ಅಹ್ಮದಾಬಾದ್: ಭಾರತ ಕ್ರಿಕೆಟ್ ತಂಡದ ವಿಶ್ವಕಪ್ (ICC World Cup 2023) ಗೆಲ್ಲುವ ಆಸೆ ಭಗ್ನಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಸೋಲುತ್ತಿದ್ದಂತೆಯೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಮಹಮದ್ ಸಿರಾಜ್ ಮೈದಾನದಲ್ಲೇ ಕಣ್ಣೀರು ಹಾಕಿದರು.
ಭಾರತ ನೀಡಿದ್ದ 241 ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ 43 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ 6 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಟೂರ್ನಿಯುದ್ಧಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ತಂಡದ ಆಟಗಾರರು ಕೊನೆಯ ಫೈನಲ್ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅಂತೆಯೇ ಪಂದ್ಯ ಮುಕ್ತಾಯಗೊಂಡ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕಣ್ಣಿರು ಹಾಕಿದರು.
ಪಂದ್ಯದಲ್ಲಿ ಸೋಲುತ್ತಿದ್ದಂತೆ ಭಾರತ ತಂಡದ ಆಟಗಾರರು ನಿರಾಸೆ ಅನುಭವಿಸಿದರು. ಸೋಲಿನ ಸೂಚನೆ ಸಿಕ್ಕಿದ್ದ ಕಾರಣ ಬಹುತೇಕ ಆಸ್ಟ್ರೇಲಿಯಾ ತಂಡ ಗೆಲುವಿನ ರನ್ ಬಾರಿಸುವ ತನಕ ದುಃಖ ಅನುಭವಿಸಿದರು. ಆದರೆ, ಒಂದು ಬಾರಿ ಸೋಲು ಎದುರಾದ ತಕ್ಷಣ ಎಲ್ಲರ ದುಃಖದ ಕಟ್ಟೆಯೊಡೆಯಿತು. ಸಿರಾಜ್ ಅಳಲು ಆರಂಭಿಸಿದರೆ ಜಸ್ಪ್ರಿತ್ ಬುಮ್ರಾ ಅವರನ್ನು ಸಮಾಧಾನ ಮಾಡಿದರು. ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಬಗ್ಗಿ ಹೊರನಡೆದರು. ತಂಡದ ಡಗೌಟ್ ನಲ್ಲಿ ಕುರ್ಚಿಮೇಲೆ ಕುಳಿತು ರೋಹಿತ್ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗುತ್ತಿದೆ.
ಅತ್ತ ವಿರಾಟ್ ಕೊಹ್ಲಿ ಕೂಡ ಟೋಪಿಯನ್ನು ಮುಖಕ್ಕೆ ಮುಚ್ಚಿಕೊಂಡು ಹೊರಕ್ಕೆ ನಡೆದರು.
Advertisement