
ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಹತ್ವದ ಪರಿಷ್ಕರಣೆಯಾಗುತ್ತಿದ್ದು, ತಂಡ ಸೇರಿಕೊಂಡಿರುವ ನಾಯಕ ರೋಹಿತ್ ಶರ್ಮಾ ತಂಡದ ಬ್ಯಾಟಿಂಗ್ ಆರ್ಡರ್ ನಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ.
ಹೌದು.. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್ಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.
2ನೇ ಪಂದ್ಯ ಶುಕ್ರವಾರ (ನಾಳೆ) ನಡೆಯಲಿದೆ. ಶುಕ್ರವಾರ ಅಡಿಲೇಡ್ ಓವಲ್ ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಆಡುವ 11ರ ಬಳಗದ ಕುರಿತು ನಾಯಕ ರೋಹಿತ್ ಶರ್ಮಾ ಮಹತ್ವದ ಸುಳಿವು ನೀಡಿದ್ದು, ಕನ್ನಡಿಗ ಕೆಎಸ್ ರಾಹುಲ್ ಗಾಗಿ ತಮ್ಮ ಬ್ಯಾಟಿಂಗ್ ಆರ್ಡರ್ ತ್ಯಾಗ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಕೆಎಲ್ ರಾಹುಲ್ ರನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಮುಂದುವರೆಸಲು ನಾಯಕ ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ.
ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದ್ದು, ಮೊದಲ ಪಂದ್ಯದಿಂದ ಹೊರಗುಳಿದಿದ್ದ ಇಬ್ಬರು ಸ್ಟಾರ್ ಆಟಗಾರರು ತಂಡಕ್ಕೆ ಮರಳಲಿದ್ದಾರೆ. ಎರಡನೇ ಮಗುವಿಗೆ ತಂದೆಯಾದ ರೋಹಿತ್ ಶರ್ಮಾ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದರು. ಇವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ಇದೀಗ ಎರಡನೇ ಟೆಸ್ಟ್ಗೆ ರೋಹಿತ್ ಶರ್ಮಾ ಮರಳಲಿದ್ದಾರೆ. ಅಂತೆಯೇ ಮತ್ತೊಬ್ಬ ಆಟಗಾರ ಶುಭಮನ್ ಗಿಲ್ ನೆಟ್ನಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದ ವೇಳೆ ಹೆಬ್ಬರಳು ಗಾಯಕ್ಕೆ ತುತ್ತಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಗಿಲ್ ಕೂಡ ಗುಣಮುಖರಾಗಿ 2ನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ.
ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿರುವ ಕೆಎಲ್ ರಾಹುಲ್
ಬ್ಯಾಟಿಂಗ್ ಆರ್ಡರ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, "ನಾನು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅನ್ನು ಮನೆಯಿಂದಲೇ ನೋಡುತ್ತಿದ್ದೆ. ಅವರು ಅದ್ಭುತವಾಗಿ ಆಡಿದರು. ಆದ್ದರಿಂದ ಅವರ ಸ್ಥಾನವನ್ನು ಬದಲಾಯಿಸುವ ಅಗತ್ಯವಿಲ್ಲ. ಕೆಎಲ್ ರಾಹುಲ್ ಆ ಸ್ಥಾನಕ್ಕೆ ಅರ್ಹರು ಎಂದು ಹೇಳಿದ್ದಾರೆ. ಆ ಮೂಲಕ ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದನ್ನು ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.
ಟಾಪ್ ಆರ್ಡರ್ ತ್ಯಾಗ ಮಾಡಿದ ರೋಹಿತ್ ಶರ್ಮಾ
ಡೇ-ನೈಟ್ ಟೆಸ್ಟ್ನಲ್ಲೂ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದು, ನಾನು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಈ ಮೂಲಕ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿರುವುದನ್ನು ಅವರು ಖಚಿತಪಡಿಸಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೆ, ರೋಹಿತ್ ಶರ್ಮಾ ಅಥವಾ ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು ಆಲ್ರೌಂಡರ್ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಬಹುದು. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಡಿಕ್ಕಲ್-ದ್ರುವ್ ಜುರೇಲ್ ಗೇಟ್ ಪಾಸ್
ಇನ್ನು ರೋಹಿತ್ ಮತ್ತು ಶುಭಮನ್ ಗಿಲ್ ಅನುಪಸ್ಥಿತಿಯಿಂದಾಗಿ ತಂಡಕ್ಕೆ ಯುವ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ದ್ರುವ್ ಜುರೇಲ್ ಅವರನ್ನು ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ, ಈ ಇಬ್ಬರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಜುರೇಲ್ ಮೊದಲ ಇನ್ನಿಂಗ್ಸ್ನಲ್ಲಿ 11ರನ್ಗಳಿಗೆ ನಿರ್ಗಮಿಸಿದ್ದರೇ, ಪಡಿಕ್ಕಲ್ ಖಾತೆ ತೆರೆಯದೇ ಶೂನ್ಯಕ್ಕೆ ನಿರ್ಗಮಿಸಿದ್ದರು.
ಎರಡನೇ ಇನ್ನಿಂಗ್ಸ್ನಲ್ಲಿ ಪಡಿಕ್ಕಲ್ 25 ರನ್ ಗಳಿಸಿದರೇ , ಜುರೇಲ್ ಕೇವಲ 1 ರನ್ ಗಳಿಸಿ ಎಲ್ಬಿ ಬಲೆಗೆ ಬಿದ್ದಿದ್ದರು. ಇದೀಗ ಎರಡನೇ ಟೆಸ್ಟ್ ನಿಂದ ಈ ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಡಲಾಗುತ್ತಿದ್ದು, ಈ ಇಬ್ಬರ ಸ್ಥಾನಕ್ಕೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ತಂಡಕ್ಕೆ ಮರಳಲ್ಲಿದ್ದಾರೆ.
Advertisement