
ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ನಾಯಕ ಸಂಜು ಸ್ಯಾಮ್ಸನ್ ಅಲಭ್ಯರಾಗಲಿದ್ದಾರೆ. ಗಾಯದಿಂದ ಬಳಲುತ್ತಿರುವ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು retiring hurt ಆಗಿದ್ದರು.
'ಸ್ಯಾಮ್ಸನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆಯ್ದ ಆರ್ಆರ್ ವೈದ್ಯಕೀಯ ಸಿಬ್ಬಂದಿಯೊಂದಿಗೆ ತಂಡದ ತವರಿನಲ್ಲಿ (ಜೈಪುರ) ಉಳಿಯುತ್ತಾರೆ. ಹೀಗಾಗಿ, ಅವರು ಆರ್ಸಿಬಿ ವಿರುದ್ಧದ ಮುಂಬರುವ ಪಂದ್ಯಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುವುದಿಲ್ಲ. ತಂಡದ ಆಡಳಿತವು ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳಲಿದ್ದಾರೆ' ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ಆರ್ಆರ್ನ ನಾಯಕತ್ವವನ್ನು ಮುಂದುವರಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಸಮಯದಲ್ಲಿ ಸ್ಯಾಮ್ಸನ್ ಗಾಯಗೊಂಡಿದ್ದರು. ಸ್ಯಾಮ್ಸನ್ ಅಲಭ್ಯತೆಯ ವೇಳೆ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ನಾಯಕನಾಗಿ, ಪರಾಗ್ ನಾಲ್ಕು ಪಂದ್ಯಗಳಲ್ಲಿ 147.88 ಸ್ಟ್ರೈಕ್ ರೇಟ್ನಲ್ಲಿ 105 ರನ್ ಗಳಿಸಿದ್ದಾರೆ.
ಹೈದರಾಬಾದ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 37 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಸ್ಯಾಮ್ಸನ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಡಿಸಿ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ, 19 ಎಸೆತಗಳಲ್ಲಿ 31 ರನ್ ಗಳಿಸಿ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿದ್ದರು. ಸೂಪರ್ ಓವರ್ನಲ್ಲಿ ಅವರು ಬ್ಯಾಟಿಂಗ್ಗೆ ಮರಳಿರಲಿಲ್ಲ.
ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ತಂಡದಲ್ಲಿ ಅವಕಾಶ ಪಡೆದಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ಬೆಂಗಳೂರಿನಲ್ಲಿ ಮತ್ತೊಮ್ಮೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕನಾಗಿ ಆಡುವ ಸಾಧ್ಯತೆಯಿದೆ.
Advertisement