ಐಪಿಎಲ್ 2020: ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ ಬಗ್ಗೆ ಕೆ.ಎಲ್‌. ರಾಹುಲ್‌ ಗುಣಗಾನ

ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ನಿಕೋಲಸ್‌ ಪೂರನ್‌ ತೋರಿದ ಬ್ಯಾಟಿಂಗ್‌ ಪ್ರದರ್ಶನವನ್ನು ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಾಯಕ ಕೆ.ಎಲ್‌ ರಾಹುಲ್‌ ಶ್ಲಾಘಿಸಿದರು.
ಕೆಎಲ್ ರಾಹುಲ್-ನಿಕೋಲಸ್‌ ಪೂರನ್‌
ಕೆಎಲ್ ರಾಹುಲ್-ನಿಕೋಲಸ್‌ ಪೂರನ್‌
Updated on

ಶಾರ್ಜಾ: ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ನಿಕೋಲಸ್‌ ಪೂರನ್‌ ತೋರಿದ ಬ್ಯಾಟಿಂಗ್‌ ಪ್ರದರ್ಶನವನ್ನು ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಾಯಕ ಕೆ.ಎಲ್‌ ರಾಹುಲ್‌ ಶ್ಲಾಘಿಸಿದರು.

ಗುರುವಾರ ರಾತ್ರಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌, ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 201 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಕಿಂಗ್ಸ್  ಇಲೆವೆನ್‌ ಪಂಜಾಬ್‌ 16.5 ಓವರ್‌ಗಳಿಗೆ 132 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ ಪಂಜಾಬ್‌ಗೆ 5ನೇ ಸೋಲು ಇದಾಯಿತು. 202 ರನ್‌ಗಳ ಗುರಿ ಹಿಂಬಾಲಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ಪರ ಕಠಿಣ ಹೋರಾಟ ನಡೆಸಿದ್ದು ನಿಕೋಲಸ್‌ ಪೂರನ್‌ ಮಾತ್ರ. ಅವರು ಸನ್‌ರೈಸರ್ಸ್  ಹೈದರಾಬಾದ್ ಬೌಲರ್‌ಗಳಿಗೆ ಬೆವರಿಳಿಸಿದರು. ಆಡಿದ ಕೇವಲ 37 ಎಸೆತಗಳಿಗೆ ಏಳು ಸಿಕ್ಸರ್‌ ಹಾಗೂ ಐದು ಬೌಂಡರಿಯೊಂದಿಗೆ ಒಟ್ಟು 77 ರನ್‌ಗಳನ್ನು ಸಿಡಿಸಿದರು. ಅವರ ಜತೆ ಮತ್ತೊಂದು ತುದಿಯಲ್ಲಿ ಯಾರಾದರೂ ಸಾಥ್‌ ನೀಡಿದ್ದರೆ, ಖಂಡಿತಾ ಪಂಜಾಬ್ ಗೆಲುವು ದಾಖಲಿಸುತ್ತಿತ್ತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌, "ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ ನೋಡಲು ಉತ್ತಮವಾಗಿತ್ತು. ಅವರ ಪ್ರದರ್ಶನ ತುಂಬಾನೆ ಚೆನ್ನಾಗಿಯೇ ಇತ್ತು. ಕಳೆದ ವರ್ಷದಂತೆ ಈ ಬಾರಿಯೂ ಅವಕಾಶ ಸಿಕ್ಕಾಗಲೆಲ್ಲ ಅವರು ಅದನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ನಮಗೆ ಒಂದು  ವಿಷಯವೇನೆಂದರೆ ಪಾಸಿಟಿವ್‌ ಆಗಿ ಉಳಿಯುವುದು. ನಿಕ್ಕಿ(ಪೂರನ್) ಮುಂದಿನ ಪಂದ್ಯಗಳಲ್ಲಿಯೂ ಚೆನ್ನಾಗಿ ಆಡಲಿದ್ದಾರೆಂಬುದು ನಮಗೆ ಗೊತ್ತು. ಇಂದಿನ ಪಂದ್ಯದಲ್ಲಿನ ಅವರ ಪ್ರದರ್ಶನ ನಮ್ಮಲ್ಲಿ ಧನಾತ್ಮಕ ಮನೋಭಾವವನ್ನು ಮೂಡಿಸಿದೆ. ಕಳೆದ ಐದು ಪಂದ್ಯಗಳಿಂದ ಡೆತ್‌ ಬೌಲಿಂಗ್‌ನಿಂದ ನಾವು  ಹೆಣಗಾಡಿದ್ದೇವೆ. ಆದರೆ, ಇಂದು(ಗುರುವಾರ) ಡೆತ್‌ ಬೌಲಿಂಗ್‌ ಪಾಸಿಟಿವ್‌ ಕಂಡುಬಂದಿದೆ. ಹುಡುಗರು ಧೈರ್ಯವನ್ನು ತೋರಿಸಿದರು ಮತ್ತು ಅವರು ಕಂಡಿದ್ದ ಭರ್ಜರಿ ಆರಂಭ ನೋಡಿದರೆ, 230 ರನ್‌ಗಳಿಸುತ್ತಾರೆಂಬ ನಿರೀಕ್ಷೆಯನ್ನು ನಮ್ಮ ಬೌಲರ್‌ಗಳು ಹುಸಿಗೊಳಿಸಿದರು," ಎಂದು ರಾಹುಲ್‌ ಹೇಳಿದರು.

