3ನೇ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಅಜೇಯ ಜಯ ಸಾಧಿಸಿರುವ ಭಾರತ ತಂಡ ಬುಧವಾರ (ಜುಲೈ 27)ರಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಭಾರತ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಮಾಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮಾದರಿಯಲ್ಲಿ ಸತತ 12ನೇ ಸರಣಿ ಜಯವನ್ನು ದಾಖಲಿಸುವ ಮೂಲಕ ಭಾರತ ಭಾನುವಾರದಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ತಂಡವೊಂದರ ವಿರುದ್ಧ ಅತಿ ಹೆಚ್ಚು ಜಯ ಗಳಿಸಿದ ಕೀರ್ತಿ ಭಾರತದ್ದಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ತಂಡ ಒಂದು ಬದಲಾವಣೆಯನ್ನು ಮಾಡಿದ್ದು, ಅವೇಶ್ ಖಾನ್ ಬದಲಿಗೆ ಪ್ರಸಿದ್ಧ್ ಕೃಷ್ಣ ವಾಪಸ್ ಆಗಿದ್ದಾರೆ. ಇನ್ನೊಬ್ಬ ಯುವ ವೇಗಿ ಅರ್ಷದೀಪ್ ಸಿಂಗ್ ಮತ್ತೆ ಬೆಂಚ್ ಕಾಯಿಸಬೇಕಾಗಿದೆ.
ಅದೇ ರೀತಿ ವೆಸ್ಟ್ ಇಂಡೀಸ್ನ ನಾಯಕ ನಿಕೋಲಸ್ ಪೂರನ್ ಟಾಸ್ ವೇಳೆ ಮಾತನಾಡಿ, ಸತತ ಎರಡು ಸೋಲುಗಳ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವನ್ನು ಪಡೆಯಲು ಸಾಕಷ್ಟು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತಂಡದಲ್ಲಿ ಅವರು ಮೂರು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದ್ದು, ಜೇಸನ್ ಹೋಲ್ಡರ್, ಕೀಮೊ ಪಾಲ್ ಮತ್ತು ಕೀಸಿ ಕಾರ್ಟಿ ಆಡಲಿದ್ದಾರೆ.
ತಂಡಗಳು ಇಂತಿವೆ
ಭಾರತ:
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್:
ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ಕೀಮೋ ಪಾಲ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