
ನವದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿ.ಅರುಣ್ ಜೇಟ್ಲಿ ಅವರ ಪ್ರತಿಮೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ನ ದಂತಕಥೆ ಬಿಷನ್ ಸಿಂಗ್ ಬೇಡಿ ದೆಹಲಿ ಕ್ರಿಕೆಟ್ ಸಂಸ್ಥೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.
ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ಕ್ರಮವನ್ನು ಬಿಷನ್ ಸಿಂಗ್ ಬೇಡಿ ಬಲವಾಗಿ ಖಂಡಿಸಿದ್ದು, ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಕುರಿತಂತೆ ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಡಿಡಿಸಿಎ ನಡೆಸುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಕಿಡಿಕಾರಿದ್ದಾರೆ.
'ಡಿಡಿಸಿಎ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಯಾಗಿ ಇಲ್ಲಿಯವರೆಗೆ ಸಹನೆ ಹಾಗೂ ತಾಳ್ಮೆಯಿಂದ ಇದ್ದಿದ್ದಕ್ಕೆ ನನಗೆ ನನ್ನ ಮೇಲೆ ಹೆಮ್ಮೆಯಿದೆ. ಡಿಡಿಸಿಎ ನಿಜಕ್ಕೂ ನನ್ನ ತಾಳ್ಮೆಯನ್ನು ಪರೀಕ್ಷಿಸಿದೆ. ನಾನು ಈ ರೀತಿಯ ಕಠಿಣ ನಿರ್ಧಾರ ತಾಳಲು ಡಿಡಿಸಿಎ ಕಾರಣ. ತಕ್ಷಣವೇ ಗ್ಯಾಲರಿಗೆ ನನ್ನ ಹೆಸರನ್ನು ಅಳಿಸಿ ಹಾಕಿ. ನಾನು ಡಿಡಿಸಿಎಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
1999ರಿಂದ 2013ರ ಅವಧಿಯಲ್ಲಿ ಅರುಣ್ ಜೇಟ್ಲಿ ಡಿಡಿಸಿಎಯ ಚುಕ್ಕಾಣಿ ಹಿಡಿದಿದ್ದರು. 14 ವರ್ಷಗಳ ಸಂಸ್ಥೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಸ್ಮರಣಾರ್ಥವಾಗಿ ಡಿಡಿಸಿಎ 6 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ಡಿಡಿಸಿಎ ಮುಂದಾಗಿದೆ. 2017ರಲ್ಲಿ ಡಿಡಿಸಿಎ ಸ್ಟ್ಯಾಂಡ್ವೊಂದಕ್ಕೆ ಗೌರವ ಸೂಚಕವಾಗಿ ಮೊಹಿಂದರ್ ಅಮರನಾಥ್ ಹಾಗೂ ಬಿಷನ್ ಸಿಂಗ್ ಬೇಡಿ ಹೆಸರನ್ನು ಇಡಲಾಗಿತ್ತು. 2019ರ ಆಗಸ್ಟ್ ತಿಂಗಳಿನಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದ ಹೆಸರನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಬದಲಾಯಿಸಲಾಗಿತ್ತು.
Advertisement