ಡೇವಿಡ್‌ ವಾರ್ನರ್‌ ಅವರ ವಿಕೆಟ್‌ ಪಡೆಯುವ ಮೂಲಕ 160 ರನ್‌ಗಳ ಮೊದಲನೇ ವಿಕೆಟ್‌ ಜತೆಯಾಟವನ್ನು ಬ್ರೇಕ್‌ ಮಾಡಿದ ರವಿ ಬಿಷ್ಣೋಯ್‌, ಮೂರು ಓವರ್‌ಗಳಿಗೆ 29 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಜತೆಗೆ ಅಕ್ಷ್‌ದೀಪ್‌ ಸಿಂಗ್‌ ಕೂಡ ನಿರ್ಣಾಯಕ ಸಮಯದಲ್ಲಿ  ವಿಕೆಟ್‌ಗಳನ್ನು ಪಡೆದರು. ಈ ಬಗ್ಗೆ ನಾಯಕ ಕೆ.ಎಲ್‌ ರಾಹುಲ್‌ ಯುವ ಬೌಲರ್‌ಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ರವಿ ಬಿಷ್ಣೋಯ್ ಅವರು ಸಾಕಷ್ಟು ಹೃದಯವಂತಿಕೆಯನ್ನು ತೋರಿಸಿದ್ದಾರೆ, ಇದು ಪವರ್‌ಪ್ಲೇ ಆಗಿರಲಿ ಅಥವಾ ಬ್ಯಾಕೆಂಡ್‌ ಆಗಿರಲಿ ಯಾವುದಕ್ಕೂ ಆತ ಹೆದರುವುದಿಲ್ಲ. ಆ ಸಂದರ್ಭವನ್ನು  ಅವರು ಆಹ್ಲಾದಿಸಿದ್ದಾರೆ. ಜತೆಗೆ ಅಕ್ಷ್‌ದೀಪ್‌ ಸಿಂಗ್‌ ಅಗತ್ನ ಸನ್ನಿವೇಶದಲ್ಲಿ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ," ಎಂದು ನಾಯಕ ಕೆ.ಎಲ್‌ ರಾಹುಲ್‌ ಯುವ ಬೌಲರ್‌ಗಳನ್ನು ಶ್ಲಾಘಿಸಿದರು. ಕಿಂಗ್ಸ್ ಇಲೆವೆನ್‌ ಪಂಜಾಬ್‌ ಆಡಿರುವ ಆರು ಪಂದ್ಯಗಳಿಂದ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ದಾಖಲಿಸಿದ್ದು,  ಇನ್ನುಳಿದ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎರಡು ಅಂಕಗಳೊಂದಿಗೆ ಪಂಜಾಬ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮುಂದಿನ ಭಾನುವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೆಣಸಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com