ಬಿಸಿಸಿಐ ನೀಡುವ ಪಿಂಚಣಿಯಿಂದಲೇ ಜೀವನ, ಸಚಿನ್ ಗೆ ಎಲ್ಲವೂ ಗೊತ್ತು, ಅವರಿಂದ ಏನನ್ನೂ ನಿರೀಕ್ಷಿಸಲಾರೆ; ವಿನೋದ್ ಕಾಂಬ್ಳಿ

ತಿಂಗಳಿಗೆ 30 ಸಾವಿರ ಪಿಂಚಣಿ ಬರುತ್ತಿದ್ದು, ಇದರೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ ಎಂದು  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ನೋವು ಹಂಚಿಕೊಂಡಿದ್ದಾರೆ.
ವಿನೋದ್ ಕಾಂಬ್ಳಿ
ವಿನೋದ್ ಕಾಂಬ್ಳಿ

ಮುಂಬಯಿ: ನಾನು ನಿರುದ್ಯೋಗಿಯಾಗಿದ್ದೇನೆ, ನಮ್ಮ ಕುಟುಂಬವು ಬಿಸಿಸಿಐ ನೀಡುವ ಪಿಂಚಣಿಯಿಂದ ಬದುಕು ಸಾಗಿಸುತ್ತಿದೆ. ತಿಂಗಳಿಗೆ 30 ಸಾವಿರ ಪಿಂಚಣಿ ಬರುತ್ತಿದ್ದು, ಇದರೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ ಎಂದು  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ನೋವು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಂಬ್ಳಿ, ನಾನು ಈ ಹಿಂದೆ  ಸಚಿನ್ ತೆಂಡೂಲ್ಕರ್ ಅವರ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದೆ. ನಾನು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದೆ. ಇದಾದ ಬಳಿಕ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಕ್ಯಾಬ್​ನಲ್ಲಿ ಹೋಗುತ್ತಿದ್ದೆ. ಅಲ್ಲದೆ ಸಂಜೆಯವರೆಗೆ ಬಿಕೆಸಿ ಗ್ರೌಂಡ್ ನಲ್ಲಿ ಕೋಚಿಂಗ್ ಕೊಡುತ್ತಿದ್ದೆ. ಇದು ನನಗೆ ತುಂಬಾ ಬೇಸರದ ದಿನಚರಿಯಾಗಿತ್ತು ಎಂದು ಕಾಂಬ್ಳಿ ತಿಳಿಸಿದ್ದಾರೆ.

ನನ್ನ ಪರಿಸ್ಥಿತಿಯ ಬಗ್ಗೆ ಸಚಿನ್‌ಗೆ ಎಲ್ಲವೂ ಗೊತ್ತು. ಆದರೆ ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ತೆಂಡೂಲ್ಕರ್ ನನಗೆ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸ ನೀಡಿದರು. ಅದರಿಂದ ನಾನು ತುಂಬಾ ಸಂತೋಷಪಟ್ಟಿದ್ದೆ. ಆತ ನನಗೆ ಬಹಳ ಒಳ್ಳೆಯ ಸ್ನೇಹಿತ. ಅವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿನೋದ್ ಕಾಂಬ್ಳಿ ತಿಳಿಸಿದ್ದಾರೆ.

ನಾನು ಯುವ ಆಟಗಾರರಿಗೆ ಸಹಾಯ ಮಾಡುವಂತಹ ಕೆಲಸವನ್ನು ನಿರ್ವಹಿಸಲು ಬಯಸುತ್ತೇನೆ. ನಾನು ನನ್ನ ಕುಟುಂಬದ ಜೀವನ ನಿರ್ವಹಣೆಗೆ ಹಣ ಬೇಕಾಗಿದೆ, ನನಗೆ ಮಾಡಲು ಕೆಲಸ ಬೇಕು ಎಂದು ಕಾಂಬ್ಳಿ ತಿಳಿಸಿದ್ದಾರೆ.

ಅಮೋಲ್ ಮಜುಂದಾರ್ ಮುಂಬೈ ತಂಡದ ಮುಖ್ಯ ಕೋಚ್ ಎಂದು ನನಗೆ ತಿಳಿದಿದೆ. ನಾವೆಲ್ಲರೂ ಜೊತೆಯಾಗಿ ಆಡಿದ ಆಟಗಾರರು. ಹೀಗಾಗಿ ಅವರಿಗೆ ಸಹಾಯ ಮಾಡಲು ನಾನು ಸದಾ ಸಿದ್ದನಾಗಿದ್ದೇನೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com