IPL 2025: 14ನೇ ವಯಸ್ಸಿನಲ್ಲಿ ದಾಖಲೆ ಬರೆದ ವೈಭವ್ ಸೂರ್ಯವಂಶಿ; ನಗದು ಬಹುಮಾನ ಘೋಷಿಸಿದ ಬಿಹಾರ ಸಿಎಂ

ಆರ್‌ಆರ್ ತಂಡ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್ ಸೂರ್ಯವಂಶಿ ಅವರನ್ನು ನಿತೀಶ್ ಕುಮಾರ್ ಅಭಿನಂದಿಸಿದ್ದಾರೆ.
ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Updated on

ಸೋಮವಾರ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ 14 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 10 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದಾರೆ. 35 ಎಸೆತಗಳಲ್ಲಿ ಶತಕ ಬಾರಿಸಿದ್ದು, ಇದು ಭಾರತೀಯ ಕ್ರಿಕೆಟಿಗನೊಬ್ಬ ಐಪಿಎಲ್‌ನಲ್ಲಿ ಸಿಡಿಸಿದ ವೇಗದ ಶತಕ ಇದಾಗಿದೆ. ಈ ಆವೃತ್ತಿಯಲ್ಲಿ ಆಡಿದ ಮೂರನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಗುಜರಾತ್ ಟೈಟಾನ್ಸ್ ಬೌಲರ್‌ಗಳ ನೀರಿಳಿಸಿದರು.

14 ವರ್ಷ 32 ದಿನಗಳ ವಯಸ್ಸಿನಲ್ಲಿ, ಬಿಹಾರದವರಾದ ವೈಭವ್ ಸೂರ್ಯವಂಶಿ ಈಗ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸೂರ್ಯವಂಶಿ ಅವರು ಕೊನೆಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಯಾರ್ಕರ್‌ಗೆ ವಿಕೆಟ್ ಒಪ್ಪಿಸಿದರು.

ಟೂರ್ನಿಯ ಆರಂಭದಿಂದ ಎಡವಿದ್ದ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆರ್‌ಆರ್ ತಂಡ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್ ಸೂರ್ಯವಂಶಿ ಅವರನ್ನು ನಿತೀಶ್ ಕುಮಾರ್ ಅಭಿನಂದಿಸಿದ್ದು, ಮಂಗಳವಾರ ರಾಜ್ಯ ಸರ್ಕಾರದಿಂದ 10 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ.

'ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ) ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಿಹಾರದ ವೈಭವ್ ಸೂರ್ಯವಂಶಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಅವರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಫಲವಾಗಿ ಅವರು ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆಯಾಗಿದ್ದಾರೆ. ಎಲ್ಲರೂ ಅವರ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು 2024ರಲ್ಲಿ ವೈಭವ್ ಸೂರ್ಯವಂಶಿ ಮತ್ತು ಅವರ ತಂದೆಯನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ, ನಾನು ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದೆ' ಎಂದು ನಿತೀಶ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ವೈಭವ್ ಸೂರ್ಯವಂಶಿ
IPL 2025: 'ಅದೃಷ್ಟದಿಂದಲೇ ವೈಭವ್ ಸೂರ್ಯವಂಶಿ ಶತಕ ಬಾರಿಸಿದ್ದಾರೆ' ಎಂದ ಶುಭಮನ್ ಗಿಲ್ ವಿರುದ್ಧ ಟೀಕೆ

'ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ನಾನು ಅವರನ್ನು ಫೋನ್ ಮೂಲಕ ಅಭಿನಂದಿಸಿದೆ. ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ರಾಜ್ಯ ಸರ್ಕಾರವು 10 ಲಕ್ಷ ರೂ. ಬಹುಮಾನದ ಹಣವನ್ನು ನೀಡಲಿದೆ. ವೈಭವ್ ಭವಿಷ್ಯದಲ್ಲಿ ಭಾರತೀಯ ತಂಡಕ್ಕಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ನಾನು ಬಯಸುತ್ತೇನೆ' ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ 14 ವರ್ಷದ ಬಾಲಕನ ಸ್ಮರಣೀಯ ಪ್ರದರ್ಶನವನ್ನು ಶ್ಲಾಘಿಸಿ ಸುದ್ದಿಗಾರರೊಂದಿಗೆ ಮಾತನಾಡಿ, 'ಪಕ್ಷದ ಪರವಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರು ಒಬ್ಬ ಯುವ ಪ್ರತಿಭೆ ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟು ಸುಂದರ ಆರಂಭ ಮಾಡಿದ್ದಾರೆ. ಅವರ ಭವಿಷ್ಯವು ತುಂಬಾ ಉಜ್ವಲವಾಗಿದೆ' ಎಂದು ಹೇಳಿದರು.

ವೈಭವ್ ಸೂರ್ಯವಂಶಿ
IPL 2025: ವೈಭವ್ ಸೂರ್ಯವಂಶಿ ಕ್ರಿಕೆಟ್ ಕನಸಿಗೆ ಕೃಷಿ ಭೂಮಿಯನ್ನೇ ಮಾರಿದ ತಂದೆ; ವಿಶ್ವ ದಾಖಲೆ ಬರೆದ ಮಗ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com