ಆಸ್ಟ್ರೇಲಿಯಾ ಪ್ರವಾಸ: ಮೊದಲ ಟೆಸ್ಟ್ ಬಳಿಕ ಕೊಹ್ಲಿಗೆ ಪಿತೃತ್ವ ರಜೆ, ತಂಡದಲ್ಲಿ ರೋಹಿತ್‌ ಶರ್ಮಾಗೆ ಸ್ಥಾನ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿ ಭಾರತಕ್ಕೆ ವಾಪಸಾಗಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಅವರ ಜತೆಗಿರುವ ಉದ್ದೇಶದಿಂದ ಉಳಿದ ಮೂರು ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿ ಭಾರತಕ್ಕೆ ವಾಪಸಾಗಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಅವರ ಜತೆಗಿರುವ ಉದ್ದೇಶದಿಂದ ಉಳಿದ ಮೂರು ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಡಿಸೆಂಬರ್ 17ರಿಂದ ಅಡಿಲೆಡ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಅದು ಹಗಲು- ರಾತ್ರಿ ಪಂದ್ಯವಾಗಿದೆ. ಹೀಗಾಗಿ ಮೆಲ್ಬೋರ್ನ್, ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆಯುವ ಪಂದ್ಯಗಳಿಗೆ ಅಜಿಂಕ್ಯ ರಹಾನೆ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.

ಹಿರಿಯ ಆಟಗಾರ ರೋಹಿತ್ ಶರ್ಮ ಅವರು ಕೊನೆಗೂ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಅವರನ್ನು ಟೆಸ್ಟ್ ಸರಣಿಯಲ್ಲಿ ಆಡಿಸಲು ಆಯ್ಕೆ ಸಮಿತಿ ತೀರ್ಮಾನಿಸಿದೆ. ಆದರೆ, ಅವರು ನವೆಂಬರ್ 12ರಂದು ದುಬೈನಿಂದ ಆಸ್ಟ್ರೇಲಿಯಾಕ್ಕೆ ತೆರಳದೇ, ತಡವಾಗಿ ತಂಡ ಸೇರಿಕೊಳ್ಳಲಿದ್ದಾರೆ. ಗಾಯದ ಸಮಸ್ಯೆಗೆ ಒಳಗಾಗಿರುವ ಅವರ ಫಿಟ್ನೆಸ್ ಬಗ್ಗೆ ವೈದ್ಯಕೀಯ ತಂಡ ನಿಗಾ ವಹಿಸುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ತಂಡವನ್ನು ಆಯ್ಕೆ ಮಾಡಿದಾಗ ಸ್ಥಾನ ಪಡೆಯದ ಇಶಾಂತ್ ಶರ್ಮ ಅವರನ್ನೂ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಟ್ಟೆಯ ಸ್ನಾಯುವಿನ ಸಮಸ್ಯೆಗೆ ಒಳಗಾಗಿದ್ದ ಇಶಾಂತ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಗುಣಮುಖರಾಗಿ ಫಿಟ್ನೆಸ್ ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಐಪಿಎಲ್‌ನ ಭರ್ಜರಿ ಪ್ರದರ್ಶನದ ಮೂಲಕ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ತಮಿಳುನಾಡಿನ ವರುಣ್ ಚಕ್ರವರ್ತಿ ಭುಜದ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ತಮಿಳುನಾಡಿನವರೇ ಆದ ಟಿ. ನಟರಾಜನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ಅವರು ನೆಟ್ ಬೌಲರ್ ಆಗಿ ಕಾಯ್ದಿರಿಸಿದ ಆಟಗಾರರ ವಿಭಾಗದಲ್ಲಿದ್ದರು. ಅದೇ ರೀತಿ ಕಾಯ್ದಿರಿಸಿದ ವಿಭಾಗಕ್ಕೆ ಅವಕಾಶ ಪಡೆದಿದ್ದ ವೇಗಿ ಕಮಲೇಶ್ ನಾಗರಕೋಟಿ ಕೂಡ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ.

ಐಪಿಎಲ್‌ನಲ್ಲಿ ಆಡುವ ವೇಳೆ ಗಾಯದ ಸಮಸ್ಯೆಗೆ ಒಳಗಾಗಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರ ಸುಧಾರಣೆಯನ್ನು ಗಮನಿಸಿ ಪ್ರವಾಸಿ ತಂಡದೊಳಗೆ ಸೇರ್ಪಡೆ ಮಾಡಲು ಆಯ್ಕೆ ಮಂಡಳಿ ತೀರ್ಮಾನಿಸಿದೆ. ಒಂದು ವೇಳೆ ಗುಣಮುಖರಾದರೆ ಅವರು ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ಇಲ್ಲದಿದ್ದರೆ, ರಿಷಭ್ ಪಂತ್ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೇರಳದ ಯುವ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಸೀಮಿತ ಓವರ್‌ಗಳ ಪಂದ್ಯಕ್ಕೆ ಬ್ಯಾಕ್‌ಅಪ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com