ಚೆನ್ನೈ : ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಡೆಯಬೇಕಿದ್ದ ಎಲ್ಲಾ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ಹೇಳಿದೆ.
ಚೆನ್ನೈನಲ್ಲಿ ನಿನ್ನೆ ಐಪಿಎಲ್ ಪಂದ್ಯ ವಿರೋಧಿಸಿ ತಮಿಳು ಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ಎದುರಾಗಿತ್ತು. ಚಿತ್ರ ನಿರ್ದೇಶಕ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಧರಿಸುತ್ತಿದ್ದ ಹಳದಿ ಬಣ್ಣದ ಜರ್ಸಿಯನ್ನು ಪ್ರತಿಭಟನಾಕಾರರು ಸುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ತಮಿಳು ಪರ ಸಂಘಟನೆಗೆ ಸೇರಿದ ಇಬ್ಬರು ಪ್ರತಿಭಟನಾಕಾರರು ಸಿಎಸ್ ಕೆ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಕ್ರೀಡಾಂಗಣದೊಳಗೆ ಶೂ ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಸಂದರ್ಭದಲ್ಲಿ 8ನೇ ಓವರ್ ನಡೆಯುತ್ತಿರಬೇಕಾದರೆ ಈ ಘಟನೆ ನಡೆದಿತ್ತು. ಫೀಲ್ಡರ್ ರವೀಂದ್ರ ಜಡೇಜಾ ಬಳಿ ಶೂ ಬಿದ್ದಿತ್ತು. ಆದಾಗ್ಯೂ, ಪ್ರತಿಭಟನಾಕಾರರ ಬಂಧನದ ನಂತರ ಪಂದ್ಯ ಮುಂದುವರೆಯಿತು.
ಕಾವೇರಿ ಪ್ರತಿಭಟನೆ ಬಗ್ಗೆ ಗಮನ ಕೇಂದ್ರಿಕರಿಸುವ ನಿಟ್ಟಿನಲ್ಲಿ ಟಿವಿಕೆ ಸಂಘಟನೆ ಹಾಗೂ ಹೊಸದಾಗಿ ಸ್ಥಾಪನೆಗೊಂಡಿರುವ ತಮಿಳು ನಿರ್ದೇಶಕರ ವೇದಿಕೆಯಿಂದ ಐಪಿಎಲ್ ನಿಷೇಧಿಸಲು ಕರೆ ನೀಡಲಾಗಿತ್ತು .
ಹಲವಾರು ತಮಿಳು ಪರ ಸಂಘಟನೆಗಳು ರಸ್ತೆಯಲ್ಲಿ ಧರಣಿ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
Advertisement