ಲಂಡನ್: ಟೀಂ ಇಂಡಿಯಾ-ಇಂಗ್ಲೆಂಡ್ ತಂಡಗಳ ನಡುವೆ ಮ್ಯಾಂಚೆಸ್ಟರ್ ನಲ್ಲಿ ಸೆಪ್ಟೆಂಬರ್ 10 ರಿಂದ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಕೊರೊನಾ ಕಾರಣದಿಂದ ರದ್ದುಗೊಳಿಸಲಾಗಿದೆ.
ಇದಕ್ಕೆ ಪ್ರಮುಖ ಕಾರಣ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಜೊತೆಗೆ ಇತರ ಆಟಗಾರರು ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದು ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಮೊದಲು ರವಿಶಾಸ್ತ್ರಿ, ನಂತರ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್, ಹಿರಿಯ ಫಿಸಿಯೋ ನಿತಿನ್ ಪಟೇಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಐದನೇ ಟೆಸ್ಟ್ಗೆ ಮೊದಲು, ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೂಡ ಕರೋನಾ ದೃಢಪಟ್ಟ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ಪಂದ್ಯರದ್ದುಪಡಿಸಿದ್ದರು.
ಈ ಪರಿಸ್ಥಿತಿಗೆ ಮುಖ್ಯ ಕೋಚ್ ರವಿಶಾಸ್ತ್ರಿ ಕಾರಣ ಎಂಬ ವ್ಯಾಪಕ ಟೀಕೆಗಳ ಹಿನ್ನಲೆಯಲ್ಲಿ ಮೊದಲ ಬಾರಿ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಪ್ರಮುಖ ಸುದ್ದಿ ಪತ್ರಿಕೆಯೊಂದಿಗೆ ಮಾತನಾಡಿ, ಇಂಗ್ಲೇಂಡ್ ನಲ್ಲಿ ಎಲ್ಲ ಬಾರ್ ಗಳು ತೆರೆದಿವೆ, ಆದರೆ ತಮ್ಮಿಂದಾಗಿ ತಂಡದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ತಮ್ಮನ್ನು ಟೀಕಿಸುವವರ ವಿರುದ್ದ ತಿರುಗಿ ಬಿದ್ದಿದ್ದಾರೆ.
ಬ್ರಿಟನ್ ನಲ್ಲಿ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲಾಗಿದೆ. ಎಲ್ಲಾ ಜನರು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಒಂದೊಮ್ಮೆ ನನ್ನಿಂದ ಸೋಂಕು ಹರಡಿದ್ದರೆ ಮೊದಲ ಟೆಸ್ಟ್ನಿಂದಲೇ ಅದು ಸಂಭವಿಸಬೇಕಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ, ಅವರು ಟೀಂ ಇಂಡಿಯಾ ಪ್ರದರ್ಶನವನ್ನು ಕೊಂಡಾಡಿದರು. ಕೊರೋನಾ ವಿಪತ್ತಿನ ಸಮಯದಲ್ಲೂ ಟೀಂ ಇಂಡಿಯಾ ಇಂಗ್ಲೆಂಡಿನ ವಿರುದ್ಧ ಬಹುತೇಕ ಗೆದ್ದಂತೆಯೇ ಆಟವಾಡಿದೆ ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂತಹದೇ ಪರಿಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅವರು ಶ್ಲಾಘಿಸಿದರು. ಕೋವಿಡ್ ಸಮಯದಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ನಲ್ಲಿ ಬೇರೆ ಯಾವುದೇ ತಂಡ ಸಹ ಟೀಂ ಇಂಡಿಯಾ ರೀತಿ ಆಡಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
Advertisement