ಮುಂಬೈ: ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಆಫ್ ಸ್ಪಿನ್ನರ್ ಅಕ್ಷಯ್ ವಾಖರೆ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬೇಕೆಂದು ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೋರಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯವಾಗಿದ್ದ ದುಲೀಪ್ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಅಕ್ಷಯ್ ವಾಖರೆ ಭಾರತ ಗ್ರೀನ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದರು. ಇದರ ಫಲವಾಗಿ ಭಾರತ ರೆಡ್ ತಂಡ ಇನಿಂಗ್ಸ್ ಹಾಗೂ 38 ರನ್ಗಳಿಂದ ದುಲೀಪ್ ಟ್ರೋಫಿ ಮುಡುಗೇರಿಸಿಕೊಂಡಿತ್ತು.
ಕಳೆದ ಹಲವು ವರ್ಷಗಳಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಕ್ಷಯ್ ವಾಖರೆ ಚೆಂಡಿನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಇವರು ಪ್ರತಿನಿಧಿಸುವ ವಿದರ್ಭ ತಂಡ ಎರಡು ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿದೆ. ಶನಿವಾರ ಭಾರತ ಗ್ರೀನ್ ವಿರುದ್ಧ 13 ರನ್ ನೀಡಿ 5 ವಿಕೆಟ್ ಕಿತ್ತಿದ್ದು ಅದ್ಭುತ ಪ್ರದರ್ಶನ ಎಂದು ಭಜ್ಜಿ ಯುವ ಆಫ್ ಸ್ಪಿನ್ನರ್ ಪರ ಬ್ಯಾಟ್ ಬೀಸಿದರು.
Advertisement