ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 117ರನ್ ಗಳ ಅಲ್ಪ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 16.4 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು. ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಸಾಯಿ ಸುದರ್ಶನ್ ಗಮನ ಸೆಳೆದರು.
ಭಾರತಕ್ಕೆ ಆರಂಭಿಕ ಆಘಾತ
ಅಲ್ಪ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೇವಲ 5 ರನ್ ಗಳಿಸಿ ಮುಲ್ಡರ್ ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಆ ಬಳಿಕ ಸಾಯಿಸುದರ್ಶನ್ ಜೊತೆಗೂಡಿದ ಶ್ರೇಯಸ್ ಅಯ್ಯರ್ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ಹೊಸ್ತಿಲವರೆಗೂ ಕೊಂಡೊಯ್ದರು.
43 ಎಸೆತಗಳನ್ನು ಎದುರಿಸಿದ ಸಾಯಿ ಸುದರ್ಶನ್ 9 ಬೌಂಡರಿಗಳ ನೆರವಿನಿಂದ ಅಜೇಯ 55 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ 45 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿ ತಂಡ ಗೆಲುವಿನ ಹೊಸ್ತಿಲಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ತಿಲಕ್ ವರ್ಮಾ (1) ಮತ್ತು ಸಾಯಿ ಸುದರ್ಶನ್ ಗೆಲುವಿನ ಔಪಚಾರಿಕೆ ಮುಕ್ತಾಯಗೊಳಿಸಿದರು. ದಕ್ಷಿಣ ಆಫ್ರಿಕಾದ 5 ವಿಕೆಟ್ ಕಬಳಿಸಿದ ಅರ್ಶ್ ದೀಪ್ ಸಿಂಗ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ.
ಮುಂದಿನ ಅಂದರೆ 2ನೇ ಏಕದಿನ ಪಂದ್ಯ ಇದೇ ಡಿಸೆಂಬರ್ 19 ಮಂಗಳವಾರ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ ನಲ್ಲಿ ನಡೆಯಲಿದೆ.
Advertisement