ಕೋಲ್ಕತ್ತಾ: ಭವಿಷ್ಯದ ಆಟಗಾರರನ್ನು ಸೃಷ್ಟಿಸುತ್ತಿರುವ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್, ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಕಿರಿಯ ಆಟಗಾರರಿಗೆ ಆಟದ ಕಡೆ ಗಮನ ಹರಿಸಿ, ಹಣ ನಿಮ್ಮ ಹಿಂದೆ ಬರುತ್ತದೆ ಎಂಬ ಸಲಹೆಯನ್ನು ನೀಡಿದ್ದರು ಎಂದು ಶಿವಂ ಮಾವಿ ಹೇಳಿದ್ದಾರೆ.
2018ರ ಅಂಡರ್ 19 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ಆಟಗಾರನಾಗಿದ್ದ ಶಿವಂ ಮಾವಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಮಾವಿಯ ಅದ್ಭುತ ಪ್ರದರ್ಶನ ಕಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2018ರ ಹರಾಜಿನಲ್ಲಿ ಮಾವಿಯನ್ನು 3 ಕೋಟಿ ರುಪಾಯಿಗೆ ಖರೀದಿಸಿತ್ತು.
ಐಪಿಎಲ್ ಟೂರ್ನಿಯ ಕೆಕೆಆರ್ ತಂಡದಲ್ಲಿ ಆಡುತ್ತಿರುವ ಬಗ್ಗೆ ಮಾತನಾಡಿರುವ ಮಾವಿ ರಾಹುಲ್ ದ್ರಾವಿಡ್ ಸರ್ ಅಂಡರ್ 19 ತಂಡದ ಆಟಗಾರರಿಗೆ ತಮ್ಮ ಆಟದ ಕಡೆ ಹೆಚ್ಚು ಗಮನ ಹರಿಸಿ ನಂತರ ಹಣ ನಿಮ್ಮ ಹಿಂದೆ ಬರುತ್ತದೆ ಎಂದು ಹೇಳಿದ್ದರು. ಆ ಮಾತುಗಳು ಇನ್ನು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ ಎಂದು ಹೇಳಿದ್ದಾರೆ.
ದೇಶಿಯ ಕ್ರಿಕೆಟ್ ನಿಂದ ಐಪಿಎಲ್ ನಲ್ಲಿ ಮುಂದುವರೆಯುವುದು ಯುವ ಕ್ರಿಕೆಟಿಗರಿಗೆ ಸಾಮಾನ್ಯ ವಿಷಯ. ಆದರೆ ಅಂಡರ್ 19 ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ಆಡಿದ್ದ ಶಿವಂ ಮಾವಿಗೆ ಉತ್ತರಪ್ರದೇಶದ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶವನ್ನು ಹೊಂದಿದ್ದಾರೆ.