ಮಂಕಡ್ ವಿವಾದ: ನಿಯಮ ಸಮರ್ಥಿಸಿಕೊಂಡ ಎಂಸಿಸಿ, ಅಶ್ವಿನ್ ಗೆ ಪರೋಕ್ಷ ಬೆಂಬಲ!

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ರ ಮಂಕಡ್ ವಿವಾದ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಈ ಬಗ್ಗೆ ಎಂಸಿಸಿ ಸ್ಪಷ್ಟನೆ ನೀಡಿದ್ದು, ತನ್ನ ನಿಯಮಾವಳಿಯನ್ನು ಸಮರ್ಥಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬೋರ್ನ್: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ರ ಮಂಕಡ್ ವಿವಾದ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಈ ಬಗ್ಗೆ ಎಂಸಿಸಿ ಸ್ಪಷ್ಟನೆ ನೀಡಿದ್ದು, ತನ್ನ ನಿಯಮಾವಳಿಯನ್ನು ಸಮರ್ಥಿಸಿಕೊಂಡಿದೆ.
ರಾಜಸ್ತಾನ ರಾಯಲ್ಸ್ ತಂಡದ ಆಟಗಾರ ಜಾಸ್ ಬಟ್ಲರ್ ರನ್ನು ಅಶ್ವಿನ್ ರನೌಟ್ ಮಾಡಿದ ಪರಿ ಭಾರಿ ಚರ್ಚೆ ಹುಟ್ಟುಹಾಕಿರುವಂತೆಯೇ ಇತ್ತ ಈ ವಿವಾದಕ್ಕೆ ಕಾರಣವಾದ ತನ್ನ ನಿಯಮವನ್ನು ಎಂಸಿಸಿ ಸಮರ್ಥಿಸಿಕೊಂಡಿದೆ. ಅಶ್ವಿನ್-ಜಾಸ್ ಬಟ್ಲರ್ ವಿವಾದದ ಕುರಿತು ಮಾತನಾಡದ ಎಂಸಿಸಿ ಕೇವಲ ತನ್ನ ನಿಯಮದ ಕುರಿತು ಮಾತ್ರವೇ ಮಾತನಾಡಿದೆ. ಆ ಮೂಲಕ ಪ್ರಕರಣದ ಕುರಿತು ಭುಗಿಲೆದ್ದಿರುವ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ.
ರೂಲ್ ಬುಕ್ ನಲ್ಲಿರುವ 41.16ನ ಕುರಿತು ಮಾತನಾಡಿರುವ ಎಂಸಿಸಿ, ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವ ಆಟಗಾರ ಬೌಲರ್ ಚೆಂಡನ್ನು ಎಸೆಯುವ ಮೊದಲೇ ಕ್ರೀಸ್ ಬಾರದು ಎಂದು ಹೇಳಿರುವ ಎಂಸಿಸಿ, ಬಟ್ಲರ್ ಔಟ್ ಆಗಿದ್ದು ಏಕೆ ಎಂಬುದನ್ನು ಊಹಿಸಬಲ್ಲೆವು ಎಂದೂ ಹೇಳಿದೆ. ಇಂತಹ ಕೃತ್ಯಗಳನ್ನು ತಡೆಯಲೆಂದೇ ಈ ನಿಯಮ ರೂಪಿಸಲಾಗಿದೆ ಎಂದು ಎಂಸಿಸಿ ಅಧಿಕೃತ ಹೇಳಿಕೆ ನೀಡಿದೆ. ಆ ಮೂಲಕ ಪರೋಕ್ಷವಾಗಿ ಅಶ್ವಿನ್ ಗೆ ಎಂಸಿಸಿ ಬೆಂಬಲ ನೀಡಿದೆ. 
ಅಂತೆಯೇ ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವ ಆಟಗಾರನಿಗೆ ಬೌಲರ್ ಎಚ್ಚರಿಕೆ ನೀಡಲೇಬೇಕು ಎಂಬುದಿಲ್ಲ. ಅದು ಕೇವಲ ಬೌಲರ್ ವಿವೇಚನಗೆ ಬಿಟ್ಟ ವಿಚಾರ. ಈ ಬಗ್ಗೆ ನಿಯಮಗಳಲ್ಲಿ ಉಲ್ಲೇಖವಿಲ್ಲ. ಅಂತೆಯೇ ಇದು ಕ್ರೀಡಾಸ್ಪೂರ್ತಿಗೆ ವಿರುದ್ಧವಾದದ್ದೂ ಅಲ್ಲ. ಬೌಲಿಂಗ್ ಮಾಡುವ ಮುಂಚೆಯೇ ಕ್ರೀಸ್ ಬಿಡುವ ಮೂಲಕ ಲಾಭ ಪಡೆಯಲು ಬ್ಯಾಟ್ಸಮನ್ ಯತ್ನಿಸಿದರೆ ಆತನನ್ನು ಔಟ್ ಮಾಡುವ ಮೂಲಕ ಬೌಲರ್ ಕೂಡ ಲಾಭ ಪಡೆಯಲು ಸ್ವತಂತ್ರರು. ನಾನ್ ಸ್ಟ್ರೈಕರ್ ನಲ್ಲಿರುವ ಬ್ಯಾಟ್ಸಮನ್ ಕೂಡ ಬೌಲರ್ ಬೌಲಿಂಗ್ ಮಾಡುವ ಮುಂಚೆಯೇ ಕ್ರೀಸ್ ಬಿಡುವ ಮೂಲಕ ಸರಿಯಲ್ಲದ ಲಾಭ ಪಡೆಯಲು ಯತ್ನಿಸಬಾರದು ಎಂದು ಹೇಳಿದೆ.
ಅಂತೆಯೇ ಅಶ್ವಿನ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಎಂಸಿಸಿ ಒಂದು ವೇಳೆ ಅಶ್ವಿನ್ ಬೇಕೆಂದೇ ಚೆಂಡನ್ನು ಎಸೆಯುವುದನ್ನು ತಡ ಮಾಡಿ ಬಳಿಕ ಬಟ್ಲರ್ ರನ್ನು ಔಟ್ ಮಾಡಿದ್ದರು. ಅದು ತಪ್ಪು. ಈ ಬಗ್ಗೆ ಥರ್ಡ್ ಅಂಪೈರ್ ಕಾನೂನಿನ ಅಡಿಯಲ್ಲಿ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಅದೇ ರೀತಿ ಬಟ್ಲರ್ ವಿಚಾರದಲ್ಲೂ ಅಂಪೈರ್ ತೀರ್ಮಾನ ಕೈಗೊಂಡಿದ್ದಾರೆ ಎಂದು ಭಾವಿಸಿದ್ದೇವೆ ಎಂದು ಎಂಸಿಸಿ ತನ್ನ ಹೇಳಿಕೆಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com