
ನವದೆಹಲಿ: ಶ್ರೀಲಂಕಾದ ಏಜಂಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್, 'ಯುದ್ಧದಲ್ಲಿದ್ದಂತೆ ಭಾಸವಾಯಿತು, ತಂಡವನ್ನು ಗೆಲ್ಲಿಸಲು ನಾನು ಏನು ಮಾಡಬೇಕೋ ಅದನ್ನು ಮಾಡಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ವಿವಾದಾತ್ಮಕವಾಗಿ ಔಟಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದಾಗ ಉತ್ತರಿಸಿದ ಅವರು, ನಾವು ಯುದ್ಧದಲ್ಲಿದ್ದೇವೆ. ತಂಡವನ್ನು ಗೆಲ್ಲಿಸಲು ನಾನು ಏನು ಮಾಡಬೇಕೋ ಅದನ್ನು ಮಾಡಿದೆ ಎಂದು ಹೇಳಿದ್ದಾರೆ.
ಅಂತೆಯೇ ಘಟನೆಯನ್ನು ವಿವರಿಸಿದ ಶಕೀಬ್ ಅಲ್ ಹಸನ್, "ನಮ್ಮ ಫೀಲ್ಡರ್ ಒಬ್ಬರು ನನ್ನ ಬಳಿಗೆ ಬಂದು, "ನೀವು ಈಗ ಮೇಲ್ಮನವಿ ಸಲ್ಲಿಸಿದರೆ, ಅವರು ಔಟಾಗುತ್ತಾರೆ ಎಂದರು. ನಾನು ಅದಕ್ಕೆ ನೀವು ನಿಜವಾಗಿಯೂ ಹೇಳುತ್ತಿದ್ದೀರಾ ಎಂದು ಹೇಳಿದೆ. ಬಳಿಕ ನಾನು ಅಂಪೈರ್ ಬಳಿ ಮೇಲ್ಮನವಿ ಸಲ್ಲಿಸಿದೆ. ಅಂಪೈರ್ ಕೂಡ ನಾನು ಗಂಭೀರವಾಗಿ ಮೇಲ್ಮನವಿ ಸಲ್ಲಿಸುತ್ತಿದ್ದೇನೆಯೇ ಎಂದು ಖಚತಿಪಡಿಸಿಕೊಂಡರು.
ನನ್ನ ನಿಲುವು ನಾನು ಸ್ಪಷ್ಟಪಡಿಸಿದಾಗ ಅವರು ಔಟ್ ನೀಡಿದರು. ಮತ್ತೆ ಮ್ಯಾಥ್ಯೂಸ್ ನಮ್ಮ ಬಳಿ ಮನವಿಯನ್ನು ಹಿಂತೆಗೆದು ಕೊಳ್ಳಲು ಹೇಳಿದರು. ಇದು ನಿಯಮದಲ್ಲಿಯೇ ಇದೆ. ಹೀಗಾಗಿ ನಾನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಬಳಿಕ ಮ್ಯಾಥ್ಯೂಸ್ ರನ್ನು ಔಟ್ ಎಂದು ಘೋಷಣೆ ಮಾಡಲಾಯಿತು ಎಂದರು.
ಇದನ್ನೂ ಓದಿ: ಕ್ರೀಸ್ ಗೆ ತಡವಾಗಿ ಬಂದಿದ್ದಕ್ಕೆ ಔಟ್ ಕೊಟ್ಟ ಅಂಪೈರ್! ಕ್ರಿಕೆಟ್ನಲ್ಲಿ ಏನಿದು ಟೈಮ್ ಔಟ್ ರೂಲ್?
"ಇದು ಕಾನೂನುಗಳಲ್ಲಿದೆ. ಅದು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ. ಆದರೆ ನಾನು ಯುದ್ಧದಲ್ಲಿದ್ದಂತೆ ನನಗೆ ಅನಿಸಿತು. ನನ್ನ ತಂಡವು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ನಾನು ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಮತ್ತು ನಾನು ಏನು ಮಾಡಬೇಕೋ ಅದನ್ನು ನಾನು ಮಾಡಬೇಕಾಗಿತ್ತು. ಸರಿಯೋ ತಪ್ಪೋ - ಚರ್ಚೆಗಳು ನಡೆಯುತ್ತವೆ, ಆದರೆ ಅದು ನಿಯಮದಲ್ಲಿದ್ದರೆ, ಆ ಅವಕಾಶಗಳನ್ನು ತೆಗೆದುಕೊಳ್ಳಲು ನನಗೆ ಮನಸ್ಸಿರಲಿಲ್ಲ" ಎಂದು ಶಕೀಬ್ ಹೇಳಿದರು.
Advertisement