
ಭಾನುವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ (MI) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆಯಲ್ಲಿ ನಡೆದ ಈ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಮತ್ತು ಪುತ್ರ ಅಂಗದ್ ಹಾಜರಿದ್ದರು. ಬುಮ್ರಾ ಈ ಪಂದ್ಯದಲ್ಲಿ 4 ವಿಕೆಟ್ಗಳನ್ನು ಕಬಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬುಮ್ರಾ ವಿಕೆಟ್ ಕಬಳಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿನ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸುವ ವೇಳೆ ಸಂಜನಾ ಮತ್ತು ಅಂಗದ್ ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದರೆ ಬುಮ್ರಾ ಮಗ ಅಂಗದ್ ಮಾತ್ರ ಸಪ್ಪೆ ಮುಖ ಮಾಡಿಕೊಂಡು ಕುಳಿತಿದ್ದಾನೆ. ಈ ವಿಡಿಯೋಗೆ ಹಲವಾರು ಜನರು ಕಮೆಂಟ್ ಮಾಡಿದ್ದು, ಕೆಕೆಆರ್ ಆಲ್ರೌಂಡರ್ ಸುನೀಲ್ ನರೈನ್, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರಿಗೆ ಹೋಲಿಸಿದ್ದಾರೆ. ಮುಖದಲ್ಲಿ ಯಾವುದೇ ಭಾವನನೆಗಳಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಬುಮ್ರಾ ಮಗನಿಗೆ ಖಿನ್ನತೆ ಸಮಸ್ಯೆ ಇರಬಹುದು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಜನಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಮಗನನ್ನು 'ಮನರಂಜನೆಯ ವಿಷಯ'ವಾಗಿ ಪರಿವರ್ತಿಸಿದ್ದಕ್ಕಾಗಿ ಟ್ರೋಲ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ನಮ್ಮ ಮಗ ನಿಮ್ಮ ಮನರಂಜನೆಯ ವಸ್ತುವಲ್ಲ. ಇಂಟರ್ನೆಟ್ ಕೆಟ್ಟ ಸ್ಥಳವಾಗಿರುವುದರಿಂದಲೇ ಅಂಗದ್ನನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡಲು ಜಸ್ಪ್ರಿತ್ ಮತ್ತು ನಾನು ನಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಅಪಾರ ಅಭಿಮಾನಿಗಳು ಮತ್ತು ಕ್ಯಾಮೆರಾಗಳಿಂದ ತುಂಬಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಗುವನ್ನು ಕರೆತರುವುದರ ಪರಿಣಾಮಗಳು ಏನೆಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ದಯವಿಟ್ಟು ನೀವು ಅರ್ಥಮಾಡಿಕೊಳ್ಳಿ, ನಾನು ಮತ್ತು ಅಂಗದ್ ಜಸ್ಪ್ರಿತ್ಗೆ ಬೆಂಬಲ ನೀಡಲು ಬಂದಿದ್ದೆವು ಹೊರತು ಬೇರೇನೂ ಅಲ್ಲ' ಎಂದಿದ್ದಾರೆ.
ಮುಂದುವರಿದು, ನಮ್ಮ ಮಗ ವೈರಲ್ ವಿಷಯ ಅಥವಾ ರಾಷ್ಟ್ರೀಯ ಸುದ್ದಿಯಾಗುವುದರಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ಕೀಬೋರ್ಡ್ ಯೋಧರು ಅನಗತ್ಯವಾಗಿ ಅಂಗದ್ ಯಾರು, ಅವನ ಸಮಸ್ಯೆ ಏನು, ಅವನ ವ್ಯಕ್ತಿತ್ವ ಏನು ಎಂಬುದನ್ನು 3 ಸೆಕೆಂಡುಗಳ ದೃಶ್ಯಗಳಿಂದ ನಿರ್ಧರಿಸುತ್ತಾರೆ. ಅವನಿಗೆ ಈಗ ಒಂದೂವರೆ ವರ್ಷ. ಮಗುವನ್ನು ಉಲ್ಲೇಖಿಸಿ ಆಘಾತ ಮತ್ತು ಖಿನ್ನತೆಯಂತಹ ಪದಗಳನ್ನು ಬಳಸುವುದು ನಾವು ಒಂದು ಸಮುದಾಯವಾಗಿ ಎತ್ತ ಸಾಗುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಇದು ನಿಜವಾಗಿಯೂ ದುಃಖಕರವಾಗಿದೆ' ಎಂದಿದ್ದಾರೆ.
'ನಮ್ಮ ಮಗನ ಬಗ್ಗೆ ನಿಮಗೆ ಏನೂ ತಿಳಿದಿಲ್ಲ, ನಮ್ಮ ಜೀವನದ ಬಗ್ಗೆ ಏನೂ ತಿಳಿದಿಲ್ಲ ಮತ್ತು ನೀವು ಆನ್ಲೈನ್ನಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು ನಿಜವಾಗಿರಲಿ ಎಂದು ನಾನು ವಿನಂತಿಸುತ್ತೇನೆ. ಇಂದಿನ ಜಗತ್ತಿನಲ್ಲಿ ಸ್ವಲ್ಪ ಪ್ರಾಮಾಣಿಕತೆ ಮತ್ತು ಸ್ವಲ್ಪ ದಯೆ ಕೂಡ ಇಲ್ಲವಾಗುತ್ತಿದೆ' ಎಂದು ಸಂಜನಾ ಗಣೇಶನ್ ಬರೆದಿದ್ದಾರೆ.
Advertisement