ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡ 21 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಏಳು ರನ್ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಸದೀರ ಸಮರವಿಕ್ರಮ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 257 ರನ್ ಗಳಿಸಿತು. ಸಮರವಿಕ್ರಮ (93 ರನ್; 72ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮೆಂಡಿಸ್ (50 ರನ್; 73ಎಸೆತ; 6 ಬೌಂಡರಿ, 1 ಸಿಕ್ಸರ್) ಅವರು ಉತ್ತಮ ಬ್ಯಾಟಿಂಗ್ ಮಾಡಿದರು.
ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡ 48.1 ಓವರ್ಗಳಲ್ಲಿ 236 ರನ್ಗಳಿಗೆ ಆಲೌಟಾಯಿತು. ಬಾಂಗ್ಲಾದೇಶ ಪರ ತೌಹೀದ್ ಹೃದಯ್ (82 ರನ್; 97 ಎಸೆತ) ಹೊರತುಪಡಿಸಿ ಇತರ ಬ್ಯಾಟರ್ಗಳು ವಿಫಲರಾದರು. ಮುಷ್ಫಿಕುರ್ ರಹೀಂ 29, ಮೆಹದಿ ಹಸನ್ ಮಿರಾಜ್ 28ರನ್ ಗಳಿಸಿದರು. ಆ ಮೂಲಕ 21 ರನ್ ಗಳ ಸೋಲು ಕಂಡಿತು. ಶ್ರೀಲಂಕಾ ಪರ ಮಹೀಶ್ ತೀಕ್ಷಣ, ದಸುನ್ ಶನಕ ಮತ್ತು ಮತೀಶ ಪಥಿರಾಣ ತಲಾ 3 ವಿಕೆಟ್ ಕಬಳಿಸಿದರು.
ಟೂರ್ನಿಯಿಂದ ಹೊರಬಿದ್ದ ಬಾಂಗ್ಲಾ
ಈ ಪಂದ್ಯದ ಸೋಲಿನ ಮೂಲಕ ಬಾಂಗ್ಲಾದೇಶ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ಬಾಂಗ್ಲಾದೇಶ ತಂಡವು ಸತತ 2 ಸೋಲಿನಿಂದ ಒಂದು ಪಂದ್ಯ ಬಾಕಿ ಇರುವಂತೆ ಏಷ್ಯಾ ಕಪ್ 2023 ಟೂರ್ನಿಯಿಂದ ಹೊರಬಿದ್ದಿದೆ. ಇದು ಸೂಪರ್ 4 ರಲ್ಲಿ ಬಾಂಗ್ಲಾದೇಶಕ್ಕೆ ಸತತ ಎರಡನೇ ಸೋಲಾಗಿದೆ. ಏಷ್ಯಾ ಕಪ್ ಸೂಪರ್ 4 ರ ಮೊದಲ ಪಂದ್ಯದಲ್ಲಿ, ಬಾಂಗ್ಲಾದೇಶ ತಂಡವು ಪಾಕಿಸ್ತಾನದ ಕೈಯಲ್ಲಿ ಹೀನಾಯ ಸೋಲು ಅನುಭವಿಸಿತ್ತು.
ಮೊದಲ ಪಂದ್ಯದಲ್ಲಿ ಸೋತ ನಂತರ ಟೂರ್ನಿಯಲ್ಲಿ ಉಳಿಯಲು ಶ್ರೀಲಂಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಬ್ಯಾಟ್ಸ್ಮನ್ಗಳು ತಪ್ಪಾದ ಸಮಯದಲ್ಲಿ ಔಟ್ ಆದ ಕಾರಣ ತಂಡದ ಪಯಣ ಏಷ್ಯಾಕಪ್ನಲ್ಲಿ ಅಂತ್ಯಗೊಂಡಿದೆ.
Advertisement