
ನವದೆಹಲಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಮುನಾಫ್ ಪಟೇಲ್ ಅವರಿಗೆ ಬಿಸಿಸಿಐ ದಂಡ ವಿಧಿಸಿದೆ.
ಎರಡೂ ತಂಡಗಳು 188 ರನ್ ಗಳಿಸಿದ ಬಳಿಕ ಸೂಪರ್ ಓವರ್ ನಡೆಯಿತು. ಡಿಸಿ ತಂಡವು ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು.
'ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಇದಾಗಿದ್ದು, ಇದು ಆಟದ ಉತ್ಸಾಹಕ್ಕೆ ವಿರುದ್ಧವಾದ ನಡವಳಿಕೆಗೆ ಸಂಬಂಧಿಸಿದೆ. ಮುನಾಫ್ ಪಟೇಲ್ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಮ್ಯಾಚ್ ರೆಫರಿಯ ತೀರ್ಮಾನಕ್ಕೆ ಬದ್ಧರಾಗಿದ್ದಾರೆ' ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.
'ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಮುನಾಫ್ ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುನಾಫ್ ಅವರು ಯಾವ ಅಪರಾಧವನ್ನು ಮಾಡಿದ್ದಾರೆ ಎಂಬುದನ್ನು ನಿಖರವಾದ ಹೇಳಿಕೆಯಲ್ಲಿ ತಿಳಿಸಿಲ್ಲ. ಆದರೆ, ಟೀಂ ಇಂಡಿಯಾದ ಮಾಜಿ ವೇಗಿ ತನ್ನ ಸಂದೇಶವನ್ನು ಆಟಗಾರರಿಗೆ ತಿಳಿಸಲು ಇತರ ಆಟಗಾರನನ್ನು ಮೈದಾನಕ್ಕೆ ಕಳುಹಿಸಲು ಅನುಮತಿ ನೀಡದ ಕಾರಣ ಪಂದ್ಯದ ಅಧಿಕಾರಿಯೊಂದಿಗೆ ವಾದ ನಡೆಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ ಎನ್ನಲಾಗಿದೆ.
ಎಂಎಸ್ ಧೋನಿ ನೇತೃತ್ವದಲ್ಲಿ ಭಾರತದ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದ ಮುನಾಫ್ ಅವರನ್ನು ಕಳೆದ ವರ್ಷ ನವೆಂಬರ್ನಲ್ಲಿ ಜೇಮ್ಸ್ ಹೋಪ್ಸ್ ಬದಲಿಗೆ ಡಿಸಿ ಬೌಲಿಂಗ್ ಕೋಚ್ ಆಗಿ ನೇಮಿಸಲಾಯಿತು.
Advertisement