
ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ತವರಿನಿಂದ ಹೊರಗೆ ಆಡಿರುವ ಎಲ್ಲ ಐದು ಪಂದ್ಯಗಳನ್ನು ಗೆದ್ದಿದ್ದ ಆರ್ಸಿಬಿ ಆರನೇ ಪಂದ್ಯವನ್ನೂ ಕೂಡ ಗೆದ್ದುಕೊಂಡಿದೆ. ಕೃನಾಲ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಸೋಲೊಪ್ಪಿಕೊಂಡಿದೆ.
ತಮ್ಮ ಬ್ಯಾಟಿಂಗ್ ವಿಧಾನದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಮತ್ತು ಸ್ಟ್ರೈಕ್ ಅನ್ನು ರೊಟೇಟ್ ಮಾಡುವುದರ ಮೇಲೆ ಗಮನ ಹರಿಸುತ್ತೇನೆ ಎಂದರು. ಆರ್ಸಿಬಿ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ಗಳ ಬೆನ್ನಟ್ಟಿದ ಆರ್ಸಿಬಿ ಆರಂಭದಲ್ಲಿಯೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (ಔಟಾಗದೆ 73) 84 ಎಸೆತಗಳಲ್ಲಿ 119 ರನ್ಗಳ ಜೊತೆಯಾಟ ತಂಡದ ಗೆಲುವಿಗೆ ಕಾರಣವಾಯಿತು. 2016ರ ನಂತರ ಕ್ರುನಾಲ್ ಪಾಂಡ್ಯ ಅವರ ಮೊದಲ ಅರ್ಧಶತಕ ಇದಾಗಿದೆ. ಇನ್ನೂ 9 ಎಸೆತ (18.3 ಓವರ್ಗಳಲ್ಲಿ) ಬಾಕಿ ಇರುವಂತೆಯೇ ಆರ್ಸಿಬಿ ಗೆಲುವು ಸಾಧಿಸಿತು.
'ಪಿಚ್ ನೋಡಿದಾಗ ಇದು ಅತ್ಯುತ್ತಮ ಗೆಲುವಾಗಿದೆ. ನಾವು ಇಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇವೆ ಮತ್ತು ಅವುಗಳಿಗೆ ಹೋಲಿಸಿದರೆ ಈ ವಿಕೆಟ್ ವಿಭಿನ್ನವಾಗಿದೆ. ಚೇಸಿಂಗ್ ಇದ್ದಾಗಲೆಲ್ಲಾ, ನಾವು ಸರಿಯಾದ ಹಾದಿಯಲ್ಲಿದ್ದೇವೆಯೇ ಎಂದು ನಾನು ಡಗೌಟ್ನೊಂದಿಗೆ ಪರಿಶೀಲಿಸುತ್ತಲೇ ಇರುತ್ತೇನೆ' ಎಂದು ಆರೆಂಜ್ ಕ್ಯಾಪ್ ಪಡೆದ ಮಾಲೀಕರಾದ ಕೊಹ್ಲಿ ಗೆಲುವಿನ ನಂತರ ಹೇಳಿದರು.
'ನನ್ನ ಸಿಂಗಲ್ಸ್ ಮತ್ತು ಡಬಲ್ಸ್ ನಿಲ್ಲದಂತೆ ನೋಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಇದರಿಂದಾಗಿ ಆಟವು ನಿಶ್ಚಲವಾಗುವುದಿಲ್ಲ. ಜನರು ಪಾರ್ಟನರ್ಶಿಪ್ ಮಹತ್ವವನ್ನು ಮರೆಯುತ್ತಿದ್ದಾರೆ. ಪಾರ್ಟನರ್ಶಿಪ್ ಮತ್ತು ವೃತ್ತಿಪರತೆಯ ಮೂಲಕ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಲು ಈ ಪಂದ್ಯಾವಳಿಯಲ್ಲಿ ಅದು ಮುನ್ನೆಲೆಗೆ ಬರುತ್ತಿದೆ' ಎಂದರು.
'ಕೃನಾಲ್ ಅತ್ಯುತ್ತಮ ಆಟವಾಡಿದರು. ಬ್ಯಾಟಿಂಗ್ ವೇಳೆ ನಾವು ಉತ್ತಮವಾಗಿ ಮಾತುಕತೆ ನಡೆಸಿದ್ದೇವೆ. ಸುಂದರವಾಗಿ ಸಂವಹನ ನಡೆಸಿದ್ದೇವೆ. ನಾನು ಸ್ಥಿರವಾಗಿ ಆಡುವಂತೆ (ಕ್ರೀಸ್ನಲ್ಲಿ ಉಳಿಯುವಂತೆ) ಕೃನಾಲ್ ನನಗೆ ಸಲಹೆ ನೀಡಿದರು. ಕ್ರುನಾಲ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು' ಎಂದು ಕೊಹ್ಲಿ ಹೇಳಿದರು.
ಕೊಹ್ಲಿ ಔಟಾದ ನಂತರ, ಟಿಮ್ ಡೇವಿಡ್ ಕೇವಲ ಐದು ಎಸೆತಗಳಲ್ಲಿ 19 ರನ್ ಗಳಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.
ಫಿನಿಷರ್ಗಳ ಬಗ್ಗೆ ಮಾತನಾಡಿದ ಕೊಹ್ಲಿ, 'ಟಿಮ್ ಡೇವಿಡ್ನಲ್ಲಿ ನಮಗೆ ಹೆಚ್ಚುವರಿ ಶಕ್ತಿ ಇದೆ. ಜಿತೇಶ್ ಕೂಡ ಇದ್ದಾರೆ. ಇನಿಂಗ್ಸ್ನ ಹಿಂಭಾಗದಲ್ಲಿರುವ ಆ ಫೈರ್ಪವರ್ ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಮತ್ತು ಈಗ ರೊಮಾರಿಯೊ ಕೂಡ ಇದ್ದಾರೆ. ಹೇಜಲ್ವುಡ್ ಮತ್ತು ಭುವಿ ವಿಶ್ವ ದರ್ಜೆಯ ಬೌಲರ್ಗಳು. ಹೇಜಲ್ವುಡ್ ಅವರಿಗೆ ಪರ್ಪಲ್ ಕ್ಯಾಪ್ ಬಂದಿರುವುದು ಇದೇ ಕಾರಣಕ್ಕೆ. ಕೃನಾಲ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಸುಯಾಶ್ ವಿಕೆಟ್ ಪಡೆಯದಿದ್ದರೂ, ನಮಗೆ ನೆರವಾದರು. ನಮ್ಮ ಸ್ಪಿನ್ನರ್ಗಳು ಮಧ್ಯಮ ಓವರ್ಗಳಲ್ಲಿ ದಾಳಿ ಮಾಡುತ್ತಲೇ ಇರುತ್ತಾರೆ' ಎಂದರು.
Advertisement