ನವದೆಹಲಿ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್.ಸಿ.ಎ) ಮುಖ್ಯಸ್ಥರನ್ನಾಗಿ ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿ ಬಿಸಿಸಿಐ ಆದೇಶಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಮಹತ್ವದ ಘೋಷಣೆ ಮಾಡಿದ್ದು ಜುಲೈ 1ರಿಂದಲೇ ದ್ರಾವಿಡ್ ಈ ಹುದ್ದೆ ಅಲಂಕರಿಸಬೇಕಾಗಿತ್ತು. ಆದರೆ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷರಾಗಿದ್ದ ದ್ರಾವಿಡ್ ಗೆ ಎರಡು ಹುದ್ದೆಗಳಲ್ಲಿ ಏಕಕಾಲಕ್ಕೆ ಕಾರ್ಯನಿರ್ವಹಿಸುವ ತೊಡಕು ಉಂಟಾಗಿತ್ತು. ಈಗ ಇಂಡಿಯಾ ಸಿಮೆಂಟ್ಸ್ ದ್ರಾವಿಡ್ ಗೆ ಎನ್ಸಿಎ ಅಧ್ಯಕ್ಷ ಸ್ಥಾನದ ಅವಧಿ ಮುಗಿಯುವವರೆಗೆ ರಜೆ ನೀಡುವುದಾಗಿ ಹೇಳಿದೆ. ಹಾಗಾಗಿ ದ್ರಾವಿಡ್ ತಾವು ಎನ್ಸಿಎ ಅಧ್ಯಕ್ಷ ಹುದ್ದೆಗೇರುವಲ್ಲಿನ ಅಡ್ಡಿ ನಿವಾರಣೆಯಾದಂತಾಗಿದೆ.
ಎನ್ಸಿಎ ಅಧ್ಯಕ್ಷ ಹುದ್ದೆಗೇರುವ ದ್ರಾವಿಡ್ ಇಲ್ಲಿ ಆಟಗಾರರಿಗೆ ತರಬೇತಿ, ಗಾಯಾಳು ಕ್ರೀಡಾಪಟುಗಳಿಗೆ ಪುನಶ್ಚೇತನ ಸೇರಿ ಮಹಿಳಾ ಹಾಗೂ ಪುರುಷ ಕ್ರಿಕೆಟ್ ತಂಡಗಳ ತರಬೇತಿಗಳಿಗೆ ಸಹ ನೆರವಾಗಲಿದ್ದಾರೆ.
ಭಾರತ-ಎ, ಇಂಡಿಯಾ ಅಂಡರ್ 19, ಇಂಡಿಯಾ ಅಂಡರ್-23 ತಂಡ ಸೇರಿ ಮಹಿಳಾ ಹಾಗೂ ಪುರುಷ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಕೋಚ್ ಗಳೊಡನೆ ದ್ರಾವಿಡ್ ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.