ನವದೆಹಲಿ: ಚೆನ್ನೆ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಫಾರ್ಮ್ ನಲ್ಲಿದ್ದರೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಿದ ಸಿಎಸ್ ಕೆ ನಿರ್ಧಾರವನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ. ಹೌದು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಟಿ-20 ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.
19ನೇ ಓವರ್ನಲ್ಲಿ ಸಿಎಸ್ಕೆ ಪರ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಎಂಎಸ್ ಧೋನಿ ಎದುರಿಸಿದ ಮೊದಲ ಎಸೆತದಲ್ಲೇ ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಸ್ಲೋ ಯಾರ್ಕರ್ ಎದುರು ಕ್ಲೀನ್ ಬೌಲ್ಡ್ ಆದರು. ಐಪಿಎಲ್ 2024 ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿರುವ ಧೋನಿ ಮೊದಲ ಬಾರಿ ಗೋಲ್ಡನ್ ಡಕ್ಔಟ್ ಆದರು. ಧೋನಿ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಳುಹಿಸುವ ಬದಲು ಅಂತಿಮ ಓವರ್ ನಲ್ಲಿ ಆಡಲು ಕಳುಹಿಸಿದ ಹಿಂದಿನ ಕಾರ್ಯತಂತ್ರವನ್ನು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ.
"ನನಗೆ ಅರ್ಥವಾಗುತ್ತಿಲ್ಲ, ಅವರು ಉತ್ತಮ ಫಾರ್ಮ್ ನಲ್ಲಿದ್ದರೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ. ಮೊದಲ ಎಸೆತದಲ್ಲಿಯೇ ಔಟ್ ಆಗುತ್ತಾರೆ. 14ನೇ ಓವರ್ ನಲ್ಲಿ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಬರುತ್ತಾರೆ ಅಂದುಕೊಂಡಿದ್ದೆ. ಆಗ ಅವರು ಬಂದಿದ್ದರೆ ದೊಡ್ಡ ಪ್ರಭಾವ ಬೀರಬಹುದಿತ್ತು. ಅವರು ಯಾಕೆ ನಂಬರ್ 9ರಲ್ಲಿ ಬ್ಯಾಟಿಂಗ್ ಮಾಡಲು ಬಂದರು ಎಂಬುದು ಅರ್ಥವಾಗುತ್ತಿಲ್ಲ. ನಂಬರ್ 9ರಲ್ಲಿ ಧೋನಿ ಅವರಂತಹ ಬ್ಯಾಟರ್ ಬದಲಿಗೆ ಬೌಲರ್ ಕಳುಹಿಸಬೇಕು.
ಆ ನಿರ್ಧಾರದ ಹಿಂದಿನ ತಂತ್ರ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು ಎಂದು ಹರ್ಭಜನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಗೆಲುವಿಗೆ 168 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 139 ರನ್ ಗಳಿಸಿ ಸೋಲಿಗೆ ಶರಣಾಯಿತು. ಈ ಮೂಲಕ ಚೆನ್ನೈ 28 ರನ್ಗಳಿಂದ ಗೆಲುವು ಸಾಧಿಸಿತು.
Advertisement