಾದವ್ ಸ್ಥಾನ ಸಂಪಾದಿಸಿದ್ದಾರೆ. ಪ್ರಸಕ್ತ ಋತುವಿನ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯಾದವ್ ಆ ಪಂದ್ಯದಲ್ಲಿ ಪ್ರಭಾವಿ ಬೌಲಿಂಗ್ ಪ್ರದರ್ಶನ ಮೂಡಿ ಬಂದಿರಲಿಲ್ಲ.
22 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಕುಲದೀಪ್ ಯಾದವ್ 33.11ರ ಸರಾಸರಿಯಲ್ಲಿ 81 ವಿಕೆಟ್ ಉರುಳಿಸಿದ್ದಾರೆ.
Advertisement